ನವದೆಹಲಿ: ಬ್ಯಾಂಕ್ ಗಳು ಸಾಲ ವಸೂಲಿ ಮಾಡುವ ಮೂಲಸೌಕರ್ಯಗಳ ಕುರಿತು ಮತ್ತಷ್ಟು ಸ್ಪಷ್ಟತೆಯನ್ನು ಕೇಂದ್ರದಿಂದ ಸುಪ್ರೀಂ ಕೋರ್ಟ್ ಬಯಸಿದೆ. ಬ್ಯಾಂಕುಗಳು ಗ್ರಾಹಕರಿಂದ ಸಾಲವನ್ನು ಹೇಗೆ ಹಿಂಪಡೆಯುತ್ತದೆ ಎಂಬ ಬಗ್ಗೆ ಅಧ್ಯಯನ ನಡೆಸುವಂತೆ ಕೇಂದ್ರಕ್ಕೆ ಅದು ನಿರ್ದೇಶನ ನೀಡಿದೆ.
ಮುಖ್ಯ ನ್ಯಾಯಮೂರ್ತಿ ಟಿ.ಎಸ್.ಠಾಕೂರ್ ಅವರನ್ನೊಳಗೊಂಡ ಮೂವರು ನ್ಯಾಯಮೂರ್ತಿಗಳನ್ನೊಳಗೊಂಡ ನ್ಯಾಯಪೀಠ, ಹಿರಿಯ ವಕೀಲ ಪ್ರಶಾಂತ್ ಭೂಷಣ್ ಅವರು ಸಲ್ಲಿಸಿದ್ದ ಮನವಿಯ ವಿಚಾರಣೆ ನಡೆಸಿದ ನಂತರ ಈ ತೀರ್ಪು ನೀಡಿದೆ.
ಕೇಂದ್ರ ಸರ್ಕಾರದ ಮೂಲಕ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದ ಭೂಷಣ್, ಅನುತ್ಪಾದಕ ಆಸ್ತಿಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ಸಾಲವನ್ನು ವಸೂಲಿ ಮಾಡುವ ಪ್ರಕ್ರಿಯೆ ತನ್ನ ಕಾರ್ಯದಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಆರೋಪಿಸಿದ್ದರು.
ಅನುತ್ಪಾದಕ ಆಸ್ತಿಗಳ ಮೌಲ್ಯ 1.85 ಲಕ್ಷ ಕೋಟಿ ಮೀರಿದೆ ಎಂದು ಅವರು ಲೆಕ್ಕ ತೋರಿಸಿದ್ದರು.
ಸಾಲವನ್ನು ಬ್ಯಾಂಕುಗಳು ಹೆಚ್ಚು ಪಾರದರ್ಶಕವಾಗಿ ಮತ್ತು ತರ್ಕಬದ್ಧವಾಗಿ ಹೇಗೆ ನೀಡಬಹುದು ಎಂಬುದರ ಬಗ್ಗೆ ನ್ಯಾಯಾಲಯ ಬ್ಯಾಂಕ್ ಗಳಿಗೆ ನಿರ್ದೇಶನ ನೀಡಬೇಕೆಂದು ಕೂಡ ಅವರು ತಮ್ಮ ಅರ್ಜಿಯಲ್ಲಿ ಒತ್ತಾಯಿಸಿದ್ದರು.
ಕಳೆದ ಡಿಸೆಂಬರ್ 14ರಂದು ಸುಪ್ರೀಂ ಕೋರ್ಟ್ ಈ ವಿಷಯದಲ್ಲಿ ತನ್ನ ತೀರ್ಪನ್ನು ಕಾಯ್ದಿರಿಸಿತ್ತು. ಸಾಲ ಹಿಂಪಡೆಯುವ ನ್ಯಾಯಾಧೀಕರಣದ ಮುಂದೆ ಇತ್ಯರ್ಥವಾಗದೆ ಬಾಕಿ ಉಳಿದಿರುವ ಕೇಸುಗಳ ವಿಸ್ತಾರವಾದ ಅಂಕಿಅಂಶ ಮಾಹಿತಿಯನ್ನು ಸಲ್ಲಿಸುವಂತೆ ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರವನ್ನು ಕೇಳಿದೆ.
ಸಾಲ ಚೇತರಿಕೆ ಕೊರತೆ ಕುರಿತು ಬೆಂಗಳೂರಿನ ಭಾರತೀಯ ನಿರ್ವಹಣೆ ಸಂಸ್ಥೆ ಮತ್ತು ರಾಷ್ಟ್ರೀಯ ಕಾನೂನು ಶಾಲೆ ಅಧ್ಯಯನ ನಡೆಸುವಂತೆ ಕೇಳಿಕೊಳ್ಳುವ ಸಾಧ್ಯತೆ ಸುಳಿವನ್ನು ನ್ಯಾಯಾಲಯ ನೀಡಿದೆ.