ಪ್ರಾಣದ ಹಂಗು ತೊರೆದು ಅಮರನಾಥ ಯಾತ್ರಾರ್ಥಿಗಳ ಜೀವ ರಕ್ಷಿಸಿದ ಗುಜರಾತ್ ಬಸ್ ಚಾಲಕ

ಉಗ್ರರ ಗುಂಡಿನ ಮೊರೆತದ ಶಬ್ಧ ಒಂದೆಡೆಯಾದರೆ...ಮತ್ತೊಂದೆಡೆ ಯಾತ್ರಾರ್ಥಿಗಳ ಭೀತಿಯ ಕೂಗಾಟ...ಈ ಎಲ್ಲದರ ನಡುವೆಯೂ ಉಗ್ರರ ಗುಂಡಿನ ದಾಳಿಗೆ ಭೀತಿಗೊಳಗಾಗದೆ ತನ್ನ ಪ್ರಾಣದ ಹಂಗು ತೊರೆದ ಗುಜರಾತ್ ಚಾಲಕನೊಬ್ಬ 50ಕ್ಕೂ ಹೆಚ್ಚು ಅಮರನಾಥ ಯಾತ್ರಾರ್ಥಿಗಳ...
ಯಾತ್ರಾರ್ಥಿಗಳ ಜೀವ ರಕ್ಷಿಸಿದ ಗುಜರಾತ್ ಬಸ್ ಚಾಲಕ
ಯಾತ್ರಾರ್ಥಿಗಳ ಜೀವ ರಕ್ಷಿಸಿದ ಗುಜರಾತ್ ಬಸ್ ಚಾಲಕ
Updated on

ಅಹಮದಾಬಾದ್: ಉಗ್ರರ ಗುಂಡಿನ ಮೊರೆತದ ಶಬ್ಧ ಒಂದೆಡೆಯಾದರೆ...ಮತ್ತೊಂದೆಡೆ ಯಾತ್ರಾರ್ಥಿಗಳ ಭೀತಿಯ ಕೂಗಾಟ...ಈ ಎಲ್ಲದರ ನಡುವೆಯೂ ಉಗ್ರರ ದಾಳಿಗೆ ಆಂತಕಕ್ಕೊಳಗಾಗದೆ ತನ್ನ ಪ್ರಾಣದ ಹಂಗು ತೊರೆದ ಗುಜರಾತ್ ಚಾಲಕನೊಬ್ಬ 50ಕ್ಕೂ ಹೆಚ್ಚು ಅಮರನಾಥ ಯಾತ್ರಾರ್ಥಿಗಳ ಜೀವ ರಕ್ಷಿಸಿ ಇದೀಗ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. 

ಯಾತ್ರಾರ್ಥಿಗಳ ಜೀವ ರಕ್ಷಿಸಿದ ಗುಜರಾತ್ ಮೂಲದ ಬಸ್ ಚಾಲಕ ಸಲೀಂಗೆ ಇದೀಗ ಎಲ್ಲೆಡೆ ಮೆಚ್ಚುಗೆಗಳ ಮಹಾಪೂರವೇ ಹರಿದು ಬರತೊಡಗಿದೆ. 

ಕಳೆದ ರಾತ್ರಿ ಅಮರನಾಥ ಯಾತ್ರಾರ್ಥಿಗಳಿದ್ದ ಬಸ್ ಮೇಲೆ ಉಗ್ರರು ದಾಳಿ ನಡೆಸಿದ್ದರು. ಈ ವೇಳೆ ಬಸ್ ನ್ನು ಸಲೀಂ ಚಾಲನೆ ಮಾಡುತ್ತಿದ್ದರು. ಅಮರನಾಥನ ದರ್ಶನ ಪಡೆದ ಬಳಿಕ ಬಸ್ ನಲ್ಲಿ ಕುಳಿತಿದ್ದ ಯಾರ್ತಾರ್ಥಿಗಳು ನಿದ್ರೆಗೆ ಜಾರಿದ್ದರು. ಉಗ್ರರು ಗುಂಡು ಹಾರಿಸುತ್ತಿದ್ದಂತೆಯೇ ಪ್ರಾಣ ಭೀತಿಯಿಂದ ಯಾತ್ರಾರ್ಥಿಗಳು ಕೂಗಾಡಲು ಆರಂಭಿಸಿದ್ದಾರೆ. ಈ ವೇಳೆ ಭೀತಿಗೊಳಗಾಗದ ಸಲೀಂ ಅವರು ಬಸ್ ನ್ನು ಮತ್ತಷ್ಟು ವೇಗವಾಗಿ ಚಾಲನೆ ಮಾಡಿ 50ಕ್ಕೂ ಹೆಚ್ಚು ಯಾತ್ರಾರ್ಥಿಗಳ ಪ್ರಾಣವನ್ನು ರಕ್ಷಣೆ ಮಾಡಿದ್ದಾರೆ. 

