
ನವದೆಹಲಿ: ರಾಜ್ಯಸಭೆ ಕಲಾಪಕ್ಕೆ ಗೈರಾದ ಬಿಜೆಪಿ ಶಾಸಕರ ವಿರುದ್ಧ ಬಿಜೆಪಿ ರಾಷ್ಟ್ಯಾಧ್ಯಕ್ಷ ಅಮಿತ್ ಶಾ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ತಿಳಿದುಬಂದಿದೆ.
ದೆಹಲಿಯಲ್ಲಿ ಇಂದು ಸಂಸದರೊಂದಿಗೆ ನಡೆದ ಸಭೆಯಲ್ಲಿ ಅಮಿತ್ ಶಾ ಅಸಮಾಧಾನ ಹೊರಹಾಕಿದ್ದು, ಕಲಾಪಕ್ಕೆ ಗೈರಾದ ಕೆಲ ಕೇಂದ್ರ ಸಚಿವರ ವಿರುದ್ಧವೂ ಅಮಿತ್ ಶಾ ಗರಂ ಆಗಿದ್ದರು ಎಂದು ತಿಳಿದುಬಂದಿದೆ. ಬಿಜೆಪಿ ಸಂಸದರ ಗೈರು ಹಾಜರಾಚಿಯಿಂದಾಗಿ ಸದನದಲ್ಲಿ ಸರ್ಕಾರ ಮುಜುಗರಕ್ಕೀಡಾಗಿದ್ದು, ಸೂಕ್ತ ಸಂದರ್ಭದಲ್ಲಿ ಸಂಸದರ ಉಪಸ್ಥಿತಿ ಮುಖ್ಯವಾಗುತ್ತದೆ. ಹೀಗಾಗಿ ಈ ಬಗ್ಗೆ ತಾವು ಪ್ರತಿಯೊಬ್ಬ ಸಂಸದನೊಂದಿಗೆ ಪ್ರತ್ಯೇಕವಾಗಿ ಚರ್ಚೆ ನಡೆಸುತ್ತೇನೆ ಎಂದು ಅಮಿತ್ ಶಾ ಹೇಳಿದ್ದಾರೆ ಎಂದು ತಿಳಿದುಬಂದಿದೆ.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇದು ಒಳ್ಳೆಯ ಬೆಳವಣಿಗೆಯಲ್ಲ. ಆಡಳಿತಾ ರೂಢ ಸದಸ್ಯರೇ ಗೈರಾದರೆ ಪ್ರಮುಖ ಮಸೂದೆಗಳ ಅನುಮೋದನೆ ಸಂದರ್ಭದಲ್ಲಿ ಪ್ರತಿಪಕ್ಷಗಳು ಇದರ ಲಾಭ ಪಡೆಯುವ ಸಾಧ್ಯತೆ ಇರುತ್ತದೆ. ಜನರಲ್ಲೂ ಇದು ಕೆಟ್ಟ ಸಂದೇಶ ಸಾರುವ ಅಪಾಯವಿರುತ್ತದೆ. ಜನರು ತಮ್ಮ ಪ್ರತಿನಿಧಿಗಳಾಗಿ ನಮ್ಮನ್ನು ಆಯ್ಕೆ ಮಾಡಿ ಕಳುಹಿಸಿರುತ್ತಾರೆ. ಅವರ ಸಮಸ್ಯೆಗಳನ್ನು ಸದನದಲ್ಲಿ ಪ್ರಸ್ತಾಪಿಸಿ ಬಗೆಹರಿಸಬೇಕಾದ್ದು ನಮ್ಮ ಕರ್ತವ್ಯ ಎಂದು ಅಮಿತ್ ಶಾ ಹೇಳಿದ್ದಾರೆ.
ಅಂತೆಯೇ ಲೋಕಸಭೆ ಮತ್ತು ರಾಜ್ಯಸಭೆ ಕಲಾಪ ನಡೆಯುವಾಗ ಸಂಸದರ ಕಡ್ಡಾಯವಾಗಿ ಹಾಜರಿರಬೇಕು ಎಂದು ಅಮಿತ್ ಶಾ ಹೇಳಿದ್ದಾರೆ. ಇನ್ನು ಇಂದಿನ ಸಭೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಕೂಡ ಹಾಜರಾಗಬೇಕಿತ್ತು. ಆದರೆ ಕಾರ್ಯಕ್ರಮ ನಿಮಿತ್ತ ಅವರು ಇಂದು ಹಾಜರಾಗಲಿಲ್ಲ. ಕಳೆದ ವಾರ ನಡೆದ ಸಭೆಯಲ್ಲಿ ಪ್ರಧಾನಿ ಮೋದಿ ಹಾಜರಿದ್ದರು.
ನಿನ್ನೆ ನಡೆದ ಉಭಯ ಸದನಗಳಲ್ಲಿ ಮಧ್ಯಾಹ್ನದ ಊಟದ ಬಳಿಕ ಎನ್ ಡಿಎ ಮೈತ್ರಿಕೂಟದ ಸುಮಾರು 30 ಮಂದಿ ಸಂಸದರು ಗೈರಾಗಿದ್ದರು. ಪ್ರಮುಖ ವಿಚಾರವೆಂದರೆ ಕೇಂದ್ರದ 5 ಸಚಿವರೂ ಕೂಡ ಗೈರಾಗಿರುವುದು ಅಮಿತ್ ಶಾ ಅವರ ಅಸಮಾಧಾನಕ್ಕೆ ಕಾರಣ ಎಂದು ಹೇಳಲಾಗುತ್ತಿದೆ.
Advertisement