ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಪ್ರತ್ಯೇಕತಾವಾದಿ ಮಿರ್ವಾಯಿಜ್ ಉಮರ್ ಫರೂಖ್ ರಂತಹ ಜನರಿಂದ ಕಾಶ್ಮೀರದಲ್ಲಿ ಪರಿಸ್ಥಿತಿ ಹದಗೆಡುತ್ತಿದೆ ಎಂದು ಕಾಂಗ್ರೆಸ್ ಶನಿವಾರ ಹೇಳಿದೆ.
ನಿನ್ನೆಯಷ್ಟೇ ಹೇಳಿಕೆ ನೀಡಿದ್ದ ಮಿರ್ವಾಯಿಜ್ ಅವರು, ಕಾಶ್ಮೀರದಲ್ಲಿ ಪ್ರತೀನಿತ್ಯ ಒಬ್ಬೊಬ್ಬ ವಿದ್ಯಾವಂತ ಯುವಕನನ್ನು ಹತ್ಯೆ ಮಾಡಲಾಗುತ್ತಿದೆ. ಎಲ್ಲರನ್ನೂ ಒಟ್ಟಿಗೆ ಹತ್ಯೆ ಮಾಡಿಬಿಟ್ಟರೆ ಕಾಶ್ಮೀರ ಸಮಸ್ಯೆಯನ್ನು ಪರಿಹಾರಗೊಳ್ಳುತ್ತದೆ ಎಂಬ ಮಾತುಗಳು ಕೂಡ ಕೇಳಿ ಬರುತ್ತಿವೆ ಎಂದು ಹೇಳಿದ್ದರು.
ಮಿರ್ವಾಯಿಜ್ ಅವರ ಈ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ನಾಯಕ ಪಿ.ಸಿ. ಚಾಕೋ ಅವರು, ಮಿರ್ವಾಯಿಜ್'ರಂತಹ ಜನರಿಂದ ಕಾಶ್ಮೀರದಲ್ಲಿ ಪರಿಸ್ಥಿತಿ ಹದಗೆಡುತ್ತಿದೆ ಎಂದಿದ್ದಾರೆ.
ಪ್ರಚೋಜನೆಗಳು ಎಲ್ಲಿಂದೆ ಬರುತ್ತಿದವೆ ಎಂಬುದನ್ನು ನಾವು ನೋಡಬೇಕಿದೆ. ಮಿರ್ವಾಯಿಜ್ ರವರು ಈ ಪ್ರಶ್ನೆಗೆ ಉತ್ತರ ನೀಡಬೇಕಿದೆ. ಮಿರ್ವಾಯಿಜ್ ರಂತಹ ಪ್ರಚೋದನೆ ನೀಡುವ ಜನರು ಸೇನಾ ಪಡೆಗಳ ಮೇಲೆ ದಾಳಿ ಮಾಡಲು ಹಾಗೂ ದೇಶದ್ರೋಹದಂತ ನಿಲುವು ತೆಗೆದುಕೊಳ್ಳಲು ಪ್ರೇರೇಪಿಸುತ್ತಾರೆ. ಇಂತಹ ಜನರಿಂದಲೇ ಇಂದು ಕಾಶ್ಮೀರದ ಪರಿಸ್ಥಿತಿ ಹದಗೆಡಲು ಕಾರಣವಾಗಿದೆ ಎಂದು ತಿಳಿಸಿದ್ದಾರೆ.