'ದೆಹಲಿ ವಿವಿ ರಕ್ಷಿಸಿ ಅಭಿಯಾನ'ದಿಂದ ಹಿಂದೆಸರಿದ ಕಾರ್ಗಿಲ್ ಹುತಾತ್ಮ ಯೋಧನ ಪುತ್ರಿ

'ದೆಹಲಿ ವಿಶ್ವವಿದ್ಯಾಲಯವನ್ನು ರಕ್ಷಿಸಿ' ಹೊಸ ಅಭಿಯಾನವನ್ನು ಆರಂಭಿಸಿ ಸಾಕಷ್ಟು ಪರ ಹಾಗೂ ವಿರೋಧ ಟೀಕೆಗಳನ್ನು ಎದುರಿಸಿದ್ದ ಕಾರ್ಗಿಲ್ ಹುತಾತ್ಮ ಯೋಧನ ಪುತ್ರಿ ಗುರ್​ಮೆಹರ್ ಕೌರ್ ಅವರು ಕೊನೆಗೂ ತಮ್ಮ ಅಭಿಯಾನದಿಂದ ಹಿಂದೆಸರಿದಿದ್ದಾರೆ...
ಗುರ್​ಮೇಹರ್ ಕೌರ್
ಗುರ್​ಮೇಹರ್ ಕೌರ್
Updated on
ನವದೆಹಲಿ: ದೆಹಲಿ ರಾಮ್ಜಾಸ್ ಕಾಲೇಜಿನಲ್ಲಿ ಘರ್ಷಣೆ ಪ್ರಕರಣ ಸಂಬಂಧಿಸಿದಂತೆ ಎಬಿವಿಪಿ ವಿರುದ್ಧ ತಿರುಗಿಬಿದ್ದು, 'ದೆಹಲಿ ವಿಶ್ವವಿದ್ಯಾಲಯವನ್ನು ರಕ್ಷಿಸಿ' ಹೊಸ ಅಭಿಯಾನವನ್ನು ಆರಂಭಿಸಿ ಸಾಕಷ್ಟು ಪರ ಹಾಗೂ ವಿರೋಧ ಟೀಕೆಗಳನ್ನು ಎದುರಿಸಿದ್ದ ಕಾರ್ಗೀಲ್ ಹುತಾತ್ಮ ಯೋಧನ ಪುತ್ರಿ ಗುರ್​ವೇಹರ್ ಕೌರ್ ಅವರು ಮಂಗಳವಾರ ತಮ್ಮ ಅಭಿಯಾನವನ್ನು ಕೈಬಿಟ್ಟಿದ್ದಾರೆ. 