ಒಂದು ವೇಳೆ ಸಲೀಂ ಅವರು ಭೀತಿಗೊಳಗಾಗಿ ಬಸ್ ನ್ನು ನಿಲ್ಲಿಸಿದ್ದೇ ಆಗಿದ್ದರೆ, ಮತ್ತಷ್ಟು ಯಾತ್ರಾರ್ಥಿಗಳ ಪ್ರಾಣಹಾನಿಯಾಗುತ್ತಿತ್ತು. ಉಗ್ರರು ಗುಂಡು ಹಾರಿಸುತ್ತಿದ್ದಂತೆಯೇ ಸಲೀಂ ಅವರು ಬಸ್ಸಿನ ವೇಗವನ್ನು ಮತ್ತಷ್ಟು ಹೆಚ್ಚಿಸಿದ್ದಾರೆ. ನಂತರ 2 ಕಿ.ಮೀ ದೂರವರೆಗೂ ಬಸ್ಸನ್ನ ಚಾಲನೆ ಮಾಡಿರುವ ಸಲೀಂ ಅವರು ಸೇನಾ ಕ್ಯಾಂಪ್ ಸಿಗುತ್ತಿದ್ದಂತೆಯೇ ಬಸ್'ನ್ನು ನಿಲ್ಲಿಸಿದ್ದಾರೆ. 

ಈ ಬಗ್ಗೆ ಕಾಶ್ಮೀರದ ಐಜಿ ಮುನೀರ್ ಖಾನ್ ಅವರು ಪ್ರತಿಕ್ರಿಯೆ ನೀಡಿದ್ದು, ಪ್ರಯಾಣಿಕರೊಂದಿಗೆ ನಾನು ಮಾತನಾಡಿದ್ದೆ. ಚಾಲಕನ ಧೈರ್ಯವನ್ನು ಮೆಚ್ಚಲೇಬೇಕಿದೆ. ಉಗ್ರರು ಗುಂಡಿನ ದಾಳಿ ನಡೆಸುತ್ತಿದ್ದರೂ. ಚಾಲಕ ಎದೆಗುಂದದೆ ಯಾತ್ರಾರ್ಥಿಗಳನ್ನು ರಕ್ಷಿಸುವ ಸಲುವಾಗಿ ಬಸ್ ನ್ನು ನಿಲ್ಲಿಸದೆ ಚಾಲನೆ ಮಾಡಿದ್ದಾನೆ. ಒಂದು ವೇಳೆ ಸಲೀಂ ಬಸ್ ನ್ನು ನಿಲ್ಲಿಸಿದ್ದೇ ಆಗಿದ್ದರೆ, ಮತ್ತಷ್ಟು ಜನರ ಪ್ರಾಣ ಹಾನಿಯಾಗುತ್ತಿತ್ತು ಎಂದು ಹೇಳಿದ್ದಾರೆ.

ಚಾಲಕ ನಿಯಮಗಳನ್ನು ಉಲ್ಲಂಘಿಸಿದ್ದಾನೆಂಬ ವರದಿಗಳು ಸತ್ಯಕ್ಕೆ ದೂರವಾದದ್ದು. ಯಾತ್ರಾರ್ಥಿಗಳಿದ್ದ ಬಸ್ ನೋಂದಾಯಿತ ಬಸ್ ಆಗಿತ್ತು. ಯಾರ್ತಾರ್ಥಿಗಳು ಎರಡು ದಿನಗಳ ಹಿಂದೆಯೇ ದರ್ಶನವನ್ನು ಪಡೆದುಕೊಂಡಿದ್ದರು. ನಂತರ ಪ್ರವಾಸಿ ತಾಣಗಳಿಗೆ ಭೇಟಿ ನೀಡಲು ಪ್ರಯಾಣ ಬೆಳೆಸಿದ್ದರು. ಬಸ್ಸಿನ ಹಿಂದ ಬೆಂಗಾವಲು ಪಡೆಗಳು ಕೂಡ ಇದ್ದವು. ಯಾತ್ರಾ ಮಾರ್ಗಕ್ಕೆ ಬದಲಾಗಿ ಬೇರೆ ಮಾರ್ಗವನ್ನು ಬಳಸಿರುವುದು ನಿಜ ಎಂದು ತಿಳಿಸಿದ್ದಾರೆ. 
ಉಗ್ರರ ದಾಳಿಯಲ್ಲಿ ಪಾರಾದ ವ್ಯಕ್ತಿಯೊಬ್ಬರು ಪ್ರತಿಕ್ರಿಯೆ ನೀಡಿದ್ದು, ಸಲೀಂ ಅವರ ದಿಟ್ಟತನ ಹಾಗೂ ಧೈರ್ಯವನ್ನು ಕೊಂಡಾಡಿದ್ದಾರೆ. ಬಸ್ ನಲ್ಲಿ ಕುಳಿತಿದ್ದ ನಾವು ನಿದ್ರೆಗೆ ಜಾರಿದ್ದೆವು. ಗುಂಡಿನ ಶಬ್ಧಗಳು ಕೇಳಿಬಂದಾಗಲೇ ನಮಗೆ ಎಚ್ಚರವಾಗಿದ್ದು. ಉಗ್ರರು ಗುಂಡು ಹಾರಿಸುತ್ತಿದ್ದರೂ ಸಲೀಂ ಮಾತ್ರ ಬಸ್ ನ್ನು ನಿಲ್ಲಿಸದೆಯೇ ನಮ್ಮನ್ನು ಸುರಕ್ಷಿತವಾಗಿ ಕರೆದುಕೊಂಡು ಹೋದರು. ಉಗ್ರರು ಗುಂಡು ಹಾರಿಸುತ್ತಿದ್ದಂತೆಯೇ ಒಳಗಡೆಯಿಂದಲೇ ಬಾಗಿಲನ್ನು ಲಾಕ್ ಮಾಡಿದ ಸಲೀಂ ಉಗ್ರರು ಬಸ್ ಒಳಗೆ ಪ್ರವೇಶಿಸದಂತೆ ನೋಡಿಕೊಂಡರು. ಸಲೀಂ ಇಲ್ಲದೆ ಹೋಗಿದ್ದರೆ ಇಂದು ನಾವು ಇಲ್ಲಿರುತ್ತಿಲ್ಲ ಎಂದು ಹೇಳಿದ್ದಾರೆ. 

