
ನವದೆಹಲಿ: ಐದರಿಂದ ಎಂಟನೇ ತರಗತಿವರೆಗಿನ ವಿದ್ಯಾರ್ಥಿಗಳನ್ನು ಅನುತ್ತೀರ್ಣಗೊಳಿಸುವಂತಿಲ್ಲ ಎಂಬ ನೀತಿಯನ್ನು ರದ್ದುಗೊಳಿಸುವ ಕುರಿತು ಕೇಂದ್ರ ಸರ್ಕಾರ ಸುಳಿವು ನೀಡಿದ್ದು, ಈ ಬಗ್ಗೆ ಹೊಸ ಮಸೂದೆ ಮಂಡಿಸುವುದಾಗಿ ತಿಳಿಸಿದೆ.
ಈ ಬಗ್ಗೆ ಶುಕ್ರವಾರ ಲೋಕಸಭೆಗೆ ಮಾಹಿತಿ ನೀಡಿದ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಪ್ರಕಾಶ್ ಜಾವ್ಡೇಕರ್ ಅವರು, "ನೋ ಡಿಟೆನ್ಶನ್ ಪಾಲಿಸಿಯಿಂದ ಶಿಕ್ಷಣದ ಗುಣಮಟ್ಟ ಕುಸಿಯುತ್ತಿದೆ ಎಂದು ಹಲವು ರಾಜ್ಯಗಳು ಆತಂಕ ವ್ಯಕ್ತಪಡಿಸಿವೆ. ಹೀಗಾಗಿ ತಿದ್ದುಪಡಿ ಮಸೂದೆ ಮಂಡಿಸಲಾಗುವುದು ಎಂದು ತಿಳಿಸಿದರು.
5ರಿಂದ 8ನೇ ತರಗತಿ ಮಕ್ಕಳು ಮಾರ್ಚ್ ನಲ್ಲಿ ಪರೀಕ್ಷೆ ಬರೆಯಲಿದ್ದಾರೆ. ಇಲ್ಲಿ ಅನುತ್ತೀರ್ಣರಾದವರಿಗೆ ಮೇನಲ್ಲಿ ಮತ್ತೊಮ್ಮೆ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಡಲಾಗುವುದು. ಆಗಲೂ ಅವರು ಅನುತ್ತೀರ್ಣರಾದರೆ ಅಂಥವರನ್ನು ಅದೇ ತರಗತಿಯಲ್ಲಿ ಮತ್ತೊಂದು ವರ್ಷ ಉಳಿಸಲಾಗುವುದು. ಅನುತ್ತೀರ್ಣಗೊಳಿಸಿದರೆ ಮಕ್ಕಳು ಪ್ರೇರಣೆ ಕಳೆದುಕೊಳ್ಳುತ್ತಾರೆ. ಕೆಲವು ಸಂದರ್ಭದಲ್ಲಿ ಶಾಶ್ವತವಾಗಿ ಶಾಲೆಯನ್ನೇ ತೊರೆಯಬಹುದು ಎಂಬ ಕಾರಣಕ್ಕೆ ಈ ಹಿಂದೆ ನಿರ್ಬಂಧ ರಹಿತ ನೀತಿ ಜಾರಿಗೆ ತರಲಾಗಿತ್ತು ಎಂದು ಸಚಿವರು ಹೇಳಿದರು.
Advertisement