ಈ ಕುರಿತಂತೆ ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ಅವರು, ನಾನು ನನ್ನ ಅಭಿಯಾನವನ್ನು ಕೈಬಿಡುತ್ತಿದ್ದೇನೆ. ಈ ಮೂಲಕ ಎಲ್ಲರಿಗೂ ಶುಭಾಶಯಗಳನ್ನು ಕೋರುತ್ತಿದ್ದೇನೆ. ಏಕಾಂಗಿಯಾಗಿರಲು ಬಯಸಿದ್ದೇನೆ. ಹೇಳಬೇಕಿದ್ದ ಮಾತುಗಳನ್ನು ನಾನು ಹೇಳಿದ್ದೇನೆ. ಅಭಿಯಾನದ ಮೂಲಕ ಸಾಕು ಎನಿಸುವಷ್ಟು ಅನುಭವಿಸಿದೆ. 20 ವಯಸ್ಸಿನಲ್ಲಿ ನಾನು ಇಷ್ಟನ್ನು ಮಾತ್ರ ಸಹಿಸಿಕೊಳ್ಳಬಲ್ಲೆ ಎಂದು ಹೇಳಿಕೊಂಡಿದ್ದಾರೆ.
ನನ್ನ ಧೈರ್ಯ ಹಾಗೂ ಶೌರ್ಯದ ಬಗ್ಗೆ ಯಾರಾದರೂ ಪ್ರಶ್ನೆ ಮಾಡಿದರೆ, ಅಂತಹವರಿಗೆ ನಾನು ಈಗಾಗಲೇ ಹೆಚ್ಚಿನ ರೀತಿಯಲ್ಲಿಯೇ ಉತ್ತರವನ್ನು ನೀಡಿದ್ದೇನೆ. ಇನ್ನು ಮುಂದೆ ಹಿಂಸಾಚಾರ ಹಾಗೂ ಬೆದರಿಕೆಗಳನ್ನು ಹಾಕುವವರು ಒಂದಲ್ಲ ಎರಡು ಬಾರಿ ಆಲೋಚನೆ ಮಾಡುತ್ತಾರೆಂಬುದನ್ನು ಮಾತ್ರ ಖಚಿತವಾಗಿ ಹೇಳುತ್ತೇನೆಂದು ತಿಳಿಸಿದ್ದಾರೆ.
 ಇದೇ ವೇಳೆ ಖಾಲ್ಸಾ ಕಾಲೇಜಿನಲ್ಲಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಪ್ರತೀಯೊಬ್ಬ ವಿದ್ಯಾರ್ಥಿಗಳು ಭಾಗಿಯಾಗುವಂತೆ ಕರೆ ನೀಡಿರುವ ಅವರು, ಅಭಿಯಾನ ನಡೆಯುತ್ತಿರುವುದು ವಿದ್ಯಾರ್ಥಿಗಳಿಗಾಗಿ, ನನಗಾಗಿ ಅಲ್ಲ. ಪ್ರತಿಭಟನೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗಿ ಎಂದಿದ್ದಾರೆ.

ಗುರ್​ಮೆಹರ್ ಕೌರ್'ಗೆ ಅತ್ಯಾಚಾರ ಬೆದರಿಕೆ: ಅನಾಮಧೇಯ ವ್ಯಕ್ತಿಗಳ ವಿರುದ್ಧ ಎಫ್ಐಆರ್ ದಾಖಲು
ಎಬಿವಿಪಿ ಸಂಘಟನೆ ವಿರುದ್ದ ತಿರುಗಿ ಬಿದ್ದ ಬಳಿಕ ಗುರ್​ಮೆಹರ್ ಕೌರ್ ಅವರಿಗೆ ಸಾಕಷ್ಟು ಬೆದರಿಕೆ ಕರೆಗಳು ಬರುತ್ತಿವೆ ಎಂದು ಹೇಳಲಾಗುತ್ತಿತ್ತು. ಈ ಹಿನ್ನಲೆಯಲ್ಲಿ ದೆಹಲಿ ಪೊಲೀಸರು ಅನಾಮಧೇಯ ವ್ಯಕ್ತಿಗಳ ವಿರುದ್ದ ಎಫ್ಐಆರ್ ದಾಖಲಿಸಿಕೊಂಡಿದ್ದಾರೆಂದು ಮೂಲಗಳು ತಿಳಿಸಿವೆ. 

ನಿನ್ನೆಯಷ್ಟೇ ಆರೋಪ ವ್ಯಕ್ತಪಡಿಸಿದ್ದ ಗುರ್​ಮೆಹರ್ ಕೌರ್ ಅವರು, ಎಬಿವಿಪಿ ವಿರುದ್ದ ತಿರುಗಿಬಿದ್ದ ಬಳಿಕ ನನಗೆ ಅತ್ಯಾಚಾರ ಬೆದರಿಕೆ ಕರೆಗಳು ಬರುತ್ತಿವೆ ಎಂದು ಹೇಳಿದ್ದರು. ಅಲ್ಲದೆ, ಈ ಕುರಿತಂತೆ ದೆಹಲಿ ಮಹಿಳಾ ಆಯೋಗದ ಮೆಟ್ಟಿಲೇರಿದ್ದರು. 

