ಅತ್ಯಾಚಾರಿ ಬಾಬಾಗೆ ಮರಣ ದಂಡನೆ ನೀಡಿ; ವಾರಣಾಸಿ ಸಾಧುಗಳ ಆಗ್ರಹ

ಅತ್ಯಾಚಾರ ಪ್ರಕರಣದಲ್ಲಿ ದೋಷಿಯಾಗಿರುವ ಸ್ವಯಂ ಘೋಷಿತ ದೇವಮಾನವ ಡೇರಾ ಸಚ್ಚಾ ಸೌದಾ ಮುಖ್ಯಸ್ಥ ಗುರ್ಮಿತ್ ರಾಮ್ ರಹೀಮ್ ಸಿಂಗ್ ಗೆ ಮರಣ ದಂಡನೆ ಶಿಕ್ಷೆ ನೀಡಿ ಎಂದು ವಾರಣಾಸಿ ಸಾಧುಗಳು ಸೋಮವಾರ ಆಗ್ರಹಿಸಿದ್ದಾರೆ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ಅತ್ಯಾಚಾರ ಪ್ರಕರಣದಲ್ಲಿ ದೋಷಿಯಾಗಿರುವ ಸ್ವಯಂ ಘೋಷಿತ ದೇವಮಾನವ ಡೇರಾ ಸಚ್ಚಾ ಸೌದಾ ಮುಖ್ಯಸ್ಥ ಗುರ್ಮಿತ್ ರಾಮ್ ರಹೀಮ್ ಸಿಂಗ್ ಗೆ ಮರಣ ದಂಡನೆ ಶಿಕ್ಷೆ ನೀಡಿ ಎಂದು ವಾರಣಾಸಿ ಸಾಧುಗಳು ಸೋಮವಾರ ಆಗ್ರಹಿಸಿದ್ದಾರೆ.

ಅತ್ಯಾಚಾರ ಪ್ರಕರಣದಲ್ಲಿ ಅಪರಾಧಿಯಾಗಿರುವ ರಾಮ್ ರಹೀಮ್ ಬಾಬಾಗೆ ಮರಣ ದಂಡನೆ ನೀಡಿ ಎಂದು ಉತ್ತರಪ್ರದೇಶ ಸಾಧುಗಳು ಹಾಗೂ ನಾಗ ಸಾಧುಗಳು ಆಗ್ರಹಿಸಿದ್ದು, ಘೋಷಣಾ ವಾಕ್ಯಗಳನ್ನು ಪ್ರದರ್ಶಿಸಿದ್ದಾರೆ. 

ಅತ್ಯಾಚಾರ ಪ್ರಕಱಣದಲ್ಲಿ ದೋಷಿಯೆಂದು ಸಾಬೀತಾಗಿರುವ ಹಿನ್ನಲೆಯಲ್ಲಿ ಗುರ್ಮಿತ್ ಸಿಂಗ್ ಗೆ ಇಂದು ಸಂಜೆ 4 ಗಂಟೆಗೆ ಸಿಬಿಐ ವಿಶೇಷ ನ್ಯಾಯಾಲಯ ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸಲಿದೆ ಎಂದು ವರದಿಗಳು ತಿಳಿಸಿವೆ. 

ರೊಹ್ಟಕ್ ನ ಸುನಾರಿಯಾದಲ್ಲಿರುವ ಜೈಲಿನ ಆವರಣದಲ್ಲಿ ವಿಶೇಷ ನ್ಯಾಯಾಲಯದ ವ್ಯವಸ್ಥೆ ಮಾಡಲಾಗಿದ್ದು, ಜೈಲಿನ ಪಕ್ಕದ ಗಂಥಾಲಯವನ್ನು ತಾತ್ಕಾಲಿಕ ಸಿಬಿಐನ ವಿಶೇಷ ನ್ಯಾಯಾಲಯವನ್ನಾಗಿ ಮಾಡಲಾಗಿದೆ. 

ಸಿಬಿಐ ವಿಶೇಷ ನ್ಯಾಯಾಲಯದ ನ್ಯಾಯಮೂರ್ತಿ ಜಗದೀಪ್ ಸಿಂಗ್ ಅವರು ಪಂಚಕುಲದಿಂದ ಹೆಲಿಕಾಪ್ಟರ್ ಮೂಲಕ ರೊಹ್ಟಕ್ ಗೆ ಆಗಮಿಸಿದ್ದು, ವಾದ-ಪ್ರತಿವಾದ ಆಲಿಸಿದ ಬಳಿಕ ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸಲಿದ್ದಾರೆ. ಈಗಾಗಲೇ ಸಿಬಿಐ ಪರ ವಕೀಲರು ಹಾಗೂ ಗುರ್ಮಿತ್ ಪರ ವಕೀಲರು ವಾದ ಮಂಡಿಸಲು ನ್ಯಾಯಾಲಯಕ್ಕೆ ಆಗಮಿಸಿದ್ದಾರೆ. 

ಮಧ್ಯಾಹ್ನ 2.30ರ ಸುಮಾರಿಗೆ ನ್ಯಾಯಾಲಯದ ಕಲಾಪ ಆರಂಭವಾಗುತ್ತಿದ್ದು, ಎರಡೂ ಕಡೆಯ ವಾದ ಆಲಿಸಿದ ಬಳಿಕ ನ್ಯಾಯಮೂರ್ತಿಗಳು ಸಂಜೆ 4 ಗಂಟೆಗೆ ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸಲಿದ್ದಾರೆ. 

ನ್ಯಾಯಾಲಯ ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸುತ್ತಿರುವ ಹಿನ್ನಲೆಯಲ್ಲಿ ಹರಿಯಾಣ ಹಾಗೂ ಪಂಜಾಬ್ ನಲ್ಲಿ ಮತ್ತಾವುದೇ ಹಿಂಸಾಚಾರಗಳು ಸೃಷ್ಟಿಯಾಗದಂತೆ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ರಾಜಧಾನಿ ದೆಹಲಿಯಲ್ಲೂ ಕಟ್ಟೆಚ್ಚರ ವಹಿಸಲಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com