ಮೂರು ದಶಕದ ನಂತರ, ಬಹುಶಃ ಈ ಬಾರಿ ಒಮ್ಮತದ ರಾಷ್ಟ್ರಪತಿ ಆಯ್ಕೆ ಇಲ್ಲ!

ಈ ಬಾರಿ ರೈಸಿನಾ ಹಿಲ್ಸ್ ನಲ್ಲಿರುವ ರಾಷ್ಟ್ರಪತಿ ಭವನದ ಆಸನವನ್ನು ಅಲಂಕರಿಸುವವರು ಯಾರು ಎಂಬ...
ರೈಸಿನಾ ಹಿಲ್ ನ ಸಂಗ್ರಹ ಚಿತ್ರ
ರೈಸಿನಾ ಹಿಲ್ ನ ಸಂಗ್ರಹ ಚಿತ್ರ
ನವದೆಹಲಿ: ಈ ಬಾರಿ ರೈಸಿನಾ ಹಿಲ್ಸ್ ನಲ್ಲಿರುವ ರಾಷ್ಟ್ರಪತಿ ಭವನದ ಆಸನವನ್ನು ಅಲಂಕರಿಸುವವರು ಯಾರು ಎಂಬ ಕುತೂಹಲ ಇಡೀ ದೇಶವಾಸಿಗಳನ್ನು ಕಾಡುತ್ತಿದೆ. 
ಸರ್ಕಾರದ ಮೂಲಗಳಿಂದ ಸಿಕ್ಕಿರುವ ಮಾಹಿತಿ ಪ್ರಕಾರ, ವಿರೋಧ ಪಕ್ಷಗಳನ್ನು ಸಂಪರ್ಕಿಸದೆಯೇ ತನ್ನ ಬೆಂಬಲಿಗರ ಸಂಖ್ಯೆ ಅಧಿಕವಾಗಿರುವುದರಿಂದ ಬಿಜೆಪಿ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸುವ ವಿಶ್ವಾಸವನ್ನು ಹೊಂದಿದೆ.
ಕಳೆದ ಮೂರು ದಶಕಗಳಲ್ಲಿ ಇದೇ ಮೊದಲ ಬಾರಿಗೆ ಒಮ್ಮತದ ಅಗತ್ಯವಿಲ್ಲದೆ ಆಡಳಿತ ಪಕ್ಷ ತನ್ನ ಆಯ್ಕೆಯ ಅಭ್ಯರ್ಥಿಯನ್ನು ರಾಷ್ಟ್ರಪತಿ ಕಣಕ್ಕಿಳಿಸುತ್ತಿದೆ. 1987ರಲ್ಲಿ ವಿರೋಧ ಪಕ್ಷವನ್ನು ನಿರ್ಲಕ್ಷಿಸಿ ಕಾಂಗ್ರೆಸ್ ಪಕ್ಷ ರಾಷ್ಟ್ರಪತಿ ಹುದ್ದೆಗೆ ಆರ್.ವೆಂಕಟರಾಮನ್ ಅವರನ್ನು ಸ್ಪರ್ಧಾ ಕಣಕ್ಕಿಳಿಸಿತ್ತು.
ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ಅಧ್ಯಕ್ಷ ಅಮಿತ್ ಶಾ ರಾಷ್ಟ್ರಪತಿ ಅಭ್ಯರ್ಥಿಗಳ ಹೆಸರನ್ನು ಕಿರುಪಟ್ಟಿಗೊಳಿಸಿದ್ದು ಕಳೆದ ವಾರ ನಾಗ್ಪುರದಲ್ಲಿ ನಡೆದ ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಜೊತೆ ಸಭೆಯಲ್ಲಿ ಅಮಿತ್ ಶಾ ಚರ್ಚೆ ನಡೆಸಿದ್ದರು ಎನ್ನಲಾಗಿದೆ.
ಅಧ್ಯಕ್ಷೀಯ ಸಮೀಕ್ಷೆ ನಿರ್ವಹಣೆಯಲ್ಲಿ ಸಂಸದೀಯ ವ್ಯವಹಾರಗಳ ಸಚಿವ ಅನಂತ್ ಕುಮಾರ್ ಬಿಜೆಪಿಯ ಮುಖ್ಯ ಚುನಾವಣಾ ಅಧಿಕಾರಿಯಾಗಿದ್ದಾರೆ. ಬಿಜೆಪಿಯ ರಾಷ್ಟ್ರಪತಿ ಅಭ್ಯರ್ಥಿಗೆ ಎನ್ ಡಿಎ ಮೈತ್ರಿಕೂಟದ ಬೆಂಬಲ ಕೋರಲು ಅನಂತ್ ಕುಮಾರ್ ಸಮನ್ವಯತೆ ತರಲಿದ್ದಾರೆ.  ಅನಂತ್ ಕುಮಾರ್ ಅವರ ಹೆಸರನ್ನು ಇದೇ 15ರಂದು ಬಿಜೆಪಿ ಘೋಷಿಸಲಿದೆ. ನಂತರ ಅವರು ಪ್ರತಿ ರಾಜ್ಯಗಳಿಂದ ಬೆಂಬಲ ಕೋರಲಿದ್ದಾರೆ.
