ಇಂದಿನಿಂದ ಚಳಿಗಾಲದ ಅಧಿವೇಶನ: ಸಂಸತ್ತಿನಲ್ಲಿ ವಾಕ್ಸಮರಕ್ಕೆ ಪ್ರತಿಪಕ್ಷಗಳು ಸಜ್ಜು

ಹಿಮಾಚಲ ಪ್ರದೇಶ ಮತ್ತು ಗುಜರಾತ್‌ ವಿಧಾನಸಭೆಗಳ ಚುನಾವಣೆಯ ಒತ್ತಡದ ಹಿನ್ನೆಲೆಯಲ್ಲಿ ತುಸು ವಿಳಂಬಗೊಂಡ ಸಂಸತ್ತಿನ ಚಳಿಗಾಲದ ಅಧಿವೇಶನ ಶುಕ್ರವಾರದಿಂ ಆರಂಭಗೊಳ್ಳಲಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on
ನವದೆಹಲಿ: ಹಿಮಾಚಲ ಪ್ರದೇಶ ಮತ್ತು ಗುಜರಾತ್‌ ವಿಧಾನಸಭೆಗಳ ಚುನಾವಣೆಯ ಒತ್ತಡದ ಹಿನ್ನೆಲೆಯಲ್ಲಿ ತುಸು ವಿಳಂಬಗೊಂಡ ಸಂಸತ್ತಿನ ಚಳಿಗಾಲದ ಅಧಿವೇಶನ ಶುಕ್ರವಾರದಿಂದ ಆರಂಭಗೊಳ್ಳಲಿದೆ.
ನಿನ್ನೆಯಷ್ಟೇ ಗುಜರಾತ್ ಚುನಾವಣೆಯ ಅಂತಿಮ ಹಂತದ ಮತದಾನ ಮುಕ್ತಾಯವಾಗಿದ್ದು, ಇದೀಗ ಎಲ್ಲರ ಚಿತ್ತ ಚಳಿಗಾಲದ ಸಂಸತ್ ಅಧಿವೇಶನದತ್ತ ನೆಟ್ಟಿದೆ. ಇಂದಿನಿಂದ ಆರಂಭವಾಗಲಿರುವ ಚಳಿಗಾಲದ ಅಧಿವೇಶನ ಜನವರಿ  5ರವರೆಗೆ ನಡೆಯಲಿದ್ದು, ಗುಜರಾತ್‌ ಮತ್ತು ಹಿಮಾಚಲ ಪ್ರದೇಶ ವಿಧಾನಸಭೆ ಚುನಾವಣೆ ಫಲಿತಾಂಶ ನೋಡಿಕೊಂಡು ಕಾರ್ಯತಂತ್ರ ರೂಪಿಸಲು ಬಿಜೆಪಿ-ಕಾಂಗ್ರೆಸ್‌ ತೆರೆಮರೆಯಲ್ಲಿ ಸಿದ್ಧತೆ ನಡೆಸಿವೆ. ಇದೇ ವೇಳೆ ಗುಜರಾತ್  ಮತ್ತು ಹಿಮಾಚಲ ಪ್ರದೇಶ ಚುನಾವಣೆ ವೇಳೆ ಪ್ರಧಾನಿ ನರೇಂದ್ರ ಮೋದಿ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ವಿರುದ್ಧ ಮಾಡಿದ್ದ ಆರೋಪಗಳಿಗೆ ಸಂಬಂಧಿಸಿದಂತೆ ಪ್ರಧಾನಿ ಮೋದಿ ಕ್ಷಮೆ ಯಾಚಿಸಬೇಕು ಎಂದು ಪಟ್ಟು  ಹಿಡಿದಿದ್ದು, ಇದೇ ವಿಚಾರ ಸಂಸತ್ ನಲ್ಲಿ ಉಭಯ ಪಕ್ಷಗಳ ನಡುವೆ ವಾಕ್ಸಮರಕ್ಕೆ ಕಾರಣವಾಗುವ ಸಾಧ್ಯತೆ ಇದೆ.
