ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಶ್ರೀನಗರದ ನೌಹಟ್ಟಾದಲ್ಲಿರುವ ಜಮೀಯಾ ಮಸೀದಿ ಬಳಿ ಕರ್ತವ್ಯ ನಿರತ ಪೊಲೀಸ್ ಅಧಿಕಾರಿ ಮೇಲೆ ಉದ್ರಿಕ್ತ ಗುಂಪೊಂದು ದಾಳಿ ಮಾಡಿ ಹತ್ಯೆ ಮಾಡಿರುವ ಘಟನೆ ಶುಕ್ರವಾರ ನಡೆದಿದೆ.
ಮಧ್ಯರಾತ್ರಿ 12.30ರ ಸುಮಾರಿಗೆ ಮಸೀದಿ ಬಳಿ ಕರ್ತವ್ಯ ನಿರತ ಪೊಲೀಸ್ ಅಧಿಕಾರಿ ಮೊಹಮ್ಮದ್ ಆಯುಬ್ ಪಂಡಿತ್ ಎಂಬುವವರ ಮೇಲೆ ದಾಳಿ ನಡೆಸಲಾಗಿದೆ ಎಂದು ತಿಳಿದುಬಂದಿದೆ.
ಜಾಮಿಯಾ ಮಸೀದಿಯಲ್ಲಿ ರಂಜಾನ್ ಪ್ರಯುಕ್ತ ರಾತ್ರಿ ಪ್ರಾರ್ಥನೆ ಸಲ್ಲಿಸಲಾಗುತ್ತಿತ್ತು. ರಂಜಾನ್ ಪ್ರಾರ್ಥನೆ ಹಿನ್ನಲೆಯಲ್ಲಿ ಭದ್ರತೆಗಾಗಿ ಆಯುಬ್ ಪಂಡಿತ್ ಅವರು ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು. ಕರ್ತವ್ಯ ನಿರ್ವಹಿಸುತ್ತಿದ್ದ ಆಯುಬ್ ಅವರು ಮಸೀದಿಯ ಹೊರಭಾಗದಲ್ಲಿ ಫೋಟೋ ಕ್ಲಿಕ್ಕಿಸುತ್ತಿದ್ದರು. ಈ ವೇಳೆ ಪಂಡಿತ್ ಅವರ ಮೇಲೆ ಜನರು ಹಲ್ಲೆ ನಡೆಸಿದ್ದಾರೆ.
ಜನರು ಹಲ್ಲೆ ನಡೆಸಲು ಮುಂದಾಗುತ್ತಿದ್ದಂತೆಯೇ ಆಯುಬ್ ಅವರು ಸ್ವರಕ್ಷಣೆಗಾಗಿ ಪಿಸ್ತೂಲಿನಿಂದ ಗುಂಡು ಹಾರಿಸಿ, ಸ್ಥಳದಿಂದ ಓಡಲು ಯತ್ನಿಸಿದ್ದಾರೆ. ಆದರೆ, ಈ ವೇಳೆ ಉದ್ರಿಕ್ತ ಗುಂಪು ಅಧಿಕಾರಿಯ ಬೆನ್ನಟ್ಟಿ ಹೊಡೆದು ಹತ್ಯೆ ಮಾಡಿದ್ದಾರೆ.
ಆಯುಬ್ ಅವರು ಗುಂಡು ಹಾರಿಸಿದ್ದರಿಂದಾಗಿ ಮೂವರು ನಾಗರಿಕರಿಗೆ ಗಾಯಗಳಾಗಿವೆ ಎಂದು ತಿಳಿದುಬಂದಿದೆ.