ಕೇರಳ: ಶೃಂಗೇರಿ ಶ್ರೀಗಳಿಗೆ ಮೀಸಲಾಗಿದ್ದ ಆಸನ ತೆರವುಗೊಳಿಸಿದ ಕೇರಳ ಸಚಿವ!?

ಕೇರಳಕ್ಕೆ ಭೇಟಿ ನೀಡಿರುವ ಶೃಂಗೇರಿ ಶಾರದಾ ಪೀಠದ ಶ್ರೀಗಳು ಭಾಗವಹಿಸಬೇಕಿದ್ದ ಕಾರ್ಯಕ್ರಮದಲ್ಲಿ ಶ್ರೀಗಳಿಗೆ ಮೀಸಲಿರಿಸಲಾಗಿದ್ದ ಆಸನವನ್ನು ಕೇರಳದ ದೇವಸ್ವಂ ಸಚಿವ ಕಡನಪಳ್ಳಿ ಸುರೇಂದ್ರನ್ ಹಾಗೂ...
ಕೇರಳ: ಶೃಂಗೇರಿ ಶ್ರೀಗಳಿಗೆ ಮೀಸಲಿರಿಸಲಾಗಿದ್ದ ಆಸನ ತೆರವುಗೊಳಿಸಿದ ಕೇರಳ ಸಚಿವ!?
ಕೇರಳ: ಶೃಂಗೇರಿ ಶ್ರೀಗಳಿಗೆ ಮೀಸಲಿರಿಸಲಾಗಿದ್ದ ಆಸನ ತೆರವುಗೊಳಿಸಿದ ಕೇರಳ ಸಚಿವ!?
ತಿರುವನಂತಪುರಂ: ಕೇರಳಕ್ಕೆ ಭೇಟಿ ನೀಡಿರುವ ದಕ್ಷಿಣಾಮ್ನಾಯ ಶೃಂಗೇರಿ ಶಾರದಾ ಪೀಠದ ಶ್ರೀಗಳು ಭಾಗವಹಿಸಬೇಕಿದ್ದ ಕಾರ್ಯಕ್ರಮದಲ್ಲಿ ಶ್ರೀಗಳಿಗೆ ಮೀಸಲಿರಿಸಲಾಗಿದ್ದ ಆಸನವನ್ನು ಕೇರಳದ ದೇವಸ್ವಂ ಸಚಿವ ಕಡನಪಳ್ಳಿ ಸುರೇಂದ್ರನ್ ಹಾಗೂ ಶಾಸಕ ಶಿವಕುಮಾರ್ ತೆರವುಗೊಳಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. 
ಮಲಯಾಳಂ ನ ಮಂಗಳಂ ಎಂಬ ಪತ್ರಿಕೆ ಈ ಕುರಿತು ವರದಿ ಪ್ರಕಟಿಸಿದ್ದು, ವರದಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ತಿರುವನಂತಪುರ ಸಮೀಪದ ಮಿತ್ರಾನಂದಪುರ ಶ್ರೀ ಮಹಾವಿಷ್ಣು ದೇವಸ್ಥಾನದ ಕೆರೆ ಅಭಿವೃದ್ಧಿ ಕಾಮಗಾರಿಯ ಲೋಕಾರ್ಪಣಾ ಕಾರ್ಯಕ್ರಮದಲ್ಲಿ ಶೃಂಗೇರಿ ಮಠದ ಕಿರಿಯ ಪೀಠಾಧಿಪತಿಗಳಾದ ವಿಧುಶೇಖರ ಭಾರತೀ ಸ್ವಾಮಿಗಳು ಭಾಗಿಯಾಗಿದ್ದರು. ಅದೇ ಕಾರ್ಯಕ್ರಮದಲ್ಲಿದ್ದ ಕೇರಳದ ದೇವಸ್ವಂ ಸಚಿವ ಕಡನಪಳ್ಳಿ ಸುರೇಂದ್ರನ್ ಹಾಗೂ ಶಾಸಕ ಶಿವಕುಮಾರ್ ಶ್ರೀಗಳಿಗೆ ಮೀಸಲಿರಿಸಲಾಗಿದ್ದ ಆಸನವನ್ನು ತೆರವುಗೊಳಿಸಿದ್ದಾರೆ ಎಂದು ಮಲಯಾಳಂ ನ ಮಂಗಳಂ ಎಂಬ ಪತ್ರಿಕೆ ವರದಿ ಮಾಡಿದೆ. 
ಕಾರ್ಯಕ್ರಮಕ್ಕೆ ಆಗಮಿಸುತ್ತಿದ್ದಂತೆಯೇ ವೇದಿಕೆ ಮೇಲೆ ಸಿದ್ಧಗೊಳಿಸಲಾಗಿದ್ದ ಆಸನವನ್ನು ಗಮನಿಸಿದ ಸಚಿವ ಕಡನಪಳ್ಳಿ ಸುರೇಂದ್ರನ್ ಇದೇನೆಂದು ಪ್ರಶ್ನಿಸಿದ್ದಾರೆ, ಆಯೋಜರು ಈ ಬಗ್ಗೆ ಉತ್ತರಿಸುತ್ತಿದ್ದಂತೆಯೇ ಆಸನವನ್ನು ವೇದಿಕೆಯಿಂದ ಹಿಂದಕ್ಕೆ ಸರಿಸಿ, ಸಾಮಾನ್ಯವಾದ ಪ್ಲಾಸ್ಟಿಕ್ ಚೇರ್ ನ್ನು ಹಾಕಿದ್ದಾರೆ ಎಂದು ವರದಿ ಪ್ರಕಟವಾಗಿದೆ. ಈ ವರದಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ಕೇರಳ ಸರ್ಕಾರದ ಸಚಿವರ ನಡೆಗೆ ತೀವ್ರ ಖಂಡನೆ ವ್ಯಕ್ತವಾಗುತ್ತಿದೆ. 
ಕೇರಳ ಮಾಧ್ಯಮ ವರದಿಯನ್ನು ತಳ್ಳಿಹಾಕಿದ ಶೃಂಗೇರಿ ಮಠದ ಆಡಳಿತಾಧಿಕಾರಿಗಳು

