ಲಖನೌ: ಸಮಾಜವಾದಿ ಪಕ್ಷದಲ್ಲಿ ಮತ್ತೆ ಪರಿ'ವಾರ್' ಯುದ್ಧ ಆರಂಭವಾಗಿದ್ದು, ಉತ್ತರಪ್ರದೇಶ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರ ಬೆಂಬಲಿಗರ ವಿರುದ್ಧ ಸಮಾಜವಾದಿ ಪಕ್ಷದ ಮುಖ್ಯಸ್ಥ ಮುಲಾಯಂ ಸಿಂಗ್ ಯಾದವ್ ಅವರು ಬುಧವಾರ ಕಿಡಿಕಾಡಿದ್ದಾರೆ.
ಪಕ್ಷದಲ್ಲಿ ಉಂಟಾಗಿರುವ ಬಿರುಕು ಕುರಿತಂತೆ ಮಾತನಾಡಿರುವ ಅವರು, ನಾನು ಪ್ರತ್ಯೇಕವಾಗಿ ಯಾವುದೇ ಪಕ್ಷವನ್ನು ಕಟ್ಟುತ್ತಿಲ್ಲ. ಪಕ್ಷದ ಚಿಹ್ನೆಯನ್ನೂ ಬದಲಾಯಿಸುತ್ತಿಲ್ಲ. ಆದರೆ, ಪಕ್ಷದ ಅಖಿಲೇಶ್ ಗೆ ಬೆಂಬಲ ವ್ಯಕ್ತಪಡಿಸುತ್ತಿರುವವರು ಮತ್ತೊಂದು ಪಕ್ಷವನ್ನು ಕಟ್ಟಲು ಪ್ರಯತ್ನ ಮಾಡುತ್ತಿದ್ದಾರೆ. ಪಕ್ಷದ ನಾಯಕರು ವಿವಾದಗಳಿಗೀಡಾಗದಂತೆ ತಿಳಿ ಹೇಳಿದ್ದೆ. ಪಕ್ಷ ಕಟ್ಟಲು ನಾನು ಸಾಕಷ್ಟು ಶ್ರಮ ಪಟ್ಟಿದ್ದೇನೆ. ಪಕ್ಷ ಏಕತೆಯಿಂದ ಸಾಗುವಂತೆ ಮಾಡಲು ಸಾಕಷ್ಟು ಶ್ರಮಿಸಿದ್ದೇನೆ ಹೇಳಿದ್ದಾರೆ.
ಇದೇ ವೇಳೆ ಅಖಿಲೇಶ್ ಬೆಂಬಲಿಗರು ಹಾಗೂ ರಾಮ್ ಗೋಪಾಲ್ ಯಾದವ್ ಅವರ ವಿರುದ್ಧ ಕಿಡಿಕಾಡಿರುವ ಅವರು, ಪಕ್ಷ ವಿರೋಧಿಗಳು ಚುನಾವಣಾ ಆಯೋಗವನ್ನು ಸಂಪರ್ಕಿಸಿದ್ದು, ಹೊಸ ಪಕ್ಷವನ್ನು ಆರಂಭಿಸುತ್ತಿದ್ದು, ಪಕ್ಷಕ್ಕೆ ಹೊಸ ಚಿಹ್ನೆಯನ್ನು ನೀಡುವಂತೆ ಮನವಿ ಮಾಡಿಕೊಂಡಿದ್ದಾರೆ. ಸಮಾಜವಾದಿ ಪಕ್ಷದ ವತಿಯಿಂದ ಮುಖ್ಯಮಂತ್ರಿ ಅಭ್ಯರ್ಥಿ ಯಾರು ಎಂಬುದರ ಬಗ್ಗೆ ಈ ಹಿಂದೆಯೇ ನಾನು ಘೋಷಣೆ ಮಾಡಿದ್ದೆ. ಪಕ್ಷ ಏಕತೆಯಿಂದ ಮುಂದುವರೆಯುವುದು ಹಾಗೂ ಪಕ್ಷದ ಚಿಹ್ನೆ ಸೈಕಲ್ ಆಗಿರಬೇಕೆಂಬುದಷ್ಟೇ ನನ್ನ ಉದ್ದೇಶ ಎಂದು ತಿಳಿಸಿದ್ದಾರೆ.
Advertisement