ಅಂತೆಯೇ ಗುಜರಾತ್ ಮತದಾನದ ವೇಳೆ ಪ್ರಧಾನಿ ಮೋದಿ ರೋಡ್ ಶೋ ಮತ್ತು ಮತ ಯಂತ್ರ ದುರ್ಬಳಕೆ ಸಂಬಂಧ ಕೂಡ ಬಿಜೆಪಿ ಹಣಿಯಲು ಕಾಂಗ್ರೆಸ್ ರಣತಂತ್ರ ರೂಪಿಸಿದೆ ಎನ್ನಲಾಗಿದೆ. ಇನ್ನು ನಿನ್ನೆಯಷ್ಟೇ ತನ್ನ ಬೆಂಬಲಿತ  ವಿಪಕ್ಷಗಳೊಂದಿಗೆ ಸಭೆ ನಡೆಸಿದ್ದ ಕಾಂಗ್ರೆಸ್, ಅಧಿವೇಶನದ ವೇಳೆ ಸರ್ಕಾರವನ್ನು ಹೇಗೆ ತರಾಟೆಗೆ ತೆಗೆದುಕೊಳ್ಳಬೇಕು ಯಾವೆಲ್ಲಾ ವಿಚಾರಗಳ ಕುರಿತು ಚರ್ಚೆ ನಡೆಸಬೇಕು ಎಂಬುದರ ಕುರಿತು ಪ್ರತಿಪಕ್ಷ ಮುಖಂಡರೊಂದಿಗೆ  ಚರ್ಚೆ ನಡೆಸಿತ್ತು. ಹೀಗಾಗಿ ಈ ಬಾರಿಯ ಅಧಿವೇಶನದಲ್ಲೂ ಕೂಡ ಭಾರಿ ವಾಕ್ಸಮರ ನಿರೀಕ್ಷಿಸಬಹುದು.
ಇನ್ನು ಇದಲ್ಲದೆ ತ್ರಿವಳಿ ತಲಾಕ್‌, ಜಿಎಸ್‌ಟಿ, ನೋಟು ಅಮಾನ್ಯೀಕರಣ, ತನಿಖಾ ಸಂಸ್ಥೆಗಳ ದುರ್ಬಳಕೆ ಆರೋಪ, ಜಮ್ಮು-ಕಾಶ್ಮೀರದಲ್ಲಿನ ಪರಿಸ್ಥಿತಿ ವಿಷಯಗಳು ಸಂಸತ್ ನಲ್ಲಿ ಪ್ರತಿಧ್ವನಿಸುವ ನಿರೀಕ್ಷೆ ಇದೆ. 22 ದಿನಗಳ ಕಾಲ  ನಡೆಯುವ ಅಧಿವೇಶನದಲ್ಲಿ ಕ್ರಿಸ್‌ ಮಸ್‌ ಸೇರಿದಂತೆ ರಜಾ ದಿನಗಳನ್ನು ಹೊರತುಪಡಿಸಿ 14 ದಿನಗಳ ಕಾಲ ಕಲಾಪ ನಡೆಯಲಿದ್ದು, ಆಡಳಿತ ಪಕ್ಷ ಹಾಗೂ ಪ್ರತಿಪಕ್ಷಗಳ ನಡುವೆ ಮತ್ತೊಂದು ಸುತ್ತಿನ ವಾಕ್ಸಮರಕ್ಕೆ ಸಂಸತ್ತಿನ  ಉಭಯ ಸದನಗಳು ಸಾಕ್ಷಿಯಾಗಲಿವೆ.
ವಾಡಿಕೆಯಂತೆ ಮೊದಲ ದಿನದ ಕಲಾಪದಲ್ಲಿ ಅಗಲಿದ ಸಂಸತ್‌ ಸದಸ್ಯರಿಗೆ ಶ್ರದ್ಧಾಂಜಲಿ ಸಲ್ಲಿಕೆಯಾಗಲಿದ್ದು, ಆ ಬಳಿಕ ಉಭಯ ಸದನದ ಕಲಾಪಗಳು ಸೋಮವಾರಕ್ಕೆ ಮುಂದೂಡಿಕೆಯಾಗುವ ನಿರೀಕ್ಷೆ ಇದೆ. ಅಂದು (ಡಿಸೆಂಬರ್‌  18) ಉಭಯ ರಾಜ್ಯಗಳ ಚುನಾವಣೆ ಫಲಿತಾಂಶ ಪ್ರಕಟವಾಗಲಿದ್ದು, ಅಲ್ಲಿನ ಗೆಲುವು-ಸೋಲಿನ ಆಧಾರದ ಮೇರೆಗೆ ಯಾವ ವಿಷಯದ ಕುರಿತು ಕಾರ್ಯತಂತ್ರಗಳು ಕೇಂದ್ರಿತವಾಗಿರಬೇಕು ಎಂದು ಆಡಳಿತಾರೂಢ ಬಿಜೆಪಿ ಹಾಗೂ  ಪ್ರತಿಪಕ್ಷಗಳು ನಿರ್ಧರಿಸಲಿವೆ ಎನ್ನಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com