ಸಂತ್ ಕಬೀರ್ ನಗರ(ಉತ್ತರ ಪ್ರದೇಶ): ಬಸ್ ಮತ್ತು ಟ್ರಕ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ 9 ಮಂದಿ ಮೃತಪಟ್ಟಿರುವ ದಾರುಣ ಘಟನೆ ಉತ್ತರ ಪ್ರದೇಶದ ಕಂಟೆ ಗ್ರಾಮದ ಬಸ್ತಿ-ಫೈಜಾಬಾದ್ ಹೆದ್ದಾರಿಯಲ್ಲಿ ಸೋಮವಾರ ನಡೆದಿದೆ.
ಗೋರಕಪುರದಿಂದ ಅಯೋಧ್ಯಗೆ ತೆರಳುತ್ತಿದ್ದ ಖಾಸಗಿ ಬಸ್ ಗೆ ಎದುರಗಡೆಯಿಂದ ಬರುತ್ತಿದ್ದ ಟ್ರಕ್ ಡಿಕ್ಕಿ ಹೊಡೆದಿದ್ದು, ಘಟನೆಯಲ್ಲಿ 9 ಮಂದಿ ಮೃತಪಟ್ಟಿದ್ದಾರೆ ಮತ್ತು 12 ಮಂದಿ ಗಾಯಗೊಂಡಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಿರಾಲಾಲ್ ಅವರು ಹೇಳಿದ್ದಾರೆ.
ಮೃತರನ್ನು ರಾಮ್ ಚಂಡೆ(55), ಸಾವಿತ್ರಿ ದೇವಿ(50), ಅಜಯ್ ಯಾದವ್(17) ಅಯೋಧ್ಯಾ ಯಾದವ್(55) ಹಾಗೂ ರಾಕೇಶ್ ಯಾದವ್(35) ಎಂದು ಗುರುತಿಸಲಾಗಿದ್ದು, ಇತರ ನಾಲ್ವರ ಗುರುತು ಇನ್ನೂ ಪತ್ತೆಯಾಗಿಲ್ಲ. ಮೃತರೆಲ್ಲರೂ ಗೋರಕಪುರದ ಕುವಾ ಗ್ರಾಮದವರು ಎಂದು ಅವರು ತಿಳಿಸಿದ್ದಾರೆ.
ಈ ಭೀಕರ್ ಅಪಘಾತದಲ್ಲಿ ಬಸ್ ಹಾಗೂ ಟ್ರಕ್ ನ ಚಾಲಕರಿಬ್ಬರು ಮೃತಪಟ್ಟಿದ್ದು, ಎಲ್ಲಾ ಮೃತ ದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಹಿರಾಲಾಲ್ ಅವರು ಹೇಳಿದ್ದಾರೆ.