ಕಾಂಗ್ರೆಸ್ ನಾಯಕ ಸಂದೀಪ್ ದೀಕ್ಷಿತ್
ದೇಶ
ಸೇನಾ ಮುಖ್ಯಸ್ಥ ಬಿಪಿನ್ ರಾವತ್'ರನ್ನು 'ಬೀದಿ ಗೂಂಡಾ' ಎಂದ ಕಾಂಗ್ರೆಸ್ ನಾಯಕ
ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಅವರನ್ನು 'ಬೀದಿ ಗೂಂಡಾ' ಎಂದು ಹೇಳುವ ಮೂಲಕ ಕಾಂಗ್ರೆಸ್ ನಾಯಕ ಸಂದೀಪ್ ದೀಕ್ಷಿತ್ ಅವರು ವಿವಾದಕ್ಕೆ ಸಿಲುಕಿ ಹಾಕಿಕೊಂಡಿದ್ದಾರೆ...
ನವದೆಹಲಿ: ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಅವರನ್ನು 'ಬೀದಿ ಗೂಂಡಾ' ಎಂದು ಹೇಳುವ ಮೂಲಕ ಕಾಂಗ್ರೆಸ್ ನಾಯಕ ಸಂದೀಪ್ ದೀಕ್ಷಿತ್ ಅವರು ವಿವಾದಕ್ಕೆ ಸಿಲುಕಿ ಹಾಕಿಕೊಂಡಿದ್ದಾರೆ.
ನಿನ್ನೆಯಷ್ಟೇ ಪತ್ರಕರ್ತರೊಂದಿಗೆ ಮಾತನಾಡಿದ್ದ ಸಂದೀಪ್ ದೀಕ್ಷಿತ್ ಅವರು, ಪಾಕಿಸ್ತಾನ ಸೇನಾ ಮುಖ್ಯಸ್ಥರು ಕೆಟ್ಟ ಭಾಷೆ ಬಳಕೆ ಮಾಡಿದರೆ, ಭಾರತೀಯ ಸೇನಾ ಮುಖ್ಯಸ್ಥರೇಕೆ ಅವರ ಹೇಳಿಕೆಗಳಿಗೆ ಬೀದಿ ಗೂಂಡಾದಂತೆ ಪ್ರತಿಕ್ರಿಯೆ ನೀಡಬೇಕು ಎಂದು ಹೇಳಿದ್ದರು.
ಸೇನಾ ಮುಖ್ಯಸ್ಥರನ್ನು ಬೀದಿ ಗೂಂಡಾ ಎಂದು ಕರೆದಿದ್ದಕ್ಕೆ ಬಿಜೆಪಿ ತೀವ್ರವಾಗಿ ಕಿಡಿಕಾರಿದೆ. ಸಂದೀಪ್ ದೀಕ್ಷಿತ್ ಅವರ ಹೇಳಿಕೆಗೆ ಸಾಮಾಜಿಕ ಜಾಲತಾಣ ಟ್ವಿಟ್ಟರ್ ನಲ್ಲಿ ಪ್ರತಿಕ್ರಿಯೆ ನೀಡಿರುವ ಕೇಂದ್ರ ಸಚಿವ ಕಿರಣ್ ರಿಜಿಜು ಅವರು, ಕಾಂಗ್ರೆಸ್ ಒಳಗೆ ಏನು ನಡೆಯುತ್ತಿದೆ? ಸೇನಾ ಮುಖ್ಯಸ್ಥರನ್ನು ಬೀದಿ ಗೂಂಡಾ ಎನ್ನಲು ಕಾಂಗ್ರೆಸ್ ಎಷ್ಟು ಧೈರ್ಯ? ಎಂದು ಹೇಳಿದ್ದಾರೆ.
ತೀವ್ರ ಟೀಕೆಗ ಹಾಗೂ ವಿರೋಧಗಳು ವ್ಯಕ್ತವಾದ ಹಿನ್ನಲೆಯಲ್ಲಿ ತಮ್ಮ ಹೇಳಿಕೆ ಕುರಿತಂತೆ ಯೂ-ಟರ್ನ್ ಹೊಡೆದ ಸಂದೀಪ್ ದೀಕ್ಷಿತ್ ಅವರು, ಹೇಳಿಕೆ ಕುರಿತಂತೆ ಕ್ಷಮೆಯಾಚಿಸಿದ್ದಾರೆ.
ಸೇನಾ ಮುಖ್ಯಸ್ಥರ ಕುರಿತು ಹೇಳಿಕೆ ನೀಡುವಾಗ ಎಚ್ಚರವಹಿಸಬೇಕಿತ್ತು. ನಾನು ಬಳಕೆ ಮಾಡಿದ ಪದ ಕುರಿತು ಕ್ಷಮೆಯಾಚಿಸುತ್ತೇನೆಂದು ಹೇಳಿದ್ದಾರೆ.
ರಾಷ್ಟ್ರೀಯ ಸುದ್ದಿವಾಹಿನಿ ನಡೆಸಿದ್ದ ಸಂದರ್ಶನವೊಂದರಲ್ಲಿ ಮಾತನಾಡಿದ್ದ ಬಿಪಿನ್ ರಾವತ್ ಅವರು, ಪ್ರತಿಭಟನಕಾರರು ತಮ್ಮತ್ತ ಕಲ್ಲೆಸೆಯುವುದಕ್ಕೆ ಬದಲು ಶಸ್ತ್ರಾಸ್ತ್ರಗಳನ್ನು ಬಳಸುತ್ತಿದ್ದರೆ ನಮ್ಮ ಕಾರ್ಯ ಸುಲಭವಾಗುತ್ತಿತ್ತು ಎಂದು ಹೇಳಿದ್ದರು.
ಈ ಹೇಳಿಕೆಗೆ ಸಾಕಷ್ಟು ಟೀಕೆಗಳು ವ್ಯಕ್ತವಾಗಿದ್ದವು. ಸೇನಾ ಮುಖ್ಯಸ್ಥರ ಹೇಳಿಕೆಗೆ ಪ್ರಕಾಶ್ ಕಾರಟ್ ಅವರು ವಿರೋಧ ವ್ಯಕ್ತಪಡಿಸಿದ್ದಾರೆ. ಸೇನಾ ಮುಖ್ಯಸ್ಥರ ಹೇಳಿಕೆಯು ಅನಗತ್ಯ ಪ್ರಚೋದನೆ ನೀಡುವಂತಹದ್ದು ಮತ್ತು ಹಿರಿಯ ಸೇನಾ ಮುಖ್ಯಸ್ಥರಿಗೆ ಯೋಗ್ಯವಾದುದಲ್ಲ ಎಂದು ಲೇಖನವೊಂದರಲ್ಲಿ ಉಲ್ಲೇಖಿಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