ರೋಸ್ ವ್ಯಾಲಿ ಹಗರಣ: ಇಡಿಯಿಂದ 40 ಕೋಟಿ ರು. ಮೌಲ್ಯದ ಹರಳು, ಚಿನ್ನ ಜಪ್ತಿ

ಪಶ್ಚಿಮ ಬಂಗಾಳ ಮತ್ತು ಒಡಿಶಾದಲ್ಲಿ ಸಾವಿರಾರು ಜನರಿಗೆ ವಂಚಿಸಿದ ರೋಸ್ ವ್ಯಾಲಿ ಚಿಟ್ ಫಂಡ್ ಹಗರಣಕ್ಕೆ ಸಂಬಂಧಿಸಿದಂತೆ ಜಾರಿ....
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಕೋಲ್ಕತಾ: ಪಶ್ಚಿಮ ಬಂಗಾಳ ಮತ್ತು ಒಡಿಶಾದಲ್ಲಿ ಸಾವಿರಾರು ಜನರಿಗೆ ವಂಚಿಸಿದ ರೋಸ್ ವ್ಯಾಲಿ ಚಿಟ್ ಫಂಡ್ ಹಗರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ(ಇಡಿ) ಬುಧವಾರ 40 ಕೋಟಿ ರುಪಾಯಿ ಮೌಲ್ಯದ ಹರಳು ಮತ್ತು ಚಿನ್ನವನ್ನು ಜಪ್ತಿ ಮಾಡಿದೆ.
ನಿನ್ನೆ ಆಭರಣ ಮಳಿಗೆಯೊಂದರ ಮೇಲೆ ನಡೆದ ದಾಳಿಯ ವೇಳೆ 40 ಕೋಟಿ ರುಪಾಯಿ ಮೌಲ್ಯದ ಚಿನ್ನ ಹಾಗೂ ಹರಳುಗಳನ್ನು ಜಪ್ತಿ ಮಾಡಲಾಗಿದೆ ಎಂದು ಜಾರಿ ನಿರ್ದೇಶನಾಲಯ ಇಂದು ತಿಳಿಸಿದೆ.
ರೋಸ್ ವ್ಯಾಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮೆಸ್ಸಸ್ ಅದ್ರಿಜಾ ಗೋಲ್ಡ್ ಕಾರ್ಪೋರೇಷನ್ ಲಿಮಿಟೆಡ್ ಮೇಲೆ ನಡೆದ ದಾಳಿಯ ವೇಳೆ ಒಟ್ಟು 22 ಕ್ಯಾರೇಟ್ ನ 72 ಕೆಜಿ ಚಿನ್ನ ಹಾಗೂ 18 ಕ್ಯಾರೇಟ್ ನ 18 ಕೆಜಿ ಚಿನ್ನಾಭರಣ, ವಜ್ರ ಹಾಗೂ ಬೆಲೆ ಬಾಳುವ ಹರಗಳುಗಳನ್ನು ಜಪ್ತಿ ಮಾಡಲಾಗಿದೆ ಎಂದು ಜಾರಿ ನಿರ್ದೇಶನಾಲಯ ಪ್ರಕಟಣೆಯಲ್ಲಿ ತಿಳಿಸಿದೆ.
ಅಕ್ರಮ ಹಣ ವಹಿವಾಟು ತಡೆ ಕಾಯ್ದೆಯಡಿ ಕೇಂದ್ರೀಯ ತನಿಖಾ ಸಂಸ್ಥೆ ಈಗಾಗಲೇ ರೋಸ್ ವ್ಯಾಲಿಗೆ ಸೇರಿದ ಒಟ್ಟು 1,950 ಕೋಟಿ ರುಪಾಯಿ ಮೌಲ್ಯದ ಆಸ್ತಿ ಜಪ್ತಿ ಮಾಡಿದೆ.
ಜಾರಿ ನಿರ್ದೇಶನಾಲಯ 2014ರಲ್ಲಿ ಅಕ್ರಮ ಹಣ ವಹಿವಾಟು ತಡೆ ಕಾಯ್ದೆಯಡಿ ರೋಸ್ ವ್ಯಾಲಿ ಅಧ್ಯಕ್ಷ ಗೌತಮ್ ಕುಂದು ಅವರ ವಿರುದ್ಧ ಎಫ್ಐಆರ್ ದಾಖಲಿಸಿತ್ತು. ಪ್ರಕರಣ ಸಂಬಂಧ ಕುಂದು, ಟಿಎಂಸಿ ಸಂಸದರಾದ ತಪಸ್ ಪಾಲ್ ಹಾಗೂ ಸುದೀಪ್ ಬಂಡೋಪಧ್ಯಾಯ ಸೇರಿದಂತೆ ಹಲವರನ್ನು ಸಿಬಿಐ ಬಂಧಿಸಿತ್ತು. ಅಲ್ಲದೆ ಈ ಸಂಬಂಧ ಜಾರಿ ನಿರ್ದೇಶನಾಲಯ ಕೋಲ್ಕತಾ ಹಾಗೂ ಭುವನೇಶ್ವರದ ಕೋರ್ಟ್ ಗಳಲ್ಲಿ ಹಲವು ಜಾರ್ಚ್ ಶೀಟ್ ಗಳಲ್ಲಿ ಸಲ್ಲಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com