ಮುಜಾಫರನಗರ: ಉತ್ತರ ಪ್ರದೇಶದ ಮುಜಾಫರನಗರದಲ್ಲಿ ಶನಿವಾರ ನಡೆದ ಭೀಕರ ರೈಲು ದುರಂತಕ್ಕೆ ಸಂಬಂಧಿಸಿದಂತೆ ಭಾರತೀಯ ರೈಲ್ವೇ ಇಲಾಖೆ 4 ಅಧಿಕಾರಿಗಳನ್ನು ಅಮಾನತು ಮಾಡಿದ್ದು, ಓರ್ವ ಅಧಿಕಾರಿಯನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ,
ನಿನ್ನೆ ಸಂಜೆಯಷ್ಟೇ ರೈಲು ದುರಂತದ ಪ್ರಾಥಮಿಕ ವರದಿ ಹೊರಬಿದಿದ್ದು, ವರದಿಯಲ್ಲಿ ಅಧಿಕಾರಿಗಳ ನಿರ್ಲಕ್ಷ್ಯದಿಂದಲೇ ದುರಂತ ಸಂಭವಿಸಿದೆ ಎಂಬ ವಿಚಾರ ಬಹಿರಂಗವಾಗಿದೆ. ಈ ಹಿನ್ನಲೆಯಲ್ಲಿ ನಿರ್ಲಕ್ಷ್ ವಹಿಸಿದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಂಡಿರುವ ರೈಲ್ವೇ ಇಲಾಖೆ, ನಾಲ್ಕು ಅಧಿಕಾರಿಗಳನ್ನು ಕರ್ತವ್ಯ ಲೋಪದ ಆರೋಪದ ಮೇರೆಗೆ ಅಮಾನತು ಮಾಡಿದ್ದು, ಓರ್ವ ಅಧಿಕಾರಿಯನ್ನು ವರ್ಗಾವಣೆ ಮಾಡಿದೆ. ಅಂತೆಯೇ ಅಂದು ಕರ್ತವ್ಯದಲ್ಲಿದ್ದ ಓರ್ವ ರೈಲ್ವೇ ಎಂಜಿನಿಯರ್ ನನ್ನು ಕಡ್ಡಾಯ ರಜೆ ಮೇಲೆ ಇಲಾಖೆ ಮನೆಗೆ ಕಳುಹಿಸಿದೆ ಎಂದು ತಿಳಿದುಬಂದಿದೆ.
ಉತ್ತರ ರೈಲ್ವೇ ಜನರಲ್ ಮ್ಯಾನೇಜರ್ ಆರ್.ಕೆ.ಕುಲ ಶ್ರೇಷ್ಟ್ರ, ರೈಲ್ವೇ ಎಂಜಿನಿಯರಿಂಗ್ ಮಂಡಳಿ ಸದಸ್ಯ ಆದಿತ್ಯ ಮಿತ್ತಲ್ ಮತ್ತು ಡಿವಿಶನಲ್ ರೈಲ್ವೇ ಮ್ಯಾನೇಜರ್ ದೆಹಲಿ ಆರ್.ಎನ್. ಸಿಂಗ್ ಮತ್ತು ಉತ್ತರ ರೈಲ್ವೆಯ ಮುಖ್ಯ ಟ್ರ್ಯಾಕ್ ಎಂಜಿನಿಯರ್ ನನ್ನು ವರ್ಗಾವಣೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.
22ಕ್ಕೇರಿದ ಸಾವಿನ ಸಂಖ್ಯೆ
ಇನ್ನು ಇದೇ ವೇಳೆ ದುರಂತದಲ್ಲಿ ಸಾವನ್ನಪ್ಪಿದವರ ಸಂಖ್ಯೆ 22ಕ್ಕೇರಿದ್ದು, ಭಾನುವಾರ ಗಂಭೀರವಾಗಿ ಗಾಯಗೊಂಡಿದ್ದ ಓರ್ವ ಪ್ರಯಾಣಿಕ ಅಸ್ಪತ್ರೆಯಲ್ಲಿ ನಿಧನರಾಗಿದ್ದಾರೆ ಎಂದು ತಿಳಿದುಬಂದಿದೆ. ಇನ್ನು ಪ್ರಕರಣ ಸಂಬಂಧ ಇಂದಿನಿಂದ ರೈಲ್ವೇ ತನಿಖಾ ಸಮಿತಿಯು ತನಿಖೆ ಆರಂಭಿಸಲಿದೆ.
Advertisement