ನವದೆಹಲಿ: ಅಖಿಲ ಭಾರತ ಕಾಂಗ್ರೆಸ್ ಸಮಿತಿ ನಾಯಕತ್ವ ಶೀಘ್ರವೇ ಬದಲಾಗಲಿದೆ ಎಂಬ ಮಹತ್ವದ ಸುಳಿವನ್ನು ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ನೀಡಿದ್ದಾರೆ.
ಪ್ರಿಯಾಂಕಾ ವಾದ್ರಾ ಅವರನ್ನು ಕಾಂಗ್ರೆಸ್ ನೂತನ ಕಾರ್ಯಾದ್ಯಕ್ಷೆಯಾಗಿ ಶೀಘ್ರವೇ ನೇಮಕ ಮಾಡಲಾಗುತ್ತದೆ ಎಂಬ ಮಾತುಗಳು ಕೇಳಿಬರುತ್ತಿವೆ.
75ನೇ ಕ್ವಿಟ್ ಇಂಡಿಯಾ ಚಳವಳಿ ಸಮಾವೇಶದ ಬಗ್ಗೆ ಆಗಸ್ಟ್ 8 ರಂದು ನಡೆದ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಸೇರಿದಂತೆ ಹಲವರು ಪ್ರಿಯಾಂಕಾ ವಾದ್ರಾ ಅವರನ್ನು ಪಕ್ಷದ ಅಧ್ಯಕ್ಷರನ್ನಾಗಿ ನೇಮಿಸಬೇಕೆಂದು ಒತ್ತಾಯಿಸಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.
ಪಕ್ಷದ ಭವಿಷ್ಯಕ್ಕಾಗಿ ಇನ್ನೂ ಒಂದತಿಂಗಳಲ್ಲಿ ಅಥವಾ ಅದಕ್ಕೂ ಮುನ್ನವೇ ಅಂತಿಮ ನಿರ್ಧಾರ ಕೈಗೊಳ್ಳುವ ಸಾಧ್ಯತೆಯಿದೆ. ಇದು ಸಾಮಾನ್ಯವಾದ ಪ್ರಶ್ನೆಯಲ್ಲಿ, ಅವರ ಮನಸ್ಸಿನಲ್ಲಿ ಸ್ಪಷ್ಟ ನಿರ್ಧಾರವಿದೆ. ಅವರಿಗೆ ಸಾಕಷ್ಟು ಅರ್ಹತೆಯಿದೆ ಎಂದು ಕಾರ್ಯಕಾರಿ ಸಮಿತಿ ಸದಸ್ಯರೊಬ್ಬರು ಹೇಳಿದ್ದಾರೆಂದು ವರದಿಯಾಗಿದೆ.
ಆದರೆ ಈ ವರದಿಯನ್ನು ಪ್ರಿಯಾಂಕಾ ಆಪ್ತ ಕಾರ್ಯದರ್ಶಿ ನಿರಾಕರಿಸಿದ್ದಾರೆ, ಅಂಥಹ ಯಾವುದೇ ನಿರ್ಧಾರಗಳನ್ನು ತೆಗೆದುಕೊಂಡಿಲ್ಲ ಎಂದು ಪಿ ಸಹಾಯ್ ಹೇಳಿದ್ದಾರೆ.
ಕಳೆದ ಹಲವು ವರ್ಷಗಳಿಂದ ಪ್ರಿಯಾಂಕಾ ಗಾಂಧಿ ಅವರಿಗೆ ಪಕ್ಷದಲ್ಲಿ ಪ್ರಮುಖ ಹುದ್ದೆ ನೀಡಬೇಕೆಂಬ ಮಾತುಗಳು ಕೇಳಿಬರುತ್ತಿವೆ. ಆದರೆ ಗಾಂಧಿ ಕುಟುಂಬ ಈ ವಿಷಯವನ್ನು ಪಕ್ಕಕ್ಕಿಡುತ್ತಲೇ ಬಂದಿದೆ. ಪ್ರಿಯಾಂಕಾ ರಾಜಕೀಯವಾಗಿ ತಮ್ಮನ್ನು ಸ್ವತಃ ತಾವೇ ದೂರ ಇಡುತ್ತಾ ಬಂದಿದ್ದಾರೆ.
ಆದರೆ ಮುಂದಿನ ಲೋಕಸಭೆ ಚುನಾವಣೆ ವೇಳೆಗೆ ಪಕ್ಷದ ಎಲ್ಲಾ ವ್ಯವಹಾರಗಳನ್ನು ನೋಡಿಕೊಳ್ಳುವಂತ ಯುವ ಹಾಗೂ ಹೊಸಬರಿಗೆ ಜವಾಬ್ದಾರಿ ನೀಡಲಾಗುವುದು ಎಂದು ಸೋನಿಯಾ ಗಾಂಧಿ ತಮ್ಮ ಕೆಲವು ಆಪ್ತರ ಬಳಿ ಹೇಳಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಮುಂದಿನ ಕಾಂಗ್ರೆಸ್ ಅಧ್ಯಕ್ಷ ಎಂದಲೇ ಬಿಂಬಿತವಾಗಿರುವ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ವೈರಲ್ ಫೀವರ್ ಹಿನ್ನೆಲೆಯಲ್ಲಿ ಕಾಂಗ್ರೆಸ್ ಸಭೆಗೆ ಹಾಜರಾಗಿರಲಿಲ್ಲ.