ಯಾತ್ರಾರ್ಥಿಗಳ ಜೀವ ರಕ್ಷಿಸಿದ ಗುಜರಾತ್ ಮೂಲದ ಬಸ್ ಚಾಲಕ ಸಲೀಂಗೆ ಇದೀಗ ಎಲ್ಲೆಡೆ ಮೆಚ್ಚುಗೆಗಳ ಮಹಾಪೂರವೇ ಹರಿದು ಬರತೊಡಗಿದೆ.
ಕಳೆದ ರಾತ್ರಿ ಅಮರನಾಥ ಯಾತ್ರಾರ್ಥಿಗಳಿದ್ದ ಬಸ್ ಮೇಲೆ ಉಗ್ರರು ದಾಳಿ ನಡೆಸಿದ್ದರು. ಈ ವೇಳೆ ಬಸ್ ನ್ನು ಸಲೀಂ ಚಾಲನೆ ಮಾಡುತ್ತಿದ್ದರು. ಅಮರನಾಥನ ದರ್ಶನ ಪಡೆದ ಬಳಿಕ ಬಸ್ ನಲ್ಲಿ ಕುಳಿತಿದ್ದ ಯಾರ್ತಾರ್ಥಿಗಳು ನಿದ್ರೆಗೆ ಜಾರಿದ್ದರು. ಉಗ್ರರು ಗುಂಡು ಹಾರಿಸುತ್ತಿದ್ದಂತೆಯೇ ಪ್ರಾಣ ಭೀತಿಯಿಂದ ಯಾತ್ರಾರ್ಥಿಗಳು ಕೂಗಾಡಲು ಆರಂಭಿಸಿದ್ದಾರೆ. ಈ ವೇಳೆ ಭೀತಿಗೊಳಗಾಗದ ಸಲೀಂ ಅವರು ಬಸ್ ನ್ನು ಮತ್ತಷ್ಟು ವೇಗವಾಗಿ ಚಾಲನೆ ಮಾಡಿ 50ಕ್ಕೂ ಹೆಚ್ಚು ಯಾತ್ರಾರ್ಥಿಗಳ ಪ್ರಾಣವನ್ನು ರಕ್ಷಣೆ ಮಾಡಿದ್ದಾರೆ.
ಒಂದು ವೇಳೆ ಸಲೀಂ ಅವರು ಭೀತಿಗೊಳಗಾಗಿ ಬಸ್ ನ್ನು ನಿಲ್ಲಿಸಿದ್ದೇ ಆಗಿದ್ದರೆ, ಮತ್ತಷ್ಟು ಯಾತ್ರಾರ್ಥಿಗಳ ಪ್ರಾಣಹಾನಿಯಾಗುತ್ತಿತ್ತು. ಉಗ್ರರು ಗುಂಡು ಹಾರಿಸುತ್ತಿದ್ದಂತೆಯೇ ಸಲೀಂ ಅವರು ಬಸ್ಸಿನ ವೇಗವನ್ನು ಮತ್ತಷ್ಟು ಹೆಚ್ಚಿಸಿದ್ದಾರೆ. ನಂತರ 2 ಕಿ.ಮೀ ದೂರವರೆಗೂ ಬಸ್ಸನ್ನ ಚಾಲನೆ ಮಾಡಿರುವ ಸಲೀಂ ಅವರು ಸೇನಾ ಕ್ಯಾಂಪ್ ಸಿಗುತ್ತಿದ್ದಂತೆಯೇ ಬಸ್'ನ್ನು ನಿಲ್ಲಿಸಿದ್ದಾರೆ.
ಈ ಬಗ್ಗೆ ಕಾಶ್ಮೀರದ ಐಜಿ ಮುನೀರ್ ಖಾನ್ ಅವರು ಪ್ರತಿಕ್ರಿಯೆ ನೀಡಿದ್ದು, ಪ್ರಯಾಣಿಕರೊಂದಿಗೆ ನಾನು ಮಾತನಾಡಿದ್ದೆ. ಚಾಲಕನ ಧೈರ್ಯವನ್ನು ಮೆಚ್ಚಲೇಬೇಕಿದೆ. ಉಗ್ರರು ಗುಂಡಿನ ದಾಳಿ ನಡೆಸುತ್ತಿದ್ದರೂ. ಚಾಲಕ ಎದೆಗುಂದದೆ ಯಾತ್ರಾರ್ಥಿಗಳನ್ನು ರಕ್ಷಿಸುವ ಸಲುವಾಗಿ ಬಸ್ ನ್ನು ನಿಲ್ಲಿಸದೆ ಚಾಲನೆ ಮಾಡಿದ್ದಾನೆ. ಒಂದು ವೇಳೆ ಸಲೀಂ ಬಸ್ ನ್ನು ನಿಲ್ಲಿಸಿದ್ದೇ ಆಗಿದ್ದರೆ, ಮತ್ತಷ್ಟು ಜನರ ಪ್ರಾಣ ಹಾನಿಯಾಗುತ್ತಿತ್ತು ಎಂದು ಹೇಳಿದ್ದಾರೆ.
ಚಾಲಕ ನಿಯಮಗಳನ್ನು ಉಲ್ಲಂಘಿಸಿದ್ದಾನೆಂಬ ವರದಿಗಳು ಸತ್ಯಕ್ಕೆ ದೂರವಾದದ್ದು. ಯಾತ್ರಾರ್ಥಿಗಳಿದ್ದ ಬಸ್ ನೋಂದಾಯಿತ ಬಸ್ ಆಗಿತ್ತು. ಯಾರ್ತಾರ್ಥಿಗಳು ಎರಡು ದಿನಗಳ ಹಿಂದೆಯೇ ದರ್ಶನವನ್ನು ಪಡೆದುಕೊಂಡಿದ್ದರು. ನಂತರ ಪ್ರವಾಸಿ ತಾಣಗಳಿಗೆ ಭೇಟಿ ನೀಡಲು ಪ್ರಯಾಣ ಬೆಳೆಸಿದ್ದರು. ಬಸ್ಸಿನ ಹಿಂದ ಬೆಂಗಾವಲು ಪಡೆಗಳು ಕೂಡ ಇದ್ದವು. ಯಾತ್ರಾ ಮಾರ್ಗಕ್ಕೆ ಬದಲಾಗಿ ಬೇರೆ ಮಾರ್ಗವನ್ನು ಬಳಸಿರುವುದು ನಿಜ ಎಂದು ತಿಳಿಸಿದ್ದಾರೆ.