ಪ್ರಕರಣ ಸಂಬಂಧ ಕೂಡಲೇ ಸ್ಪಂದನೆ ನೀಡಿದ್ದ ದೆಹಲಿ ಮಹಿಳಾ ಆಯೋಗ ದೆಹಲಿ ಆಯುಕ್ತರಿಗೆ ಪತ್ರ ಬರೆದು, ಸಂಬಂಧಪಟ್ಟವರ ವಿರುದ್ಧ ಎಫ್ಐಆರ್ ದಾಖಲಿಸಿಕೊಂಡು ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿತ್ತು. 

ಈ ಹಿನ್ನಲೆಯಲ್ಲಿ ಇದೀಗ ದೆಹಲಿ ಪೊಲೀಸರು ಅನಾಮಧೇಯ ವ್ಯಕ್ತಿಗಳ ವಿರುದ್ಧ ಸಂಬಂಧ ಕಾಯ್ದೆಗಳ ಅಡಿಯಲ್ಲಿ ಎಫ್ಐಆರ್ ದಾಖಲಿಸಿಕೊಂಡಿದೆ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ. 

ಈ ಹಿಂದೆ ಕಾರ್ಗಿಲ್ ಹುತಾತ್ಮ ಯೋಧನ ಪುತ್ರಿ, ಲೇಡಿ ಶ್ರೀ ರಾಮ ಕಾಲೇಜು ವಿದ್ಯಾರ್ಥಿನಿ ಗುರ್​ವೇಹರ್ ಕೌರ್ ದೆಹಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ಮೇಲಿನ ಹಲ್ಲೆ ಖಂಡಿಸಿ ಫೇಸ್​ಬುಕ್​ನಲ್ಲಿ ಪೋಸ್ಟ್ ಹಾಕಿದ್ದರು,

ಕೈ ಬರಹವುಳ್ಳ ಘೋಷ ಪಟ್ಟಿಯನ್ನು ಹಿಡಿದು ನಿಂತಿರುವ ಗುರ್​ಮೆಹರ್ ಕೌರ್, ನಾನು ದೆಹಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿನಿ. ನಾನು ಎಬಿವಿಪಿಯಿಂದ ಭಯಗೊಂಡಿಲ್ಲ. ನಾನು ಒಂಟಿಯಲ್ಲ. ನನ ಜತೆಗೆ ಭಾರತದ ಪ್ರತಿಯೊಬ್ಬ ವಿದ್ಯಾರ್ಥಿಯೂ ಇದ್ದಾರೆ. ಭಾರತದ ಪ್ರತಿಯೊಬ್ಬ ಪ್ರಜೆಗೂ ಮಾತನಾಡುವ ಹಕ್ಕಿದೆ. ವಾದಿಸುವ ಅವಕಾಶವಿದೆ. ಸರಿ ತಪ್ಪುಗಳನ್ನು ವಿಮರ್ಶಿಸುವ ಸ್ವಾತಂತ್ರವಿದೆ. ಇದನ್ನು ರಾಷ್ಟ್ರ, ಸಂಸ್ಕೃತಿ, ಆಚರಣೆ ಇತ್ಯಾದಿ ಮಾನದಂಡಗಳಡಿ ಹತ್ತಿಕ್ಕುವ ಪ್ರಯತ್ನ ಬೇಡ. ಎಬಿವಿಪಿ ಕಾರ್ಯಕರ್ತರು ತಮ್ಮ ಮೇಲೆ ಕಲ್ಲುಗಳನ್ನು ಎಸೆದು ಗಾಯಗೊಳಿಸಬಹುದು. ಆದರೆ ನಮ್ಮ ತತ್ವಗಳನ್ನು ಹತ್ತಿಕ್ಕಲು ಸಾಧ್ಯವಿಲ್ಲ ಎಂದು ಹುತಾತ್ಮ ಯೋಧನ ಪುತ್ರಿ ಬರೆದುಕೊಂಡಿದ್ದಳು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com