ಶೃಂಗೇರಿ ಕಿರಿಯ ಶ್ರೀಗಳಿಗೆ ಮೀಸಲಾಗಿದ್ದ ಆಸನವನ್ನು ಕೇರಳ ಸಚಿವರು ತೆರವುಗೊಳಿಸಿದ್ದಾರೆ ಎಂದು ಪ್ರಕಟವಾಗಿದ್ದ ಮಲಯಾಳಂ ಪತ್ರಿಕೆಯ ವರದಿಯ ಬಗ್ಗೆ ಸ್ಪಷ್ಟನೆ ಕೇಳಲು ಕನ್ನಡಪ್ರಭ.ಕಾಂ ಶೃಂಗೇರಿ ಶಾರದಾ ಪೀಠದ ಆಡಳಿತಾಧಿಕಾರಿಗಳಾಗಿರುವ ವಿ.ಆರ್ ಗೌರಿಶಂಕರ್ ಅವರನ್ನು ಸಂಪರ್ಕಿಸಿದ್ದು, "ಸಾಮಾಜಿಕ ಜಾಲತಾಣ ಹಾಗೂ ಮಲಯಾಳಂ ಪತ್ರಿಕೆಯಲ್ಲಿ ಪ್ರಕಟವಾಗಿರುವ ವರದಿ ನಿಜವಲ್ಲ ಎಂದು ಹೇಳಿದ್ದಾರೆ. 

ವೇದಿಕೆ ಮೇಲೆ ಶ್ರೀಗಳು ಕೂಡುವ ಸಿಂಹಾಸನ ಕಾಣಲಿಲ್ಲ

ಮಲಯಾಳಂ ನ ಪತ್ರಿಕೆಯಲ್ಲಿ ಪ್ರಕಟವಾಗಿರುವ ವರದಿಯ ಜೊತೆ ಸಚಿವರು ವಿಶೇಷ ಆಸನವನ್ನು ತೆರವುಗೊಳಿಸುತ್ತಿರುವ ಫೋಟೊ ಸಹ ಪ್ರಕಟವಾಗಿದೆ. ಆದರೆ ಅಲ್ಲಿ ತೆರವುಗೊಳಿಸಲಾಗುತ್ತಿರುವ ಮಾದರಿಯ ವಿಶೇಷ ಆಸನವನ್ನು ಶೃಂಗೇರಿ ಶ್ರೀಗಳು ಯಾವುದೇ ಸಮಾರಂಭದಲ್ಲಿಯೂ ಬಳಸುವುದಿಲ್ಲ. ಬದಲಾಗಿ ಯಾವುದೇ ಕಾರ್ಯಕ್ರಮಗಳಿಗೆ ತೆರಳಿದರೂ ಶ್ರೀಮಠದಿಂದಲೇ ಸಿಂಹಾಸನವನ್ನು ಕೊಂಡೊಯ್ಯಲಾಗುತ್ತದೆ.  "ಶ್ರೀಗಳು ಕಾರ್ಯಕ್ರಮದಲ್ಲಿ ಯಾವುದೇ ಅನುಗ್ರಹ ಭಾಷಣ ಮಾಡಿರುವುದಿಲ್ಲ. ಪುಷ್ಕರಣಿಗೆ ಮಂತ್ರಾಕ್ಷತೆ ಹಾಕಿ, ಗಂಗಾ ಪೂಜೆ ನೆರವೇರಿಸಿ ಸಮಾರಂಭ ನಡೆದ ಸ್ಥಳದಿಂದ ನಿರ್ಗಮಿಸಿದರು. ನಂತರದಲ್ಲಿ ಅಲ್ಲಿದ್ದ ಪುಷ್ಪಾಂಜಲಿ ಸ್ವಾಮಿಯವರಿಗೆ ವೇದಿಕೆ ಮೇಲೆ ಹತ್ತಿ ಬರಲಾಗದ್ದರಿಂದ ಅವರಿಗಾಗಿ ಮೇಲಿದ್ದ ಪೀಠವನ್ನು ಕೆಳಗೆ ಹಾಕಿ ಆಸನವನ್ನು ಕಲ್ಪಿಸಲಾಗಿದೆ" ಎಂದು ಶ್ರೀಮಠದ ಸಿಬ್ಬಂದಿಗಳು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com