ಜೈಸ್ಲ್ಮೇರ್: ಜೈಸ್ಲ್ಮೆರ್ ನಿಂದ ತಮ್ಮ ರಾಜ್ಯಕ್ಕೆ ಗೋವುಗಳನ್ನು ಸಾಗಿಸುತ್ತಿದ್ದ ತಮಿಳುನಾಡು ಅಧಿಕಾರಿಗಳ ವಾಹನದ ಮೇಲೆ ಗೋರಕ್ಷಕರು ದಾಳಿ ಮಾಡಿದ್ದು ರಾಜಸ್ತಾನದ ರಾಷ್ಟ್ರೀಯ ಹೆದ್ದಾರಿ 15ನ್ನು ಬಂದ್ ಮಾಡಿದ್ದಾರೆ.
ರಾಜಸ್ತಾನದ ಬರ್ಮೇರ್ ಜಿಲ್ಲೆಯಲ್ಲಿ ಕಳೆದ ರಾತ್ರಿ ಗೋವುಗಳ ಕಳ್ಳಸಾಗಣೆ ಮಾಡುತ್ತಿದ್ದಾರೆ ಎಂದು ಶಂಕಿಸಿ 50ಕ್ಕೂ ಹೆಚ್ಚು ಗೋರಕ್ಷಕರು ದಾಳಿ ಮಾಡಿದ್ದು ವಾಹನದ ಮೇಲೆ ಕಲ್ಲು ತೂರಾಟ ನಡೆಸಿದ್ದರು. ಈ ಪ್ರಕರಣ ಸಂಬಂಧ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.
ಪ್ರಕರಣ ಸಂಬಂಧ ಶೀಘ್ರ ಕ್ರಮಕೈಗೊಳ್ಳದ್ದರಿಂದ ಪೊಲೀಸ್ ಇನ್ಸ್ ಪೆಕ್ಟರ್ ಸೇರಿದಂತೆ ಏಳು ಪೊಲೀಸರ ವಿರುದ್ಧ ಕ್ರಮಕೈಗೊಳ್ಳಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ತಮಿಳುನಾಡಿನ ಪಶುಪಾಲನಾ ಇಲಾಖೆ ಅಧಿಕಾರಿಗಳು 50 ಜಾನುವಾರುಗಳನ್ನು ಖರೀದಿಸಿದ್ದರು. ಅವುಗಳನ್ನು ಐದು ಟ್ರಕ್ ಗಳ ಮೂಲಕ ಸಾಗಿಸುತ್ತಿದ್ದರು. ಜಾನುವಾರುಗಳ ಸಾಗಾಣೆಗೆ ಬೇಕಾದ ಎಲ್ಲಾ ಪ್ರಮಾಣಪತ್ರಗಳನ್ನು ಅಧಿಕಾರಿಗಳು ಪಡೆದಿದ್ದರು. ಆದರೆ ಕೆಲ ಗೋರಕ್ಷಕರು ವಾಹನಗಳ ಮೇಲೆ ದಾಳಿ ಮಾಡಿದ್ದರು.