ಮಸೀದಿ ಧ್ವಂಸ ಖಂಡಿಸಿ ಜಮ್ಮು-ಕಾಶ್ಮೀರದಲ್ಲಿ ಘರ್ಷಣೆ: ಹಲವೆಡೆ ಬಂದ್'ಗೆ ಕರೆ
ಧಾರ್ಮಿಕ ಸಂಘಟನೆಗಳು ಸ್ಥಳೀಯ ಜಮ್ಮಾ ಮಸೀದಿಯೊಂದನ್ನು ಧ್ವಂಸ ಮಾಡಿದ್ದಾರೆಂದು ಆರೋಪಿಸಿ ಜಮ್ಮು ಮತ್ತು ಕಾಶ್ಮೀರದಲ್ಲಿ ಘರ್ಷಣೆ ಏರ್ಪಟ್ಟಿದ್ದು, ದಕ್ಷಿಣ ಕಾಶ್ಮೀರದ ಅನಂತ್ ನಾಗ್ ಟೌನ್ ನಲ್ಲಿ ಭಾನುವಾರ ಬಂದ್ ಆಚರಣೆ ಆಚರಿಸಲಾಗುತ್ತಿದೆ ಎಂದು ತಿಳಿದುಬಂದಿದೆ...
ಶ್ರೀನಗರ: ಧಾರ್ಮಿಕ ಸಂಘಟನೆಗಳು ಸ್ಥಳೀಯ ಜಮ್ಮಾ ಮಸೀದಿಯೊಂದನ್ನು ಧ್ವಂಸ ಮಾಡಿದ್ದಾರೆಂದು ಆರೋಪಿಸಿ ಜಮ್ಮು ಮತ್ತು ಕಾಶ್ಮೀರದಲ್ಲಿ ಘರ್ಷಣೆ ಏರ್ಪಟ್ಟಿದ್ದು, ದಕ್ಷಿಣ ಕಾಶ್ಮೀರದ ಅನಂತ್ ನಾಗ್ ಟೌನ್ ನಲ್ಲಿ ಭಾನುವಾರ ಬಂದ್ ಆಚರಣೆ ಆಚರಿಸಲಾಗುತ್ತಿದೆ ಎಂದು ತಿಳಿದುಬಂದಿದೆ.
ಮಸೀದಿಯನ್ನು ಧ್ವಂಸ ಮಾಡಿದ್ದಾರೆಂದು ಸುದ್ದಿ ಹರಡುತ್ತಿದ್ದಂತೆಯೇ ದಕ್ಷಿಣ ಕಾಶ್ಮೀರದ ಹಲವೆಡೆ ಕಲ್ಲು ತೂರಾಟ ಆರಂಭವಾಗಿತ್ತು. ಭದ್ರತಾ ಸಿಬ್ಬಂದಿಗಳ ಮೇಲೆ ಕಲ್ಲು ತೂರಾಟ ನಡೆಸಲಾಗಿತ್ತು. ಇದೀಗ ಮಸೀದಿಯ ಸಮಿತಿ ಸದಸ್ಯರು ದಕ್ಷಿಣ ಕಾಶ್ಮೀರದಲ್ಲಿ ಬಂದ್ ಗೆ ಕರೆ ನೀಡಿದ್ದು, ಜನರ ಜೀವನ ಅಸ್ತವ್ಯಸ್ತಗೊಂಡಿರುವುದಾಗಿ ವರದಿಗಳು ತಿಳಿಸಿವೆ.
ಮಾಸೀದಿ ಸಮಿತಿಯ ಮುಖ್ಯಸ್ಥ ಕ್ವಾಜಿ ಯಾಸಿರ್ ಅಹ್ಮದ್ ಮಾತನಾಡಿದ್ದು, ಮಸೀದಿ ಧ್ವಂಸಗೊಂಡ ಬಳಿಕ ಸ್ಥಳಕ್ಕೆ ಬಂದಿದ್ದ ಭದ್ರತಾ ಸಿಬ್ಬಂದಿಗಳು ಘರ್ಷಣೆ ವೇಳೆ 14 ಜನರನ್ನು ಬಂಧಿಸಿದ್ದಾರೆಂದು ಆರೋಪಿಸಿದ್ದಾರೆ.
ಯಾಸಿರ್ ಅಹ್ಮದ್ ಅವರ ಈ ಆರೋಪವನ್ನು ತಳ್ಳಿ ಹಾಕಿರುವ ಜಮ್ಮು ಮತ್ತು ಕಾಶ್ಮೀರ ಪೊಲೀಸರು, ಘರ್ಷಣೆ ವೇಳೆ ಯುವಕರನ್ನು ಬಂಧನಕ್ಕೊಳಪಡಿಸಲಾಗಿತ್ತು. ಆದರೆ, ಸಂಜೆ ವೇಳೆಗೆ ಯುವಕರನ್ನು ಬಿಡುಗಡೆಗೊಳಿಸಲಾಗಿತ್ತು ಎಂದು ಹೇಳಿದ್ದಾರೆ.
ನಿನ್ನೆಯಷ್ಟೇ ತ್ರಾಲ್ ನ ಸತೋರಾ ಪ್ರದೇಶದಲ್ಲಿ ಎನ್ ಕೌಂಟರ್ ನಡೆಸಿದ್ದ ಸೇನಾಪಡೆ ಮೂವರು ಉಗ್ರರನ್ನು ಹತ್ಯೆ ಮಾಡಿತ್ತು. ಎನ್ ಕೌಂಟರ್ ನಲ್ಲಿ ಹತ್ಯೆಯಾದ ಮೂವರ ಪೈಕಿ ಓರ್ವ ಉಗ್ರನನ್ನು ಸಾಜಿದ್ ಅಹ್ಮದ್ ಗಿಲ್ಕರ್ ಎಂದು ಗುರ್ತಿಸಲಾಗಿದೆ. ಉಗ್ರ ಸಾಜಿದ್ ಹತ್ಯೆ ಹಿನ್ನಲೆಯಲ್ಲಿ ಶ್ರೀನಗರದ ಹಲವೆಡೆ ಬಂದ್ ಆಚರಿಸುತ್ತಿರುವುದಾಗಿ ವರದಿಗಳು ತಿಳಿಸಿವೆ.