ನವದೆಹಲಿ: ಇದೇ ಜುಲೈ 1ರಿಂದ ದೇಶದಾದ್ಯಂತ ಏಕರೂಪದ ತೆರಿಗೆ ವ್ಯವಸ್ಥೆ "ಜಿಎಸ್ ಟಿ" ಮಸೂದೆ ಜಾರಿ ಹಿನ್ನೆಲೆಯಲ್ಲಿ ಜೂನ್ 30ರ ಮಧ್ಯರಾತ್ರಿಯಂದು ವಿಶೇಷ ಅಧಿವೇಶನ ಕರೆಯಲಾಗಿದೆ.
ಈ ಬಗ್ಗೆ ದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಕೇಂದ್ರ ಹಣಕಾಸು ಸಚಿವ ಅರುಣ್ ಜೆಟ್ಲಿ ಮಾಹಿತಿ ನೀಡಿದ್ದು, ಜೂನ್ 30ರಂದು ಮಧ್ಯರಾತ್ರಿ 11ರಿಂದ 12.10ರವರೆಗೆ ವಿಶೇಷ ಕಲಾಪ ಕರೆಯಲಾಗಿದ್ದು, ಜಿಎಸ್ಟಿ ಜಾರಿ ಸಂಬಂಧ ಚರ್ಚಿಸಲಾಗುತ್ತದೆ ಎಂದು ಹೇಳಿದ್ದಾರೆ. ಅಂತೆಯೇ ಅಂದಿನ ವಿಶೇಷ ಅಧಿವೇಶನದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಕಲಾಪದಲ್ಲಿ ಭಾಷಣ ಮಾಡಲಿದ್ದಾರೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಸಂಸತ್ ಭವನದ ಸೆಂಟ್ರಲ್ ಹಾಲ್ ನಲ್ಲಿ ಅಧಿವೇಶನ ನಡೆಯಲಿದೆ. ಎರಡೂ ಸದನದ ಸದಸ್ಯರು ಇದರಲ್ಲಿ ಪಾಲ್ಗೊಳ್ಳಲಿದ್ದಾರೆ. ಭಾರತಕ್ಕೆ ಆಗಸ್ಟ್ 15ರಂದು ಸ್ವಾತಂತ್ರ್ಯ ಬಂದ ಹಿನ್ನಲೆಯಲ್ಲಿ ಜಿಎಸ್ ಟಿ ಮಸೂದೆಯನ್ನು ಕೂಡ ಜೂನ್ ಅಂತ್ಯ ಮತ್ತು ಜುಲೈ ತಿಂಗಳ ಆರಂಭದಲ್ಲಿ ಜಾರಿಗೆ ತರಲು ವಿಶೇಷ ಅಧಿವೇಶನ ಕರೆಯಲಾಗಿದೆ ಎಂದು ಹೇಳಲಾಗುತ್ತಿದೆ.
ಏಕರೂಪದ ತೆರಿಗೆ ವ್ಯವಸ್ಛೆ ಜಿಎಸ್ ಟಿ ಜಾರಿಯಿಂದಾಗಿ ದೇಶದ ಸುಮಾರು 2 ಲಕ್ಷ ಕೋಟಿ ಆರ್ಥಿಕತೆಗೆ ಹೊಸ ರೂಪ ಪಡೆಯಲಿದೆ.
ಇನ್ನು ಕೇಂದ್ರ ಸರ್ಕಾರ ಬಲವಾಗಿ ಸಮರ್ಥಿಸಿಕೊಳ್ಳುತ್ತಿರುವ ಜಿಎಸ್ ಟಿ ಮಸೂದೆಯನ್ನು ಮೊದಲ ಬಾರಿಗೆ ಪ್ರಸ್ತಾಪಿಸಿದ್ದು, ಯುಪಿಎ ಸರ್ಕಾರ. ಅಂದಿನ ಹಣಕಾಸು ಸಚಿವರಾಗಿದ್ದ ಪ್ರಣಬ್ ಮುಖರ್ಜಿ ಅವರು ಏಕರೂಪ ತೆರಿಗೆ ವ್ಯವಸ್ಥೆ ಕುರಿತು ಪ್ರಸ್ತಾಪ ಮಾಡಿದ್ದರು. ಮಾಜಿ ಪ್ರಧಾನಿ ಮನ ಮೋಹನ್ ಸಿಂಗ್ ಅವರೂ ಕೂಡ ಜಿಎಸ್ ಟಿ ಜಾರಿಗೆ ಸಾಕಷ್ಟು ಚರ್ಚೆ ನಡೆಸಿದ್ದರು.
Advertisement