ಭೋಪಾಲ್: ಮಧ್ಯಪ್ರದೇಶದಲ್ಲಿ ಸಾಲ ಭಾದೆಯಿಂದ ಕಳೆದ 24 ಗಂಟೆಯಲ್ಲಿ ಮೂವರು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದು, ಜೂನ್ 8ರಿಂದ ಇದುವರೆಗೆ ರಾಜ್ಯದಲ್ಲಿ ಒಟ್ಟು 15 ರೈತರು ಸಾವಿಗೆ ಶರಣಾಗಿದ್ದಾರೆ.
ಮುಖ್ಯಮಂತ್ರಿ ಶಿವಾರಾಜ್ ಸಿಂಗ್ ಚೌವ್ಹಾಣ್ ಅವರ ತವರು ಜಿಲ್ಲೆ ಸೆಹೋರೆಯಲ್ಲಿ ಒಬ್ಬ ರೈತ ಸೇರಿದಂತೆ ಸೋಮವಾರ ಒಟ್ಟು ಮೂವರು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಸೆಹೋರೆ ಜಿಲ್ಲೆಯ ಜಮುನಿಯಾ ಖುರ್ದ್ ಗ್ರಾಮದ 55 ವರ್ಷ ರೈತ ಬನ್ಸಿಲಾಲ್ ಮೀನಾ ಅವರು ಇಂದು ಬೆಳಗ್ಗೆ ತಮ್ಮ ಮನೆಯಲ್ಲಿ ಫ್ಯಾನ್ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಒಂಬತ್ತು ಎಕರೆ ಜಮೀನು ಹೊಂದಿದ್ದ ಮೀನಾ ಅವರು 11 ಲಕ್ಷ ರುಪಾಯಿ ಸಾಲ ಮಾಡಿದ್ದು, ಅದನ್ನು ತೀರಿಸಲಾಗದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಅವರ ಪುತ್ರ ಮನೋಜ್ ಅವರು ತಿಳಿಸಿದ್ದಾರೆ.
ನಿನ್ನೆ ವಿಧಿಶಾ ಜಿಲ್ಲೆಯ ಸಯರ್ ಬಮೋರ್ ಗ್ರಾಮದ 35 ವರ್ಷದ ರೈತ ಜಿವಾನ್ ಸಿಂಗ್ ಮೀನಾ ಅವರು ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರೆ, ನೀಮುಚ್ ಜಿಲ್ಲೆಯಲ್ಲಿ ಮತ್ತೊಬ್ಬ ರೈತ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮಧ್ಯಪ್ರದೇಶದಲ್ಲಿ ರೈತರು ಸಾಲ ಮನ್ನಾ ಮಾಡುವಂತೆ ಒತ್ತಾಯಿಸಿ ನಡೆಸಿದ್ದ ಹಿಂಸಾತ್ಮಾಕ ಪ್ರತಿಭಟನೆ ವೇಳೆ ಪೊಲೀಸರ ಗೋಲಿಬಾರ್ 6 ರೈತರು ಬಲಿಯಾಗಿದ್ದರು.