

ನವದೆಹಲಿ: ನಮಾಮಿ ಗಂಗಾ ಯೋಜನೆಯಡಿ ಗಂಗಾನದಿ ಸ್ವಚ್ಛತೆ ಬಗ್ಗೆ ಸ್ಥಳೀಯ ನಿವಾಸಿಗಳು ಮತ್ತು ಪ್ರವಾಸಿಗರಲ್ಲಿ ಜಾಗೃತಿ ಮೂಡಿಸಲು ಸಾವಿರಾರು ಮಂದಿ ಯುವಕರನ್ನು ಸ್ವಯಂ ಸೇವಕರನ್ನಾಗಿ ನದಿ ದಡದಲ್ಲಿರುವ ಹಳ್ಳಿಗಳಿಗೆ ನಿಯೋಜಿಸಲು ಕೇಂದ್ರ ಸರ್ಕಾರ ತೀರ್ಮಾನಿಸಿದೆ.
ಗಂಗಾ ನದಿ ಶುದ್ದೀಕರಣದ ಬಗ್ಗೆ ಜನರಲ್ಲಿ ಅರಿವು ಮೂಡಿಸುವುದು ಆ ಮೂಲಕ ಜೀವನದಿಯಾದ ಗಂಗೆಯನ್ನು ರಕ್ಷಿಸಲು ಕೇಂದ್ರ ಸರ್ಕಾರ ನಮಾಮಿ ಗಂಗೆ ಎಂಬ ಯೋಜನೆ ಜಾರಿ ಮಾಡಿದೆ. ಈ ಯೋಜನೆಗೆ ಸರ್ಕಾರ 10 ಕೋಟಿ ರು. ವೆಚ್ಚ ಮಾಡಲು ನಿರ್ಧರಿಸಿದೆ. ಕೈಗಾರಿಕೆಗಳ ತ್ಯಾಜ್ಯಗಳು ನದಿ ಸೇರುತ್ತಿರುವುದರಿಂದ ನೀರು ಮಲಿನಗೊಳ್ಳುತ್ತಿದೆ.ನದಿ ಶುದ್ದೀಕರಣಕ್ಕಾಗಿ ಉತ್ಸಾಹಿ ಯುವಕರನ್ನು ಬಳಸಿಕೊಂಡು ಗಂಗಾ ನದಿ ಸ್ವಚ್ಚತೆ ಬಗ್ಗೆ ಅರಿವು ಮೂಡಿಸಲು ಕೇಂದ್ರ ಮುಂದಾಗಿದೆ.
ಕೇಂದ್ರ ಯುವಜನ ಮತ್ತು ಕ್ರೀಡಾ ಇಲಾಖೆ ಅಡಿ ಬರುವ ನೆಹರು ಯುವ ಕೇಂದ್ರ ಸಂಘಥಾನ್ ಗಂಗಾನದಿ ದಡದಲ್ಲಿರುವ ರಾಜ್ಯಗಳಿಂದ ಸುಮಾರು 20 ಸಾವಿರಕ್ಕೂ ಹೆಚ್ಚು ಯುವಕರನ್ನು ನಮಾಮಿ ಗಂಗೆ ಯೋಜನೆಯನ್ನು ಪ್ರತಿನಿಧಿಸುವ ಸ್ವಚ್ಛತಾ ಧೂತರನ್ನಾಗಿ ನೇಮಿಸಲು ಸಿದ್ಧತೆ ನಡೆಸಿದೆ.
ಈ ಎಲ್ಲಾ 20 ಸಾವಿರ ಯುವಕರಿಗೆ ಒಂದು ವಾರಗಳ ಕಾಲ ತರಬೇತಿ ನೀಡಿ, ಯುವಕರ ಮೂಲಕ ಗಂಗಾ ನದಿ ಸ್ವಚ್ಛತೆಯ ಬಗ್ಗೆ ಜನರಿಗೆ ಸಂದೇಶ ಕೊಡಿಸಲು ತಯಾರಿ ನಡೆಸಲಾಗುತ್ತಿದೆ.
ಈ ಯುವಕರು ಗಂಗಾ ನದಿ ಸ್ವಚ್ಛತೆ ಬಗ್ಗೆ ಪ್ರವಾಸಿಗರಿಗೆ ಹಾಗೂ ಸ್ಥಳೀಯರಿಗೆ ಮಾಹಿತಿ ನೀಡುವುದರ ಜೊತೆಗೆ ಗಂಗಾನದಿ ಪಾವಿತ್ರ್ಯತೆ ಕಾಪಾಡಾಲು ಕೇಂದ್ರ ಸರ್ಕಾರ ಹಮ್ಮಿಕೊಂಡಿರುವ ಶೌಚಾಲಯಗಳ ನಿರ್ಮಾಣ, ನೀರು ಕೊಯ್ಲು ಮತ್ತು ಸಂರಕ್ಷಣೆಗಾಗಿ ಸರ್ಕಾರ ಕೈಗೊಂಡಿರುವ ಹಲವು ಚಟುವಟಿಕೆಗಳ ಬಗ್ಗೆ ಜನರಿಗೆ ಮಾಹಿತಿ ನೀಡಲಿದ್ದಾರೆ.
ಗಂಗಾ ಜಲಾನಯನ ಪ್ರದೇಶದಲ್ಲಿರುವ 29 ಜಿಲ್ಲೆಗಳ 2,336 ಗ್ರಾಮಗಳ ಯುವಜನರನ್ನು ನಮಾಮಿ ಗಂಗೆ ಯೋಜನೆಗೆ ನಿಯೋಜಿಸಲಾಗುತ್ತದೆ. ಗಂಗಾಜಲಾನಯನ ಪ್ರದೇಶ ರಾಜ್ಯಗಳಾದ ಉತ್ತರಾಖಂಡ್, ಉತ್ತರ ಪ್ರದೇಶ, ಬಿಹಾರ ಮತ್ತು ಪಶ್ಚಿಮ ಬಂಗಾಳ ರಾಜ್ಯಗಳ ಎಲ್ಲಾ ಜಿಲ್ಲೆಗಳಿಗೆ ತಲಾ ಒಬ್ಬೊಬ್ಬ ಯೋಜನಾ ಅಧಿಕಾರಿಯನ್ನು ನೇಮಿಸಲಾಗುವುದು.
Advertisement