ರೋಹ್ಟಕ್: ಅತ್ಯಾಚಾರ ಪ್ರಕರಣ ಸಂಬಂಧ ಸಿಬಿಐ ವಿಶೇಷ ನ್ಯಾಯಾಲಯದ ನ್ಯಾಯಮೂರ್ತಿ ಜಗದೀಪ್ ಸಿಂಗ್ ಅವರು ಶಿಕ್ಷೆ ಪ್ರಮಾಣ ಘೋಷಣೆ ಮಾಡುತ್ತಿದ್ದಂತೆಯೇ, ಲಕ್ಷಾಂತರ ಭಕ್ತರ ಆರಾಧ್ಯ ದೈವವಾಗಿದ್ದ ರಾಮ್ ರಹೀಮ್ ಅಕ್ಷರಶಃ ಕುಸಿದು ಬಿದ್ದರು.
ಅತ್ಯಾಚಾರ ಪ್ರಕರಣದಲ್ಲಿ 10 ವರ್ಷ ಕಠಿಣ ಜೈಲು ಶಿಕ್ಷೆ ಘೋಷಣೆ ಯಾಗು ತ್ತಿದ್ದಂತೆ ಡೇರಾ ಸಚ್ಚಾ ಸೌದಾದ ಮುಖ್ಯಸ್ಥ ಗುರ್ಮೀತ್ ರಾಂ ರಹೀಂ ಸಿಂಗ್ಗೆ ಆಕಾಶವೇ ಕಳಚಿಬಿದ್ದ ಅನುಭವ. ಈವರೆಗೆ ಸ್ವಘೋಷಿತ ದೇವಮಾನವನಾಗಿ ತಾನು ಪಡೆದಿದ್ದ ಗೌರವ, ಗಳಿಸಿದ್ದ ಆಸ್ತಿ, ಶೋಕಿ ಜೀವನ ಎಲ್ಲವೂ ಕಣ್ಣೆದುರೇ ನಶಿಸಿಹೋದಂಥ ಭಾವನೆ ಮೂಡಿತ್ತು. ಹೀಗಾಗಿಯೇ ತೀರ್ಪು ಹೊರಬೀಳುತ್ತಿದ್ದಂತೆ ನ್ಯಾಯಾಧೀಶರ ಮುಂದೆಯೇ ನಾನು ಅಮಾಯಕ, ಯಾವ ತಪ್ಪನ್ನೂ ಮಾಡಿಲ್ಲ..ದಯಮಾಡಿ ನನ್ನನ್ನು ಕ್ಷಮಿಸಿ ಎಂದು ಕಣ್ಣೀರಿಟ್ಟರು.
ಶಿಕ್ಷೆ ಪ್ರಮಾಣವನ್ನು ಜೀರ್ಣಿಸಿಕೊಳ್ಳಲಾಗದೇ ಗುರ್ಮೀತ್ ಸಿಂಗ್ ಕೋರ್ಟ್ ಕೊಠಡಿಯೊಳಗೇ ಕಣ್ಣೀರಿಡಿತ್ತಾ ರಂಪಾಟ ಶುರುವಿಟ್ಟಿದ್ದ. ತನ್ನ ಎರಡೂ ಕೈಗಳನ್ನು ಮುಗಿದು, ಮಗುವಿನಂತೆ ಅಳಲು ಆರಂಭಿಸಿದ. "ನನ್ನ ಮೇಲೆ ಸ್ವಲ್ಪವಾದರೂ ಕರುಣೆ ತೋರಿ' ಎಂದು ಹೇಳುತ್ತಾ ಕುಸಿದುಬಿದ್ದ. ಬಳಿಕ ಅಲ್ಲಿಂದ ಜೈಲು ಕೊಠಡಿಗೆ ಹೋಗಲು ನಿರಾಕರಿಸಿದಾಗ, ಭದ್ರತಾ ಸಿಬ್ಬಂದಿ ಎಳೆದುಕೊಂಡೇ ಹೋಗಬೇಕಾಯಿತು. ಆಗ, ಬಾಬಾ "ದಯವಿಟ್ಟು ಯಾರಾದರೂ ನನ್ನನ್ನು ಕಾಪಾಡಿ' ಎಂದು ಕೂಗತೊಡಗಿದ. ಜತೆಗೆ, ನನಗೆ ಆಯಾಸವಾಗುತ್ತಿದೆ. ವೈದ್ಯಕೀಯ ನೆರವು ಬೇಕಿದೆ. ನನಗೇನಾದರೂ ಆದರೆ ಅದಕ್ಕೆ ಸರ್ಕಾರವೇ ಹೊಣೆ ಎಂದು ಕಿರುಚಾಡತೊಡಗಿದ್ದನಂತೆ.
ರಾಮ್ ರಹೀಂ ಕಿರುಚಾಟಕ್ಕೆ ಬೆದರಿದ ಅಲ್ಲಿನ ಭದ್ರತಾ ಸಿಬ್ಬಂದಿ ಕೂಡಲೇ ಜೈಲಿನ ವೈದ್ಯರನ್ನು ಕರೆಸಿದ್ದಾರೆ. ಬಳಿಕ ಜೈಲು ವೈದ್ಯರು ಆತನನ್ನು ಪರೀಕ್ಷಿಸಿ ಗುರ್ಮೀತ್ಗೆ ಏನೂ ಆಗಿಲ್ಲ. ಆರೋಗ್ಯವಾಗಿಯೇ ಇದ್ದಾರೆ ಎಂದು ವರದಿ ನೀಡಿದರು. ನಂತರ, ಆತನನ್ನು ಒತ್ತಾಯ ಪೂರ್ವಕವಾಗಿ ಜೈಲಿನೊಳಗೆ ಕರೆದೊಯ್ಯಲಾಯಿತು ಎಂದು ತಿಳಿದುಬಂದಿದೆ.
ತನ್ನ ಆಶ್ರಮದ ಇಬ್ಬರು ಮಹಿಳಾ ಅನುಯಾಯಿಗಳ ಮೇಲೆ ಅತ್ಯಾಚಾರ ಮಾಡಿದ ಪ್ರಕರಣ ಸಂಬಂಧ ದೋಷಿಯಾಗಿದ್ದ ಬಾಬಾ ರಾಮ್ ರಹೀಂಗೆ ನಿನ್ನೆ ಸಿಬಿಐ ವಿಶೇಷ ನ್ಯಾಯಾಲಯ 20 ವರ್ಷ ಜೈಲು ಹಾಗೂ 30 ಲಕ್ಷ ದಂಡ ಪಾವತಿಸುವಂದೆ ಶಿಕ್ಷೆ ನೀಡಿತ್ತು.
Advertisement