ಚಂದ್ರಬಾಬು ನಾಯ್ಡು ಅವರಂತ ವ್ಯಕ್ತಿಯನ್ನು ಸಾರ್ವಜನಿಕವಾಗಿ ಶೂಟ್ ಮಾಡಬೇಕು: ಜಗನ್ ಮೋಹನ್ ರೆಡ್ಡಿ

ಆಂಧ್ರಪ್ರದೇಶದ ನಾಂಡ್ಯಾಲ್ ವಿಧಾನಸಭೆ ಕ್ಷೇತ್ರದ ಉಪ ಚುನಾವಣಾ ಕಣ ರಂಗೇರಿದೆ.ವೈಎಸ್ ಆರ್ ಸಿ ಮುಖ್ಯಸ್ಥ ಜಗನ್ ಮೋಹನ್ ರೆಡ್ಡಿ, ಸಿಎಂ ಚಂದ್ರಬಾಬು ನಾಯ್ಡು ...
ಜಗನ್ ಮೋಹನ್ ರೆಡ್ಡಿ
ಜಗನ್ ಮೋಹನ್ ರೆಡ್ಡಿ
ನಾಂಡ್ಯಾಲ್: ಆಂಧ್ರಪ್ರದೇಶದ ನಾಂಡ್ಯಾಲ್ ವಿಧಾನಸಭೆ ಕ್ಷೇತ್ರದ ಉಪ ಚುನಾವಣಾ ಕಣ ರಂಗೇರಿದೆ.ವೈಎಸ್ ಆರ್ ಸಿ ಮುಖ್ಯಸ್ಥ ಜಗನ್ ಮೋಹನ್ ರೆಡ್ಡಿ, ಸಿಎಂ ಚಂದ್ರಬಾಬು ನಾಯ್ಡು ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಸಾರ್ವಜನಿಕ ಸಮಾರಂಭ ಉದ್ದೇಶಿಸಿ ಮಾತನಾಡಿದ ಜಗನ್, ಎರಡು ಗುಣ, ಡಬಲ್ ಡಿಲೀಂಗ್ ಹಾಗೂ ವಿಶ್ವಾಸಘಾತುಕತನ ಹೊಂದಿರುವ ಚಂದ್ರಬಾಬು ನಾಯ್ಡು ಅವರಂತ ವ್ಯಕ್ತಿಯನ್ನು ಸಾರ್ವಜನಿಕವಾಗಿ ಶೂಟ್ ಮಾಡಬೇಕು ಎಂದು ವೀರಾವೇಶದಿಂದ ನುಡಿದಿದ್ದಾರೆ.
ಭಾಷಣದುದ್ದಕ್ಕೂ ಜಗನ್ ನಾಯ್ಡು ವಿರುದ್ಧ ವಾಗ್ದಾಳಿ ನಡೆಸಿದರು, ಜೊತೆಗೆ ನಾಯ್ಡು ಅವರ ಆಷಾಢಭೂತಿತನದ ಸೋಗನ್ನು ಕಳಚಲು ಯತ್ನಿಸುತ್ತಿರುವುದಾಗಿ ತಿಳಿಸಿದರು.
ಚಂದ್ರಬಾಬು ನಾಯ್ಡು ತಮ್ಮ  ಮಾವ ಎನ್ ಟಿಆರ್ ಸಾವಿಗೆ ಕಾರಣರಾಗಿದ್ದಾರೆ. ಆದರೆ ಎನ್ ಟಿ ಆರ್ ಅವರ ಭಾವಚಿತ್ರವನ್ನು ಚುನಾವಣಾ ಪ್ರಚಾರಕ್ಕೆ ಬಳಸುವಾಗ ಅದರ ಬಗ್ಗೆ ಯೋಚನೆ ಮಾಡುವುದಿಲ್ಲ ಎಂದು ದೂರಿರುವ ಜಗನ್ ನ್ಯಾಂಡಾಲ್ ಚುನಾವಣೆಗೆ  ಇದ್ದಕಿದ್ದಂತೆ ಪವನ್ ಕಲ್ಯಾಣ್ ಅವರನ್ನು ಕರೆ ತಂದಿದ್ದಾರೆ ಎಂದು ಹೇಳಿದ್ದಾರೆ.
ವೈಎಸ್ ಆರ್ ಸಿ ಅಭ್ಯರ್ಥಿ  ಶಿಲ್ಪಾ ಮೋಹನ್ ರೆಡ್ಡಿ ಅವರ ಗೆಲುವನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ವಿಶ್ವಾಸ ವ್ಯಕ್ತ ಪಡಿಸಿರುವ ಜಗನ್, ನಾಯ್ಡು ಮತ್ತು ಅವರ ಪುತ್ರ ಲೋಕೇಶ್ ಸುಳ್ಳು ಭರವಸೆಗಳನ್ನು ನೀಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಒಂದು ವೇಳೆ ನಾವು ಸ್ಪರ್ಧಾ ಕಣದಲ್ಲಿರದೇ ಇದ್ದರೇ ಚಂದ್ರಬಾಬು ನಾಯ್ಡು ನ್ಯಾಂಡಾಲ್ ಕ್ಷೇತ್ರಕ್ಕೆ ಒಂದು ರೂಪಾಯಿಯನ್ನಾದರೂ ನೀಡುತ್ತಿದ್ದರೇ ಎಂದು ಪ್ರಶ್ನಿಸಿದ್ದಾರೆ.
ಚುನಾವಣೆ ವೇಳೆ ಮಾತ್ರ ನಾಯ್ಡು ಅವರಿಗೆ ಹಿಂದುಳಿದ ಸಮುದಾಯ ನೆನಪಿಗೆ ಬರುತ್ತದೆ. ರೈತರನ್ನು ಮಹಿಳೆಯರನ್ನು ಹಾಗೂ ನಿರುದ್ಯೋಗಿಗಳನ್ನು ಸರ್ಕಾರ ನಿರ್ಲಕ್ಷ್ಯಿಸುತ್ತಿದೆ ಇದು ನಾಯ್ಡು ಅವರ ನೈಜ ಮುಖ ಎಂಜು ಜಗನ್ ಮೋಹನ್ ದೂರಿದ್ದಾರೆ. 
ಉಪ ಚುನಾವಣೆ ನ್ಯಾಯ ಮತ್ತು ಅನ್ಯಾಯದ ನಡುವಿನ ಹೋರಾಟವಾಗಿದೆ, ನಾಯ್ಡು ಅವರ ಕೌರವರ ಸೇನೆ ವಿರುದ್ದ ಜನ ಹೋರಾಟ ನಡೆಸುತ್ತಾರೆ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com