ನವದೆಹಲಿ: ಸುಮಾರು 3600 ಕೋಟಿ ರುಪಾಯಿಗಳ ವಿವಿಐಪಿ ಹೆಲಿಕಾಪ್ಟರ್ ಹಗರಣಕ್ಕೆ ಸಂಬಂಧಿಸಿದಂತೆ ಭಾರತೀಯ ವಾಯುಪಡೆ(ಐಎಎಫ್) ಮಾಜಿ ಮುಖ್ಯಸ್ಥ ಎಸ್ಪಿ ತ್ಯಾಗಿ ಹಾಗೂ ಇತರೆ ಒಂಬತ್ತು ಆರೋಪಿಗಳ ವಿರುದ್ಧ ಸಿಬಿಐ ಶುಕ್ರವಾರ ದೆಹಲಿ ಕೋರ್ಟ್ ಗೆ ಚಾರ್ಜ್ ಶೀಟ್ ಸಲ್ಲಿಸಿದೆ.
ಬಹುಕೋಟಿ ವಿವಿಐಪಿ ಹೆಲಿಕಾಪ್ಟರ್ ಖರೀದಿ ಹಗರಣಕ್ಕೆ ಸಂಬಂಧಿಸಿದಂತೆ ಎಸ್ ಪಿ ತ್ಯಾಗಿ, ಅವರ ಸಹೋದರ ಸಂಜೀವ್ ಅಲಿಯಾಸ್ ಜ್ಯೂಲಿ ಮತ್ತು ವಕೀಲ ಗೌತಮ್ ಖೇತನ್ ಸೇರಿದಂತೆ 10 ಆರೋಪಿಗಳ ವಿರುದ್ಧ ಸಿಬಿಐ ಇಂದು ಸಿಬಿಐ ವಿಶೇಷ ನ್ಯಾಯಾಧೀಶ ಅರವಿಂದ್ ಕುಮಾರ್ ಅವರಿಗೆ ಚಾರ್ಜ್ ಶೀಟ್ ಸಲ್ಲಿಸಿದೆ.
ಲಂಚದ ಹಣವನ್ನು ಭಾರತ ಮತ್ತು ಇತರೆ ಸಂಸ್ಥೆಗಳಿಗೆ ತಲುಪಿಸಿದ್ದು ಖೇತನ್ ಎಂದು ಸಿಬಿಐ ಚಾರ್ಜ್ ಶೀಟ್ ಆರೋಪಿಸಿದೆ. ಇನ್ನು ಸಂಜೀವ್ ಅವರಿಗೆ ಯುರೋಪಿಯನ್ ಮಧ್ಯವರ್ತಿ ಕಾರ್ಲೋ ಗೆರೋಸಾ ಗೊತ್ತಿದ್ದರು ಎಂದು ಸಿಬಿಐ ದೂರಿದೆ.
2007ರಲ್ಲಿ ಸೇವೆಯಿಂದ ನಿವೃತ್ತಿಯಾಗಿದ್ದ ಎಸ್ ಪಿ ತ್ಯಾಗಿ ಹಾಗೂ ಅವರ ಸಹೋದರ ಸಂಜೀವ್ ಮತ್ತು ಖೇತನ್ ಅವರನ್ನು ಹಗರಣದ ತನಿಖೆ ನಡೆಸುತ್ತಿರುವ ಸಿಬಿಐ ಕಳೆದ ಡಿಸೆಂಬರ್ 9ರಂದು ಬಂಧಿಸಿತ್ತು. ಸದ್ಯ ಈ ಮೂವರು ಆರೋಪಿಗಳು ಜಾಮೀನಿನ ಮೇಲೆ ಹೊರಗಡೆ ಬಂದಿದ್ದಾರೆ.