ನವದೆಹಲಿ: ಮರಣ ಪ್ರಮಾಣ ಪತ್ರಕ್ಕೆ ಆಧಾರ್ ಕಡ್ಡಾಯ ವಿಚಾರ ವ್ಯಾಪಕ ಸುದ್ದಿಗೆ ಗ್ರಾಸವಾಗಿರುವ ಬೆನ್ನಲ್ಲೇ ರೈಲ್ವೇ ಟಿಕೆಟ್ ಕಾಯ್ದಿರಿಸಲು ಆಧಾರ್ ಕಾರ್ಡ್ ಕಡ್ಡಾಯವಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಿದೆ.
ಈ ಬಗ್ಗೆ ರಾಜ್ಯಸಭೆಯಲ್ಲಿ ಇಂದು ಸ್ಪಷ್ಟನೆ ನೀಡಿದ ಕೇಂದ್ರ ರೈಲ್ವೇ ಖಾತೆ ರಾಜ್ಯ ಸಚಿವ ರಾಜೆನ್ ಗೋಹೈನ್ ಅವರು, ರೈಲ್ವೇ ಟಿಕೆಟ್ ಕಾಯ್ದಿರಿಸಲು ಆಧಾರ್ ಕಾರ್ಡನ್ನು ಕಡ್ಡಾಯಗೊಳಿಸುವ ಯಾವುದೇ ಪ್ರಸ್ತಾವನೆ ಇಲ್ಲ. ಹಿರಿಯ ನಾಗರೀಕರಿಗೆ ಟಿಕೆಟ್ ನಲ್ಲಿ ರಿಯಾಯಿತಿ ನೀಡುವಾಗ ಐಚ್ಚಿಕ ಆಧಾರದ ಮೇಲೆ ಆಧಾರ್ ಕಾರ್ಡನ್ನು ಪರಿಚಯಿಸಲಾಗುತ್ತದೆಯ ಅಂದರೆ ಹಿರಿಯ ನಾಗರಿಕರು ತಮ್ಮ ವಯಸ್ಸನ್ನು ದೃಢೀಕರಿಸಲು ನೀಡುವ ಗುರುತಿನ ಚೀಟಿಗಳಲ್ಲಿ ಆಧಾರ್ ಕಾರ್ಡ್ ಅನ್ನು ಕೂಡ ಸೇರಿಸಲಾಗುತ್ತದೆ. ಆದರೆ ಆಧಾರ್ ಐಚ್ಛಿಕ ಗುರುತಿನ ಚೀಟಿಯಾಗಿರುತ್ತದಯೇ ಹೊರತು ಕಡ್ಡಾಯವಲ್ಲ ಎಂದು ಹೇಳಿದ್ದಾರೆ.
ಮರಣಪತ್ರಕ್ಕೆ ಆಧಾರ್ ಕಾರ್ಡನ್ನು ಕಡ್ಡಾಯಗೊಳಿಸಿರುವ ಹಿನ್ನಲೆಯಲ್ಲಿ ರೈಲ್ವೇ ಟಿಕೆಟ್ ಗಳಿಗೂ ಆಧಾರ್ ಕಡ್ಡಾಯವಾಗುತ್ತದೆ ಎಂಬ ಸುದ್ದಿ ವ್ಯಾಪಕ ಚರ್ಚೆಗೆ ಕಾರಣವಾಗಿತ್ತು.
Advertisement