ಮಣಪ್ಪುರಂ ಫೈನಾನ್ಸ್ ನಲ್ಲಿ ದರೋಡೆ: 5 ಲಕ್ಷ ರೂ. ನಗದು, 30 ಕೆಜಿ ಚಿನ್ನ ಲೂಟಿ
ಗುರಗಾವ್: ಮಣಪ್ಪುರಂ ಫೈನಾನ್ಸ್ ಕಚೇರಿಗೆ ನುಗ್ಗಿದ 7 ಮಂದಿ ಶಸ್ತ್ರದಾರಿಗಳು 5 ಲಕ್ಷ ನಗದು ಸೇರಿ ಕೋಟ್ಯಾಂತರ ರು ಮೌಲ್ಯದ ಚಿನ್ನ ದೋಚಿ ಪರಾರಿಯಾಗಿರುವ ಘಟನೆ ಗುರಗಾವ್ ನಲ್ಲಿ ನಡೆದಿದೆ.
ಸೆಕ್ಯೂರಿಟಿ ಗಾರ್ಡ್ ಹಾಗೂ ಗ್ರಾಹಕರ ಮೇಲೆ ಹಲ್ಲೆ ನಡೆಸಿ ಚಿನ್ನಾಭರಣ ಮತ್ತು ಹಣ ದೋಚಿದ್ದಾರೆ. ಗ್ರಾಹಕರ ಸೋಗಿನಲ್ಲಿ ಕಚೇರಿ ಒಳಗೆ ಬಂದ ದರೋಡೆಕೋರರು ಮಹಿಳೆ ಸೇರಿದಂತೆ ನಾಲ್ಕು ಉದ್ಯೋಗಿಗಳನ್ನು ಒತ್ತೆಯಾಗಿರಿಸಿಕೊಂಡಿದ್ದರು. ಮಾಸ್ಕ್ ಹಾಕಿಕೊಂಡಿದ್ದ ಮುಸುಕುಧಾರಿಗಳು ಗುರುತು ಪತ್ತೆಯಾಗದಿರಲೆಂದು ಸಿಸಿಟಿವಿ ಕ್ಯಾಮೆರಾಗೆ ಬಣ್ಣ ಹಚ್ಚಿದ್ದಾರೆ.
ಸ್ಥಳಕ್ಕೆ ಗುರಗಾವ್ ಪೊಲೀಸ್ ಕಮಿಷನರ್ ಆಗಮಿಸಿ, ಪರಿಶೀಲನೆ ನಡೆಸಿದ್ದಾರೆ. ಎಷ್ಟು ಪ್ರಮಾಣದ ಚಿನ್ನ ಲೂಟಿಯಾಗಿದೆ ಎಂಬುದು ಲೆಕ್ಕಕ್ಕೆ ಸಿಗುತ್ತಿಲ್ಲ . ಸರಿಸುಮಾರು 30 ಕೆಜಿ ಚಿನ್ನ ಲೂಟಿಯಾಗಿದೆ ಎಂದು ಹೇಳಲಾಗುತ್ತಿದೆ. ಆರೋಪಿಗಳಿಗಾಗಿ ಶೋಧ ನಡೆಸಿದ್ದಾರೆ.
ಕಳೆದ 6 ತಿಂಗಳಲ್ಲಿ ಮಣಪ್ಪುರಂ ಫೈನಾನ್ಸ್ ಕಚೇರಿಯಲ್ಲಿ ನಡೆದ 6ನೇ ದರೋಡೆ ಇದಾಗಿದೆ. ಮುಂಬೈ ಮತ್ತು ದೆಹಲಿ ಸುತ್ತಮುತ್ತ ಮಣಪ್ಪುರಂ ಕಚೇರಿಗಳನ್ನೇ ಗುರಿಯಾಗಿರಿಸಿಕೊಂಡು ದಾಳಿ ನಡೆಸಲಾಗುತ್ತಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.