ನವದೆಹಲಿ: ತಿಂಗಳ ಹಿಂದೆಯಷ್ಟೇ ಭಾರತ ಸೇರಿದಂತೆ ಜಗತ್ತಿನಾದ್ಯಂತ ಲಕ್ಷಾಂತರ ಕಂಪ್ಯೂಟರ್ ಗಳ ಮೇಲೆ ದಾಳಿ ಮಾಡಿದ್ದ ರಾನ್ಸಮ್ ವೇರ್ ದಾಳಿ ಈಗ ಮತ್ತೊಂದು ರೂಪದಲ್ಲಿ ದಾಳಿ ಮಾಡಿದೆ.
ಭಾರತದ ಮೇಲೂ ಪೆಟ್ಯಾ ರಾನ್ಸಮ್ವೇರ್ ಎಂಬ ಹೆಸರಿನ ವೈರಸ್ ದಾಳಿ ಮಾಡಿರುವ ಕುರಿತು ಮಾಹಿತಿಗಳ ಲಭ್ಯವಾಗುತ್ತಿದ್ದು, ಪ್ರಸ್ತುತ ಮುಂಬೈನ ಜವಾಹರ್ ಲಾಲ್ ನೆಹರು ಬಂದರು ಸಂಸ್ಥೆ ಮುಂಜಾಗ್ರತಾ ಕ್ರಮವಾಗಿ ತನ್ನ ಪ್ರಮುಖ ಘಟಕಗಳ ಕಾರ್ಯನಿರ್ವಹಣೆಯನ್ನು ಸ್ಥಗಿತಗೊಳಿಸಿದೆ. ಒಂದು ಘಟಕದಲ್ಲಿ ಮಾತ್ರ ಬಂದರು ಸಂಸ್ಥೆ ಕಾರ್ಯ ನಿರ್ವಹಿಸುತ್ತಿದೆ ಎಂದು ಹೇಳಲಾಗುತ್ತಿದ್ದು, ಬಂದರಿನ ಕಚೇರಿ ಮೇಲೆ ವೈರಸ್ ದಾಳಿಯಾಗಿದೆಯೇ ಅಥವಾ ಮುಂಜಾಗ್ರತಾ ಕ್ರಮವಾಗಿ ಸ್ಥಗಿತಗೊಳಿಸಲಾಗಿದೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.
ಪೆಟ್ಯಾ ಸೈಬರ್ ದಾಳಿಗೆ ಈಗಾಗಲೇ ಯೂರೋಪ್ ದೇಶಗಳ ಕಂಪ್ಯೂಟರ್ಗಳು ಹಾನಿಯಾಗಿದೆ. ಪೆಟ್ಯಾ ರಾನ್ಸಮ್ ವೇರ್ನ ಮೊದಲ ಅಟ್ಯಾಕ್ ಉಕ್ರೇನ್ ಮೇಲೆ ನಡೆದಿತ್ತು. ಈಗ ಜಗತ್ತಿನಾದ್ಯಂತ ಶರವೇಗದಲ್ಲಿ ಹರಡುತ್ತಿದೆ ಎಂದು ಸೈಬರ್ ತಜ್ಞರು ಮಾಹಿತಿ ನೀಡಿದ್ದಾರೆ. ಜಗತ್ತಿನಾದ್ಯಂತ ವೇಗವಾಗಿ ಹರಡುತ್ತಿರುವ ಪೆಟ್ಯಾ ರ್ಯಾನ್ಸಮ್ ವೇರ್ ವೈರಸ್ ಸದ್ಯಕ್ಕೆ ಭಾರತದ ಕಂಪ್ಯೂಟರ್ಗಳಲ್ಲಿ ಕಾಣಿಸಿಕೊಂಡಿಲ್ಲವಾದರೂ ಭಾರತವೂ ಹ್ಯಾಕರ್ ಗಳು ಟಾರ್ಗೆಟ್ ಆಗಿದೆ ಎಂದು ಸ್ವಿಜರ್ಲ್ಯಾಂಡ್ ಗುಪ್ತಚರ ಸಂಸ್ಥೆ ಎಚ್ಚರಿಸಿದೆ. ಇನ್ನು ಭಾರತದಲ್ಲಿ ಇಂತಹ ಯಾವುದೇ ಭೀತಿಯಿಲ್ಲ ಎಂದು ಸೈಬರ್ ಭದ್ರತಾ ಸಂಸ್ಥೆಯ ಮುಖ್ಯಸ್ಥ ಸಂಜಯ್ ಬಹ್ಲಾ ಹೇಳಿದ್ದಾರೆ.
Advertisement