ನವದೆಹಲಿ: ಯೋಗ ಕೌಶಲ್ಯದ ನಂತರ ಇದೀಗ ಗಡಿ ಭದ್ರತಾ ಪಡೆ ಯೋಧರು ಬಾಬಾ ರಾಮ್ ದೇವ್ ಅವರ ಪತಂಜಲಿ ಉತ್ಪನ್ನವನ್ನು ಬಳಸಲಿದ್ದಾರೆ. ದೇಶಾದ್ಯಂತ ಗಡಿ ಭದ್ರತಾ ಯೋಧರಿಗಾಗಿ ಅದರ ಕ್ಯಾಂಪಸ್ ನಲ್ಲಿ 12ಕ್ಕೂ ಹೆಚ್ಚು ಪತಂಜಲಿ ಎಫ್ ಎಂಸಿಜಿ ಬ್ರಾಂಡ್ ಗಳ ಸ್ಟೋರ್ ಗಳು ತೆರೆಯಲಿವೆ.
ಅದರ ಮೊದಲ ಮಳಿಗೆಯನ್ನು ನಿನ್ನೆ ದೆಹಲಿಯ ಗಡಿ ಭದ್ರತಾ ಪಡೆ ಶಿಬಿರದಲ್ಲಿ ಉದ್ಘಾಟಿಸಲಾಯಿತು. ದೇಶಾದ್ಯಂತ ಗಡಿ ಭದ್ರತಾ ಪಡೆ ಸ್ಥಳಗಳಲ್ಲಿ ಪತಂಜಲಿ ಆಯುರ್ವೇದ ಮಳಿಗೆ ಸ್ಥಾಪನೆಗೆ ಬಿಎಸ್ಎಫ್ ವೈಫ್ಸ್ ವೆಲ್ಫೇರ್ ಅಸೋಸಿಯೇಷನ್(ಬಿಡಬ್ಲ್ಯುಡಬ್ಲ್ಯುಎ) ಹರಿದ್ವಾರದ ಪತಂಜಲಿ ಆಯುರ್ವೇದಿಕ್ ಲಿಮಿಟೆಡ್ ಜೊತೆ ಒಪ್ಪಂದ ಮಾಡಿಕೊಂಡಿದೆ. ಗಡಿ ಭದ್ರತಾ ಯೋಧರಿಗೆ ಮತ್ತು ಅವರ ಕುಟುಂಬದವರಿಗೆ ಪತಂಜಲಿ ಆಯುರ್ವೇದಿಕ್ ಉತ್ಪನ್ನಗಳ ಮಾರಾಟದಲ್ಲಿ ರಿಯಾಯಿತಿ ನೀಡಲು ಈ ಒಪ್ಪಂದ ಸಹಕಾರಿಯಾಗುತ್ತದೆ ಎಂದು ಬಿಎಸ್ಎಫ್ ಹೇಳಿಕೆ ತಿಳಿಸಿದೆ.
ಬಿಡಬ್ಲ್ಯುಡಬ್ಲ್ಯುಎಯಡಿ ಅಧೀನದಡಿ ಇಂತಹ ಅನೇಕ ಮಳಿಗೆಗಳನ್ನು ಬಿಎಸ್ಎಫ್ ಶಿಬಿರಗಳಾದ ಅಗರ್ತಲಾ, ಟೆಕನ್ಪುರ್, ಗುವಾಹಟಿ, ಜೋಧ್ ಪುರ್, ಸಿಲಿಗುರಿ, ಜಲಂಧರ್, ಕೋಲ್ಕತ್ತಾ, ಜಮ್ಮು, ಬೆಂಗಳೂರು, ಸಿಲ್ಚರ್, ಅಹಮದಾಬಾದ್, ಹಜರಿಬಾಗ್ ಮತ್ತು ಇಂದೋರ್ ನಲ್ಲಿ ಸ್ಥಾಪಿಸಲಾಗುವುದು ಎಂದು ಬಿಎಸ್ಎಫ್ ತಿಳಿಸಿದೆ.