ಚೆನ್ನೈ: ಜಯಲಲಿತಾ ಸಾವಿನ ನಂತರ ಎರಡು ಬಣಗಳಾಗಿ ಹೋಳಾಗಿದ್ದ ಎಐಎಡಿಎಂಕೆ ವಿಲೀನ ಸಂಬಂಧ ಇನ್ನು ಒಂದೆರು ದಿನಗಳಲ್ಲಿ ಧನಾತ್ಮಕ ಫಲಿತಾಂಶ ಹೋರಬೀಳಲಿದೆ ಎಂದು ಮಾಜಿ ಸಿಎಂ ಪನ್ನೀರ್ ಸೆಲ್ವಂ ಹೇಳಿದ್ದಾರೆ.
ಎಐಎಡಿಎಂಕೆ ಪರುತ್ಚಿ ತಲೈವಿ ಅಮ್ಮಾ ಮುಖಂಡರ ಭೇಟಿಯ ನಂತರ ಮಾತನಾಡಿದ ಪನ್ನೀರ್ ಸೆಲ್ವಂ, ಮಾತುಕತೆಗಳು ಸುಗಮವಾಗಿ ನಡೆದಿವೆ, ವಿಲೀನಕ್ಕೆ ಸಂಬಂಧಿಸಿದಂತೆ ಮುಖಂಡರ ಅಭಿಪ್ರಾಯಗಳನ್ನು ಸಂಗ್ರಹಿಸಲು ನಾಳೆ ಮಧುರೈಗೆ ತೆರಳಲಾಗುತ್ತಿದೆ. ಒಂದೆರಡು ದಿನಗಳಲ್ಲಿ ಉತ್ತಮ ಫಲಿತಾಂಶ ಹೊರಬೀಳಲಿದೆ ಎಂದು ತಿಳಿಸಿದ್ದಾರೆ.
ಇದೇ ವೇಳೆ ಸಿಎಂ ಕೆ, ಪಳನಿಸ್ವಾಮಿ ಎಂಜಿಆರ್ ಶತಮಾನೋತ್ಸವ ಸಮಾರಂಭದಲ್ಲಿ ಭಾಗವಹಿಸಲು ತಂಜಾವೂರಿನ ತಿರುವ್ವೂರ್ ಗೆ ತೆರಳಿದ್ದಾರೆ.
ನಿನ್ನೆ ರಾತ್ರಿ ನಡೆದ ಸಭೆಯಲ್ಲಿ ಒಮ್ಮತ ಮೂಡದ ಕಾರಣ ಬಹು ನಿರೀಕ್ಷಿತ ವಿಲೀನ ಪ್ರಕ್ರಿಯೆ ತಡವಾಗಿದೆ. ಪಳನಿಸ್ವಾಮಿ ಬಣದ ಶಾಸಕರಿಗೆ ಸಂಪುಟದಲ್ಲಿ ಸ್ಥಾನಮಾನ ನೀಡುವ ಕುರಿತು ಪಟ್ಟು ಹಿಡಿಯಲಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಇದೇ ವೇಳೆ ಎಐಎಡಿಎಂಕೆ ಯಿಂದ ನಿರ್ಲಕ್ಷ್ಯಕ್ಕೊಳಗಾಗಿರುವ ಪಕ್ಷದ ಪ್ರಧಾನ ಕಾರ್ಯದರ್ಶಿ ಟಿಟಿವಿ ದಿನಕರನ್ ಕೂಡ ತಮ್ಮ ಮನೆಯಲ್ಲಿ ಬೆಂಬಲಿಗರೊಂದಿಗೆ ಚರ್ಚೆ ನಡೆಸಿದ್ದಾರೆ.