ಆರ್ ಕೆ ನಗರ ವಿಧಾನಸಭಾ ಉಪಚುನಾವಣೆಯಲ್ಲಿ ಟಿಟಿವಿ ದಿನಕರನ್ ಜಯಭೇರಿ
ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ಸಾವಿನಿಂದ ತೆರವುಗೊಂಡಿದ್ದ ಆರ್ ಕೆ ನಗರ ವಿಧಾನಸಭಾ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ ಎಐಎಡಿಎಂಕೆ ಪಕ್ಷದ ಬಂಡಾಯ ನಾಯಕ, ಪಕ್ಷೇತರ...
ಚೆನ್ನೈ: ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ಸಾವಿನಿಂದ ತೆರವುಗೊಂಡಿದ್ದ ಆರ್ ಕೆ ನಗರ ವಿಧಾನಸಭಾ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ ಎಐಎಡಿಎಂಕೆ ಪಕ್ಷದ ಬಂಡಾಯ ನಾಯಕ, ಪಕ್ಷೇತರ ಅಭ್ಯರ್ಥಿ ಟಿಟಿವಿ ದಿನಕರನ್ 40 ಸಾವಿರ ಮತಗಳ ಅಂತರದಿಂದ ಜಯಗಳಿಸಿದ್ದಾರೆ.
ಬೆಳಿಗ್ಗೆ ಆರಂಭವಾದ ಮತ ಎಣಿಕೆ ಪ್ರಕ್ರಿಯೆಯ ಪ್ರಾರಂಭದ ಹಂತದಿಂದಲೂ ಪ್ರತಿಸ್ಪರ್ಧಿಗಳ ವಿರುದ್ಧ ಬೃಹತ್ ಮೊತ್ತದ ಅಂತರದಲ್ಲಿ ಮುನ್ನಡೆ ಕಾಯ್ದುಕೊಂಡಿದ್ದ ಟಿಟಿವಿ ದಿನಕರನ್ ಅಂತಿಮವಾಗಿ ಜಯವನ್ನು ದಕ್ಕಿಸಿಕೊಂಡಿದ್ದು, ಜಯಲಲಿತಾ ಪ್ರತಿನಿಧಿಸುತ್ತಿದ್ದ ಕ್ಷೇತ್ರದಿಂದ ಆಯ್ಕೆಗೊಂಡಿದ್ದಾರೆ.
ಫಲಿತಾಂಶದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಟಿಟಿವಿ ದಿನಕರನ್, ತಮ್ಮನ್ನು ಜಯಲಲಿತಾ ಅವರ ನಿಜವಾದ ರಾಜಕೀಯ ಪರಂಪರೆಗೆ ಸೇರಿದ ರಾಜಕಾರಣಿ ಎಂದು ಹೇಳಿಕೊಂಡಿದ್ದು, ಇನ್ನು ಮೂರು ತಿಂಗಳುಗಳಲ್ಲಿ ತಮಿಳುನಾಡಿನ ಸರ್ಕಾರ ಪತನವಾಗಲಿದೆ ಎಂದು ಭವಿಷ್ಯ ನುಡಿದಿದ್ದಾರೆ.
ತಮ್ಮನ್ನು ಆಯ್ಕೆ ಮಾಡಿರುವ ಜನತೆ ಹಾಗೂ ಕಾರ್ಯಕರ್ತರಿಗೆ ದಿನಕರನ್ ಧನ್ಯವಾದ ತಿಳಿಸಿದ್ದಾರೆ. ದಿನಕರನ್ ವಿರುದ್ಧ ಸ್ಪರ್ಧಿಸಿದ್ದ ಎಐಎಡಿಎಂಕೆ ಯ ನಾಯಕ ಮಧುಸೂಧನ್ 41,718 ಮತಗಳು ಹಾಗೂ ಡಿಎಂಕೆ ನಾಯಕ ಮರುಥು ಗಣೇಶ್ 24,075 ಮತಗಳನ್ನು ಗಳಿಸಿದ್ದಾರೆ.