ನವದೆಹಲಿ: ಭಾರತೀಯ ಸೇನೆಯಲ್ಲಿನ ಶಸ್ತ್ರಾಸ್ತ್ರಗಳ ಕೊರತೆ ಕುರಿತು ಮಹಾಲೇಖಪಾಲರು ನೀಡಿದ್ದ ವರದಿ ಬಹಿರಂಗವಾದ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಭಾರತೀಯ ಸೇನೆ ಕೆಲವೇ ವಾರಗಳಲ್ಲಿ ಸೇನೆಗೆ ತುರ್ತಾಗಿ ಅಗತ್ಯವಿರುವ ಶಸ್ತ್ರಾಸ್ತ್ರಗಳನ್ನು ಪೂರೈಕೆ ಮಾಡಲಾಗುತ್ತದೆ ಎಂದು ಹೇಳಿದೆ.
ಈ ಬಗ್ಗೆ ಭಾರತೀಯ ಸೇನಾ ಮೂಲಗಳು ಮಾಹಿತಿ ನೀಡಿದ್ದು, ಕೆಲವೇ ವಾರಗಳಲ್ಲಿ ಸೇನೆಗೆ ತುರ್ತಾಗಿ ಬೇಕಿರುವ ಟ್ಯಾಂಕರ್ ಮತ್ತು ಆರ್ಟಿಲರಿ ಗನ್ ಗಳ ಶಸ್ತ್ರಾಸ್ತ್ರಗಳನ್ನು ಪೂರೈಕೆ ಮಾಡಲು ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಮಾಧ್ಯಮವೊಂದು ವರದಿ ಮಾಡಿದ್ದು, ಆಗಸ್ಟ್ ತಿಂಗಳ ಆರಂಭದಲ್ಲೇ ಹೆಚ್ಚು ಬೇಡಿಕೆ ಇರುವ ಶಸ್ತ್ರಾಸ್ತ್ರಗಳನ್ನು ಸೇನೆಗೆ ಪೂರೈಕೆ ಮಾಡಲು ಕ್ರಮ ಕೈಗೊಳ್ಳಲಾಗಿದೆ. ಈ ಪೈಕಿ ಯುದ್ಧ ಟ್ಯಾಂಕರ್ ಗಳು ಮತ್ತು ಆರ್ಟಿಲರಿಗಳ ಶಸ್ತ್ರಾಸ್ತ್ರಗಳ ಕೊರತೆ ನೀಗಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಸೇನಾ ಮೂಲಗಳು ತಿಳಿಸಿವೆ ಎಂದು ವರದಿ ಮಾಡಲಾಗಿದೆ.
ಅಂತೆಯೇ ಈಗಿರುವ ಶಸ್ತ್ರಾಸ್ತ್ರ ದಾಸ್ತಾನನ್ನೂ ಕೂಡ 30 ರಿಂದ 40 ದಿನಗಳಿಗೆ ಸಾಕಾಗುವಷ್ಟು ಏರಿಕೆ ಮಾಡಿಕೊಳ್ಳಲು ಯೋಜನೆ ರೂಪಿಸಲಾಗುತ್ತದೆ ಎಂದು ಸೇನಾ ಮೂಲಗಳು ತಿಳಿಸಿವೆ ಎಂದು ಮಾಧ್ಯಮ ವರದಿ ಮಾಡಿದೆ. ಈ ಬಗ್ಗೆ ಸೇನೆಯ ಉನ್ನತ ಅಧಿಕಾರಿಗಳು ತುರ್ತು ಸಭೆ ಸೇರಿದ್ದು, ಈ ವೇಳೆ ಸೇನೆಗೆ ತುರ್ತಾಗಿ ಅಗತ್ಯವಿರುವ ಶಸ್ತ್ರಾಸ್ತ್ರಗಳ ಪೂರೈಕೆ ಕುರಿತು ಮಹತ್ವದ ಮಾತುಕತೆ ನಡೆಸಲಾಗಿದೆ. ಅಂತೆಯೇ ಈಗಿರುವ ದಾಸ್ತಾನು ಪ್ರಮಾಣವನ್ನೂ ಕೂಡ 40 ದಿನಗಳಿಗೆ ಏರಿಕೆ ಮಾಡಲು ಅಧಿಕಾರಿಗಳು ನಿರ್ಧರಿಸಿದ್ದಾರೆ ಎಂದು ತಿಳಿದುಬಂದಿದೆ.
ವಿಶ್ವದಲ್ಲೇ 2ನೇ ಅತ್ಯಂತ ದೊಡ್ಡ ಪ್ರಮಾಣದ ಭೂಸೇನೆಯನ್ನು ಹೊಂದಿರುವ ಭಾರತದ ಬಳಿ ಕೇವಲ 10 ದಿನಗಳಿಗಾಗುವಷ್ಟು ಶಸ್ತ್ರಾಸ್ತ್ರ ದಾಸ್ತಾನಿದ್ದು, ಕಳೆದ ಮೂರು ವರ್ಷಗಳಲ್ಲಿ ಕೇಂದ್ರ ಸರ್ಕಾರದ ಈ ದಾಸ್ತಾನು ಪ್ರಮಾಣವನ್ನು ಏರಿಕೆ ಮಾಡುವ ಕುರಿತು ಗಮನಾರ್ಹ ಹೆಜ್ಜೆ ಇಟ್ಟಿಲ್ಲ ಎಂದು ಸಿಎಜಿ ವರದಿ ನೀಡಿತ್ತು. ಈ ವರದಿ ದೇಶಾದ್ಯಂತ ವ್ಯಾಪಕ ಸುದ್ದಿಗೆ ಗ್ರಾಸವಾಗಿತ್ತು.
Advertisement