ಶ್ರೀನಗರ: ಉತ್ತರ ಕಾಶ್ಮೀರದ ಕುಪ್ವಾರ ಜಿಲ್ಲೆಯ ಮಚಿಲ್ ಸೆಕ್ಟರ್ ನಲ್ಲಿ ಗಡಿ ನುಸುಳಲು ಯತ್ನಿಸುತ್ತಿದ್ದ ಮೂವರು ಉಗ್ರರನ್ನು ಭಾರತೀಯ ಸೇನೆ ಹೊಡೆದುರುಳಿಸಿದೆ ಎಂದು ಬುಧವಾರ ಅಧಿಕಾರಿಗಳು ತಿಳಿಸಿದ್ದಾರೆ.
ಕಳೆದ ರಾತ್ರಿ ಅಕ್ರಮವಾಗಿ ಗಡಿ ಪ್ರವೇಶಿಸಿ ಕಣಿವೆ ರಾಜ್ಯಕ್ಕೆ ನುಗ್ಗಲು ಯತ್ನಿಸುತ್ತಿದ್ದ ಉಗ್ರರನ್ನು ಭಾರತೀಯ ಸೇನೆ ಹತ್ಯೆ ಮಾಡಿದೆ ಎಂದು ಸೇನಾ ಅಧಿಕಾರಿಗಳು ಹೇಳಿದ್ದಾರೆ.
ದಟ್ಟ ಅರಣ್ಯದ ಮಧ್ಯೆ ಗಡಿ ಪ್ರವೇಶಿಸಲು ಯತ್ನಿಸಿದ ಉಗ್ರರ ಮತ್ತು ಸೇನಾ ಸಿಬ್ಬಂದಿ ನಡುವೆ ಭಾರಿ ಗುಂಡಿನ ಕಾಳಗ ನಡೆದಿದ್ದು, ಅಂತಿಮವಾಗಿ ಮೂವರು ಉಗ್ರರನ್ನು ಹೊಡೆದುರುಳಿಸಲಾಗಿದೆ. ಆದರೆ ಇನ್ನು ಅವರ ಗುರುತು ಪತ್ತೆಯಾಗಿಲ್ಲ.
ಕಳೆದ 15 ದಿನಗಳಲ್ಲಿ ಮೂರನೇ ಬಾರಿ ಭಾರತೀಯ ಸೇನೆ ಉಗ್ರರ ಗಡಿ ನುಸುಳುವಿಕೆ ಯತ್ನವನ್ನು ವಿಫಲಗೊಳಿಸಿದೆ.