ನವದೆಹಲಿ: ಹರೀಶ್ ರಾವತ್ ನೇತೃತ್ವದ ಉತ್ತರಾಖಂಡ್ ಸರ್ಕಾರಕ್ಕೆ ಮತ್ತೊಂದು ಸಂಕಷ್ಟ ಎದುರಾಗಿದೆ. 2013 ರಲ್ಲಿ ಸಂಭವಿಸಿದ ಪ್ರವಾಹ ಸಂತ್ರಸ್ತರ ನಿಧಿಯಿಂದ ಉತ್ತರಾಖಂಡ್ ಸರ್ಕಾರ ಕ್ರಿಕೆಟಿಗ ವಿರಾಟ್ ಕೊಹ್ಲಿಗೆ 47 ಲಕ್ಷ ರು ಹಣ ನೀಡಿದೆ ಎಂಬುದು ಆರ್ ಟಿ ಆ ನಿಂದ ಬೆಳಕಿಗೆ ಬಂದಿದೆ.
ವಿಧಾನ ಸಭೆ ಚುನಾವಣೆಯ ಫಲಿತಾಂಶ ಮಾರ್ಚ್ 11ರಂದು ಪ್ರಕಟವಾಗಲಿದ್ದು. ಈ ಬೆಳವಣಿಗೆಯು ಹರೀಶ್ ರಾವತ್ ಸರಕಾರದ ಪಾಲಿಗೆ ಮತ್ತೊಂದು ವಿವಾದವಾಗಿ ಪರಿಣಮಿಸುತ್ತಿದೆ.
ಉತ್ತರಾಖಂಡ ಪ್ರವಾಸೋದ್ಯಮ ಪ್ರಚಾರ ರಾಯಭಾರಿಯಾಗಿ 60 ಸೆಕೆಂಡ್ಗಳ ವೀಡಿಯೊದಲ್ಲಿ ಕಾಣಿಸಿಕೊಂಡಿರುವುದಕ್ಕಾಗಿ ಕೊಹ್ಲಿ ಅವರಿಗೆ ಈ ಮೊತ್ತ ಪಾವತಿಸಲಾಗಿದೆ ಎಂದು ಬಿಜೆಪಿ ಸದಸ್ಯರೊಬ್ಬರು ಮಾಹಿತಿ ಹಕ್ಕು ಕಾಯಿದೆಯಡಿ ಸಲ್ಲಿಸಿದ್ದ ಅರ್ಜಿಯಿಂದ ತಿಳಿದು ಬಂದಿದೆ.
ಕೊಹ್ಲಿ ಅವರಿಗೆ ಈ ಸಂಬಂಧ ಯಾವುದೇ ಹಣ ವರ್ಗಾವಣೆ ವ್ಯವಹಾರ ನಡೆದಿಲ್ಲ ಎಂದು ಕೊಹ್ಲಿ ಅವರ ಕಾರ್ನರ್ಸ್ಟೋನ್ ಸ್ಪೋರ್ಟ್ ಅಂಡ್ ಎಂಟರ್ಟೈನ್ಮೆಂಟ್ ನ ಸಿಇಒ ಬಂಟಿ ಸಜ್ದೇಹ್ ಹೇಳಿದ್ದಾರೆ.
ರಾಜ್ಯದ ಪ್ರವಾಸೋದ್ಯಮ ಕುಸಿದಿದ್ದು, ಆರ್ಥಿಕತೆಗೂ ಪೆಟ್ಟು ಬಿದ್ದಿದೆ. ಪ್ರಸಿದ್ಧ ಜನಪ್ರಿಯ ವ್ಯಕ್ತಿಯನ್ನು ಪ್ರವಾಸಿತಾಣಗಳ ಪ್ರಚಾರಕ್ಕೆ ಬಳಸಿಕೊಂಡರೆ ತಪ್ಪೇನು ಎಂದು ಮುಖ್ಯಮಂತ್ರಿಯ ಮಾಧ್ಯಮ ಸಲಹೆಗಾರ ಸುರೇಂದರ್ ಕುಮಾರ್ ಪ್ರಶ್ನಿಸಿದ್ದಾರೆ.
Advertisement