ಕಳೆದ ಮಾರ್ಚ್ ತಿಂಗಳಲ್ಲಿ ಉತ್ತರ ಪ್ರದೇಶ ಹಾಗೂ ಉತ್ತರಾಖಂಡ ಚುನಾವಣೆಗಳಲ್ಲಿ ಗೆದ್ದ ನಂತರ ಬಿಜೆಪಿ ನೇತೃತ್ವದ ಮೈತ್ರಿಕೂಟ ಅರ್ಧದಾರಿ ಕ್ರಮಿಸಿದೆ ಎಂದು ಹೇಳಬಹುದು. ಎನ್ ಡಿಎ ಮೈತ್ರಿಕೂಟ ಶೇಕಡಾ 48.3 ಮತಗಳನ್ನು ಹೊಂದಿದ್ದು ರಾಷ್ಟ್ರಪತಿ ಚುನಾವಣೆಯಲ್ಲಿ ಗೆಲ್ಲಲು ಕೇವಲ ಶೇಕಡಾ 1.7 ಮತಗಳ ಅಗತ್ಯವಿದೆ.  
ಅಧ್ಯಕ್ಷೀಯ ಚುನಾವಣೆಯ ಎಲೆಕ್ಟೊರಲ್ ಕಾಲೇಜ್ ನಲ್ಲಿ ಒಟ್ಟು 10,95,619 ಮತಗಳ ಬಲವಿದ್ದು, ಅದರಲ್ಲಿ ಎನ್ ಡಿಎ 5,27,371 ಮತ್ತು ಉತ್ತರ ಪ್ರದೇಶದಿಂದ 1,73,849 ಮತಗಳಿವೆ.
ಇತ್ತೀಚೆಗೆ ಬಿಜೆಪಿ ಮತ್ತು ಟಿಆರ್ಎಸ್ ನಡುವೆ ಭಿನ್ನಾಭಿಪ್ರಾಯಗಳಿದ್ದರೂ ಕೂಡ ಮೋದಿಯವರು ಇತ್ತೀಚೆಗೆ ಜಗನ್ ಮೋಹನ್ ರೆಡ್ಡಿ ಮತ್ತು ತೆಲಂಗಾಣದ ಚಂದ್ರಶೇಖರ್ ರಾವ್ ಜೊತೆ ನಡೆಸಿದ ಸಂಧಾನ ಮಾತುಕತೆ ಲಾಭವನ್ನುಂಟುಮಾಡುವ ನಿರೀಕ್ಷೆಯಿದೆ.
ಈ ಮಧ್ಯೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ 17 ವಿರೋಧ ಪಕ್ಷಗಳನ್ನು ಸಂಪರ್ಕಿಸಿ ಅವರ ಮಧ್ಯೆ ಒಮ್ಮತ ಸಾಧಿಸಿ ಎನ್ ಡಿಎ ಅಭ್ಯರ್ಥಿ ಎದುರು ತಮ್ಮ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಮುಂದಾಗಿದ್ದಾರೆ.
ಕಾಂಗ್ರೆಸ್ ತನ್ನದೇ ಅಭ್ಯರ್ಥಿಯನ್ನು ಕಣಕ್ಕಿಳಿಸಲು ನಿರ್ಧರಿಸಿದ್ದರೂ ಕೂಡ ಸ್ವಾತಂತ್ರ್ಯ ನಂತರ ಇದೇ ಮೊದಲ ಬಾರಿಗೆ ಕಾಂಗ್ರೆಸ್ ತನ್ನ ಮೈತ್ರಿ ಪಕ್ಷಗಳ ಜೊತೆಗೆ ಚರ್ಚೆ ನಡೆಸಿ ಅವಿರೋಧ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಮುಂದಾಗಿದೆ.
ಈ ಬಾರಿಯ ಅಧ್ಯಕ್ಷೀಯ ಚುನಾವಣೆ ಲಿಟ್ಮಸ್ ಪರೀಕ್ಷೆ ಎಂದು ಪರಿಗಣಿಸಲಾಗಿದ್ದು, ಎನ್ನಾ ಎನ್ ಡಿಯೇತರ ಪಕ್ಷಗಳನ್ನು ಒಂದೇ ವೇದಿಕೆಯಡಿ ತರುವ ನಿಟ್ಟಿನಲ್ಲಿ ಸೋನಿಯಾ ಗಾಂಧಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. 2019ರ ಲೋಕಸಭಾ ಚುನಾವಣೆಗೆ ದೊಡ್ಡ ಮೈತ್ರಿಪಕ್ಷ ರಚಿಸಲು ಇದು ಪೂರ್ವಾಭ್ಯಾಸ ಕೂಡ ಆಗಿದೆ. 
ಅಧ್ಯಕ್ಷೀಯ ಚುನಾವಣೆ ಜುಲೈ 17ರಂದು ನಡೆಯಲಿದೆ. ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಇದೇ 20ರಿಂದ 28ರವರೆಗೆ ನಡೆಯಲಿದೆ. ಮತ ಎಣಿಕೆ ಜುಲೈ 20ರಂದು ನಡೆಯಲಿದೆ. ಇಷ್ಟು ಬಾರಿ ಮಾತ್ರ ಅಧ್ಯಕ್ಷರಾಗಬಹುದು ಎಂಬ ನಿಯಮ ಭಾರತದಲ್ಲಿ ಇಲ್ಲವಾದ್ದರಿಂದ ಈಗಾಗಲೇ ರಾಷ್ಟ್ರಪತಿಯಾದವರು ಮರು ಆಯ್ಕೆ ಬಯಸಿ ನಿಲ್ಲಬಹುದು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com