ನವದೆಹಲಿ: ದಶಕಗಳ ಕಾಲ ಕರ್ನಾಟಕ, ತಮಿಳುನಾಡು ಮತ್ತು ಕೇರಳ ರಾಜ್ಯಗಳಿಗೆ ದೊಡ್ಡ ತಲೆನೋವಾಗಿ ಕಾಡಿದ್ದ ನರಹಂತಕ ಕಾಡುಗಳ್ಳ ವೀರಪ್ಪನ್ ನನ್ನು ಹತ್ಯೆಗೈದ ಪೊಲೀಸ್ ತಂಡದ ನೇತೃತ್ವ ವಹಿಸಿದ್ದ ಹಿರಿಯ ಐಪಿಎಸ್ ಅಧಿಕಾರಿ ಕೆ ವಿಜಯ್ ಕುಮಾರ್ ಅವರು, ವೀರಪ್ಪನ್ ಜೀವನಾಧಾರಿತ ಕುರಿತ ಪುಸ್ತಕ ಬರೆದಿದ್ದಾರೆ.
ವಿಜಯ್ ಕುಮಾರ್ ಅವರು, ವೀರಪ್ಪನ್ ಸೆರೆಗೆ ಕಾರ್ಯತಂತ್ರ ರೂಪಿಸಿದ್ದ ಕಾರ್ಯಾಚರಣೆಯಲ್ಲಿ ಮುಂಚೂಣಿಯಲ್ಲಿದ್ದ ತಮಿಳುನಾಡು ವಿಶೇಷ ಕಾರ್ಯಾ ಚರಣಾ ಪಡೆ (ಎಸ್ಟಿಎಫ್)ಯ ಅಧಿಕಾರಿಯಾಗಿದ್ದರು. "ವೀರಪ್ಪನ್: ಚೇಸಿಂಗ್ ದ ಬ್ರಿಗ್ಯಾಂಡ್" ಎಂಬ ಪುಸ್ತಕವನ್ನು ವಿಜಯ್ ಕುಮಾರ್ ಅವರು ಬರೆದಿದ್ದು, ಪುಸ್ತಕದಲ್ಲಿ ಖ್ಯಾತ ನಟ ರಾಜ್ ಕುಮಾರ್ರನ್ನು 108ದಿನಗಳ ಕಾಲ ಅಪಹರಿಸಿದ್ದ ದರೋಡೆಕೋರನ ವ್ಯಕ್ತಿತ್ವ, ಪ್ರಖ್ಯಾತ ವ್ಯಕ್ತಿಗಳನ್ನು ಅಪಹರಿಸಿ ನಿರ್ದಯವಾಗಿ ಹತ್ಯೆಗೈಯುತ್ತಿದ್ದ ನೈಜ ಘಟನೆಗಳನ್ನು ಪುಸ್ತಕದಲ್ಲಿ ವಿವರಿಸಿದ್ದಾರೆ.
ಕರ್ನಾಟಕ ಸೇರಿದಂತೆ ಕೇರಳ, ತಮಿಳುನಾಡು ಮೂರು ರಾಜ್ಯಗಳಿಗೂ 20 ವರ್ಷಗಳ ಕಾಲ ಭೀತಿ ಹುಟ್ಟಿಸಿದ್ದ ವೀರಪ್ಪನ್. ಸುಮಾರು 200ಕ್ಕೂ ಹೆಚ್ಚು ಆನೆಗಳನ್ನು ಕೊಂದು, ನೂರಾರು ಕೋಟಿ ಬೆಲೆಬಾಳುವ ಶ್ರೀಗಂಧವನ್ನು ರಾಜಾರೋಷವಾಗಿ ಕಳ್ಳಸಾಗಣೆ ಮಾಡಿದ್ದ. ಅಲ್ಲದೆ ತನ್ನ ವಿರುದ್ಧ ಕೆಲಸ ಮಾಡಿದ, ಸಾಕ್ಷಿ ಹೇಳಿದ ಮತ್ತು ಅನುಮಾನದ ಮೇಲೆ ಸುಮಾರು 180 ಮಂದಿಯನ್ನು ವೀರಪ್ಪನ್ ಹತ್ಯೆಗೈದಿದ್ದ. 1952ರಲ್ಲಿ ತಮಿಳುನಾಡಿನ ಗೋಪಿನಾಥಂನಲ್ಲಿ ಹುಟ್ಟಿದ್ದ ವೀರಪ್ಪನ್ ಬಳಿ ಕಾಡುಗಳ್ಳ ದಂತಚೋರ ಮತ್ತು ನರಂಹತಕನಾಗಿ ಬೆಳೆದು ಬಳಿಕ 2004ರಲ್ಲಿ ಹೇಗೆ ಅಂತ್ಯಕಂಡ ಎಂಬ ವಿಚಾರದ ಕುರಿತು ಸವಿಸ್ತಾರವಾಗಿ ವಿಜಯ್ ಕುಮಾರ್ ಅವರು ತಮ್ಮ "ವೀರಪ್ಪನ್: ಚೇಸಿಂಗ್ ದ ಬ್ರಿಗ್ಯಾಂಡ್" ಪುಸ್ತಕದಲ್ಲಿ ವಿವರಿಸಿದ್ದಾರೆ.
Advertisement