ಇನ್ನು ಸಲೀಂ ಕುಟುಂಬಸ್ಥರು ಪ್ರತಿಕ್ರಿಯೆ ನೀಡಿದ್ದು, ಹಲವಾರು ಯಾತ್ರಾರ್ಥಿಗಳ ಜೀವ ರಕ್ಷಣೆ ಮಾಡಿರುವುದಕ್ಕೆ ನಮಗೆ ಸಂತಸವಾಗುತ್ತಿದೆ. 9.30ರ ಸುಮಾರಿಗೆ ಸಲೀಂ ಮನೆಗೆ ದೂರವಾಣಿ ಕರೆ ಮಾಡಿದ್ದರು. ಈ ವೇಳೆ ಉಗ್ರರು ಗುಂಡು ಹಾರಿಸುತ್ತಿರುವುದಾಗಿ ಹೇಳಿದ್ದರು. 
ಉಗ್ರರ ದಾಳಿಗೆ ಭಯಪಡದೆ ಬಸ್ಸನ್ನು ನಿಲ್ಲಿಸದೆಯೇ ಪ್ರಯಾಣಿಕರ ಸುರಕ್ಷತೆಯನ್ನು ಸಲೀಂ ಆಲೋಚಿಸಿದ್ದಾನೆ. 7 ಜನರ ಜೀವಗಳನ್ನು ರಕ್ಷಣೆ ಮಾಡಲು ಸಾಧ್ಯವಾಗದಿದ್ದರೂ, 50 ಜನರ ಜೀವವನ್ನು ರಕ್ಷಣೆ ಮಾಡಿದ್ದಾರೆ. ಈ ಬಗ್ಗೆ ನಮಗೆ ಹೆಮ್ಮೆಯಿದೆ ಎಂದು ತಿಳಿಸಿದ್ದಾರೆ. 

ನಿನ್ನಯಷ್ಟೇ ರಾತ್ರಿ 8.20 ಸುಮಾರಿಗೆ ಉಗ್ರರ ಗುಂಪೊಂದು ಅಮರನಾಥ ಯಾತ್ರಾರ್ಥಿಗಳಿದ್ದ ಬಸ್ ಮೇಲೆ ದಾಳಿ ನಡೆಸಿತ್ತು. ಬ್ಯಾಟೆಂಗೂ ಹಾಗೂ  ಖಾನಾಬಾಲ್ ಗಳಲ್ಲಿ ಶಸ್ತ್ರಸಜ್ಜಿದ ಭಯೋತ್ಪಾದಕರ ಗುಂಪು ಪೊಲೀಸ್ ಬೆಂಗಾವಲು ಪಡೆಯ ಮೇಲೆ ದಾಳಿ ನಡೆಸಿತ್ತು, ಈ ವೇಳೆ ನಡೆದ ಗುಂಡಿನ ದಾಳಿಯಲ್ಲಿ ಯಾತ್ರಾರ್ಥಿಗಳಿದ್ದ ಬಸ್ ಸಿಲುಕಿಕೊಂಡಿತ್ತು. ನಂತರ ಉಗ್ರರು ಮನೋಇಚ್ಛೆ ನಡೆಸಿದ್ದ ಗುಂಡಿನ ದಾಳಿಗೆ 7 ಯಾತ್ರಿಗಳು ಸಾವನ್ನಪ್ಪಿದ್ದರು. ಅಲ್ಲದೆ, 32ಕ್ಕೂ ಹೆಚ್ಚು ಮಂದಿಗೆ ಗಾಯಗಳಾಗಿತ್ತು. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com