ಶ್ರೀನಗರ: 40 ದಿನಗಳ ಪವಿತ್ರ ಅಮರನಾಥ್ ಯಾತ್ರೆ ಅಂತ್ಯಗೊಂಡಿದ್ದು, ಈ ಬಾರಿ ಉಗ್ರ ದಾಳಿ ಹೊರತಾಗಿಯೂ ಅಮರನಾಥ್ ಯಾತ್ರಾರ್ಥಿಗಳ ಸಂಖ್ಯೆಯಲ್ಲಿ ಗಣನೀಯವಾಗಿ ಹೆಚ್ಚಳವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಜಮ್ಮು ಮತ್ತು ಕಾಶ್ಮೀರ ಪ್ರವಾಸೋಧ್ಯಮ ಇಲಾಖೆ ಮೂಲಗಳ ಪ್ರಕಾರ ಈ ಬಾರಿ ಕಳೆದ ಬಾರಿಗಿಂತಲೂ ಸುಮಾರು 40 ಸಾವಿರಕ್ಕೂ ಹೆತ್ತು ಯಾತ್ರಾರ್ಥಿಗಳು ಅಮರನಾಥನ ದರ್ಶನ ಪಡೆದಿದ್ದು, ಈ ಬಾರಿ ಒಟ್ಟು 2.60 ಲಕ್ಷ ಯಾತ್ರಾರ್ಥಿಗಳು ಆಗಮಿಸಿದ್ದರು ಎಂದು ಹೇಳಿದ್ದಾರೆ. ಕಳೆದ ಬಾರಿ ಅಂದರೆ 2016ನೇ ಸಾಲಿನಲ್ಲಿ ಒಟ್ಟು 2.20 ಲಕ್ಷ ಮಂದಿ ಯಾತ್ರಾರ್ಥಿಗಳು ಪಾಲ್ಗೊಂಡಿದ್ದರು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಅಂತೆಯೇ ಅಮರನಾಥ್ ಯಾತ್ರೆ ವೇಳೆ ಸಾವನ್ನಪ್ಪಿದವರ ಸಂಖೆಯಲ್ಲೂ ಕೂಡ ಗಣನೀಯ ಏರಿಕೆಯಾಗಿದ್ದು, ಈ ಬಾರಿ ವಿವಿಧ ಪ್ರಕರಣಗಳಲ್ಲಿ ಒಟ್ಟು 24 ಮಂದಿ ಸಾವನ್ನಪ್ಪಿದ್ದಾರೆ. ಈ ಪೈಕಿ ಅಮರನಾಥ್ ಯಾತ್ರಾರ್ಥಿಗಳ ಮೇಲೆ ನಡೆದ ಉಗ್ರ ದಾಳಿ ಕೂಡ ಸೇರಿದ್ದು, ಉಗ್ರದಾಳಿಯಲ್ಲಿ 8 ಯಾತ್ರಾರ್ಥಿಗಳು ಸಾವನ್ನಪ್ಪಿ 21 ಮಂದಿ ಗಾಯಗೊಂಡಿದ್ದರು. ಇದಲ್ಲದೆ ಅಮರನಾಥ್ ಯಾತ್ರೆ ವೇಳೆ ವಿವಿಧೆಡೆ ನಡೆದ ಅಪಘಾತಗಳಲ್ಲಿ 16 ಮಂದಿ ಸಾವನ್ನಪ್ಪಿದ್ದಾರೆ. ಅಂತೆಯೇ ಓರ್ವ ಯಾತ್ರಾರ್ಥಿ ಯಾತ್ರೆ ಸಂದರ್ಭದಲ್ಲಿ ಹೃದಯಾಘಾತಕ್ಕೊಳಗಾಗಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
ಕಳೆದ ಜೂನ್ 29ರಂದು ಬಾಲ್ಟಾಲ್ ಮತ್ತು ಪೆಹಲ್ ಗಾಮ್ ಮಾರ್ಗಗಳ ಮೂಲಕ ಪವಿತ್ರ ಯಾತ್ರೆ ಆರಂಭಗೊಂಡಿತ್ತು. ರಕ್ಷ ಬಂಧನದ ಹಿಂದಿನ ದಿನಕ್ಕೆ ಯಾತ್ರೆ ಮುಕ್ತಾಯವಾಗುತ್ತದೆ. ಇಂದು ಅಮರನಾಥ್ ಗುಹೆಯಲ್ಲಿ ಅಂತಿಮ ಪೂಜಾ ಕೈಂಕರ್ಯ ನಡೆಸಲಾಗಿ, ಆಗಸ್ಟ್ 9ರಂದು ಚ್ಚಾರಿ ಮುಬಾರಕ್ ಎನ್ನುವ ಪೂಜೆಯನ್ನು ಲಡ್ಡೇರಿ ನದಿ ತಟದಲ್ಲಿ ನೆರವೇರಿಸಲಾಗುತ್ತದೆ. ಅದರೊಂದಿಗೆ 2017ನೇ ಸಾಲಿನ ಅಮರನಾಥ ಯಾತ್ರೆ ಮುಕ್ತಾಯವಾಗುತ್ತದೆ.
Advertisement