ಹೈದರಾಬಾದ್: ಅಕ್ರಮ ಡ್ರಗ್ ವ್ಯವಹಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಕನ್ನಡದ ಅಪ್ಪು, ಯುವರಾಜ ಸೇರಿದಂತೆ ಹಲವು ಚಿತ್ರಗಳನ್ನು ನಿರ್ದೇಶಿಸಿರುವ ಖ್ಯಾತ ತೆಲುಗು ನಿರ್ದೇಶಕ ಪುರಿ ಜಗನ್ನಾಥ್ ಅವರು ತೆಲಂಗಾಣ ಅಬಕಾರಿ ಇಲಾಖೆಯ ವಿಶೇಷ ತನಿಖಾ ತಂಡ(ಎಸ್ಐಟಿ)ದ ಮುಂದೆ ಬುಧವಾರ ವಿಚಾರಣೆಗೆ ಹಾಜರಾಗಿದ್ದಾರೆ.
ಅಕ್ರಮ ಡ್ರಗ್ ವ್ಯವಹಾರಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ಎಸ್ಐಟಿ ಕಳೆದ ವಾರ ಪುರಿ ಜಗನ್ನಾಥ್ ಸೇರಿದಂತೆ ಚಿತ್ರರಂಗದ ಹಲವು ನಟ–ನಟಿ, ನಿರ್ಮಾಪಕರು ಹಾಗೂ ನಿರ್ದೇಶಕರಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದೆ.
ಪೊಕಿರಿ ಚಿತ್ರದ ಖ್ಯಾತಿಯ ನಿರ್ದೇಶಕ ಪುರಿ ಜಗನ್ನಾಥ್ ಅವರು ಇಂದು ಬೆಳಗ್ಗೆ 10ಗಂಟೆ ಅಬಕಾರಿ ಅಧಿಕಾರಿಗಳ ಮುಂದೆ ವಿಚಾರಣೆಗೆ ಹಾಜರಾಗಿದ್ದು, ಟಾಲಿವುಡ್ ನ ಇನ್ನು 11 ಆರೋಪಿಗಳು ವಿಚಾರಣೆ ಎದುರಿಸಬೇಕಾಗಿದೆ.
ಡ್ರಗ್ ಮಾಫಿಯಾಗೆ ಸಂಬಂಧಿಸಿದಂತೆ ಬಂಧಿಸಲಾಗಿರುವ ವ್ಯಕ್ತಿಯ ಸಂಪರ್ಕದಲ್ಲಿದ್ದ ಚಿತ್ರರಂಗದ 12 ಗಣ್ಯರಿಗೆ ನೋಟಿಸ್ ನೀಡಲಾಗಿದೆ.
ನಟಿ ಚಾರ್ಮಿ ಕೌರ್ ಹಾಗೂ ಮುಮೈತ್ ಖಾನ್ ಅವರಿಗೆ ಇದೇ 20, 21ರಂದು ಎಸ್ಐಟಿ ಮುಂದೆ ಹಾಜರಾಗಲು ಸೂಚಿಸಲಾಗಿದೆ. ಬಂಧಿಸಲಾಗಿರುವ ಮಾದಕ ವಸ್ತು ಮಾರಾಟಗಾರರೊಂದಿಗೆ ಸಂಪರ್ಕ ಇರುವ ಚಿತ್ರರಂಗದ ಬಹಳಷ್ಟು ಕಲಾವಿದರನ್ನು ಪ್ರಶ್ನಿಸಲಾಗುತ್ತಿದೆ.
ನಟ ರವಿತೇಜ, ನವ್ದೀಪ್, ತರುಣ್, ಸುಬ್ಬರಾಜು, ನಂದು, ಛಾಯಾಗ್ರಾಹಕ ಶ್ಯಾಮ್ ಕೆ ನಾಯ್ಡು ಹಾಗೂ ನಿರ್ದೇಶಕ ಚಿನ್ನ ಅವರನ್ನೂ ಎಸ್ಐಟಿ ಪ್ರಶ್ನಿಸಲು ನೋಟಿಸ್ ನೀಡಿದೆ.
ಅಕ್ರಮವಾಗಿ ಡ್ರಗ್ ಅನ್ನು ಶಾಲಾ–ಕಾಲೇಜುಗಳಿಗೆ ಸರಬರಾಜು ಮಾಡಲಾಗಿದ್ದು, ನಗರದ ಖಾಸಗಿ ಶಾಲಾ–ಕಾಲೇಜುಗಳ 1000ಕ್ಕೂ ಹೆಚ್ಚು ವಿದ್ಯಾರ್ಥಿಗಳು ಡ್ರಗ್ ವ್ಯಸನಿಗಳಾಗಿರುವುದನ್ನು ತನಿಖಾಧಿಕಾರಿಗಳು ಪತ್ತೆ ಮಾಡಿದ್ದಾರೆ.
ನಾಸಾದಲ್ಲಿ ಕಾರ್ಯನಿರ್ವಹಿಸಿದ್ದ ಏರೋಸ್ಪೇಸ್ ಎಂಜಿನಿಯರ್ , ಏಳು ಜನ ಬಿ.ಟೆಕ್ ಪದವೀಧರರು ಹಾಗೂ ಬಹು ರಾಷ್ಟ್ರೀಯ ಕಂಪನಿಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದ 13 ಜನ ಆರೋಪಿಗಳನ್ನು ಡ್ರಗ್ ವ್ಯವಹಾರಕ್ಕೆ ಸಂಬಂಧಿಸಿದಂತೆ ಎಸ್ಐಟಿ ಬಂಧಿಸಿದೆ.