ಶ್ರೀನಗರ: ಭಯೋತ್ಪಾದನೆ ಪೀಡಿತ ದಕ್ಷಿಣ ಕಾಶ್ಮೀರದಲ್ಲಿ ಭಾರತೀಯ ಸೇನೆ ನಡೆಸಿದ ದಿಢೀರ್ ಕಾರ್ಯಾಚರಣೆಯಲ್ಲಿ ಹಿಜ್ಬುಲ್ ಅಗ್ರ ಸಂಘಟನೆಯ ಇಬ್ಬರು ಉಗ್ರರನ್ನು ಬಂಧಿಸಲಾಗಿದೆ.
ದಕ್ಷಿಣ ಕಾಶ್ಮೀರದ ಹಂದ್ವಾರದಲ್ಲಿ ಉಗ್ರರು ಅಡಗಿರುವ ಕುರಿತು ಖಚಿತ ಮಾಹಿತಿ ಪಡೆದ ಸೇನಾ ಪಡೆಗಳು ದಿಢೀರ್ ದಾಳಿ ಮಾಡಿದ್ದು, ಕಾರ್ಯಾಚರಣೆಯಲ್ಲಿ ಇಬ್ಬರು ಉಗ್ರಗಾಮಿಗಳನ್ನು ಜೀವಂತ ಸೆರೆ ಹಿಡಿಯಲಾಗಿದೆ. ದಾಳಿ ವೇಳೆ ಉಗ್ರರು ಅಡಗಿದ್ದ ಪ್ರದೇಶದಲ್ಲಿ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳು ಕಂಡುಬಂದಿದ್ದು, ಪೊಲೀಸರು ಅವುಗಳನ್ನು ವಶಕ್ಕೆ ಪಡೆದಿದ್ದಾರೆ ಎಂದು ಹೇಳಲಾಗುತ್ತಿದೆ. ಪ್ರಸ್ತುತ ಉಗ್ರರನ್ನು ಅಜ್ಞಾತ ಸ್ಥಳಕ್ಕೆ ಕರೆದೊಯ್ಯಲಾಗಿದ್ದು, ವ್ಯಾಪಕ ತನಿಖೆ ನಡೆಸಲಾಗುತ್ತಿದೆ.
ಕಳೆದ ಶನಿವಾರವಷ್ಟೇ ಗಡಿಯಲ್ಲಿ ಒಳ ನುಸುಳುವಿಕೆಯನ್ನು ತಡೆದಿದ್ದ ಭಾರತೀಯ ಯೋಧರು ಓವ್ರ ಉಗ್ರಗಾಮಿಯನ್ನು ಹೊಡೆದುರುಳಿಸಿದ್ದರು. ಅಲ್ಲದೆ ಹಲವು ಉಗ್ರರು ಒಳ ನುಸುಳಿರುವ ಕುರುತ ಶಂಕೆ ವ್ಯಕ್ತವಾದ ಹಿನ್ನಲೆಯಲ್ಲಿ ವ್ಯಾಪಕ ಶೋಧಕಾರ್ಯ ಕೂಡ ನಡೆಸಲಾಗಿತ್ತು. ಇದೀಗ ಹಿಜ್ಬುಲ್ ಸಂಘಟನೆಯ ಉಗ್ರರು ಸೆರೆ ಸಿಕ್ಕಿರುವುದು ಈ ಭಾಗದಲ್ಲಿ ಇನ್ನೂ ಹಿಜ್ಬುಲ್ ಉಗ್ರ ಸಂಘಟನೆಯ ಕರಿಛಾಯೆ ಇದೆ ಎದು ಹೇಳಲಾಗುತ್ತಿದ.
Advertisement