ಕೇಂದ್ರ ಜಿಎಸ್ ಟಿ ಕುರಿತಂತೆ ಯಾವುದೇ ರೀತಿಯ ಗೊಂದಲಗಳು ಸೃಷ್ಟಿಯಾಗಬಾರದು, ತಮ್ಮ ಸಚಿವರುಗಳಿಗೆ ಹೆಚ್ಚಿನ ಮಾಹಿತಿ ನೀಡುವ ಸಲುವಾಗಿ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಕೆಲ ದಿನಗಳ ಹಿಂದಷ್ಟೇ ಕಾರ್ಯಾಗಾರವೊಂದನ್ನು ನಡೆಸಿದ್ದರು. ಜಿಎಸ್ ಟಿ ಬಗ್ಗೆ ಗೊಂದಲದಲ್ಲಿರುವ ಜನರಿಗೆ ಅದರ ಬಗ್ಗೆ ತಿಳಿ ಹೇಳಬೇಕೆಂದೂ ಸಚಿವರಿಗೆ ಹೇಳಿದ್ದರು.
ಜಿಎಸ್ ಟಿ ಬಗ್ಗೆ ಸ್ವತಃ ಮುಖ್ಯಮಂತ್ರಿಗಳೇ ಪಾಠ ಮಾಡಿದ್ದರೂ, ಉತ್ತರಪ್ರದೇಶ ಸಮಾಜ ಕಲ್ಯಾಣ, ಬುಡಕಟ್ಟು ವ್ಯವಹಾರದ ಸಚಿವ ರಾಮ್ ಪತಿ ಶಾಸ್ತ್ರಿಯವರಿಗೆ ಜಿಎಸ್ ಟಿ ಪದದ ಫುಲ್ ಫಾರ್ಮ್ ಏನೆಂಬುದೇ ಗೊತ್ತಿಲ್ಲ. ಜಿಎಸ್ ಟಿ ಬಗ್ಗೆ ಪೂರ್ಣ ಪದ ಏನೆಂದು ಪತ್ರಕರ್ತರು ಕೇಳಿದ ಪ್ರಶ್ನೆಗೆ ಶಾಸ್ತ್ರಿಯವರು ತಡಬಡಾಯಿಸಿದ್ದು, ಇದೀಗ ಸುದ್ದಿಗೆ ಗ್ರಾಸವಾಗಿದೆ.
ಪ್ರತಕರ್ತರು ಪ್ರಶ್ನೆ ಕೇಳುತ್ತಿದ್ದಂತೆಯೇ ಹಿಂದೆ ನಿಂತುಕೊಂಡಿದ್ದ ಕೆಲವರು ಸಚಿವರ ಸಹಾಯಕ್ಕೆ ಬಂದರಾದರೂ ಸಚಿವರಿಗೆ ಅದು ಅರ್ಥವಾಗಿಲ್ಲ. ನಂತರ ಸಾವರಿಸಿಕೊಂಡ ಸಚಿವ ಜಿಎಸ್ ಟಿ ಬಗ್ಗೆ ನನಗೆ ಗೊತ್ತಿದೆ. ಆದರೆ, ತಕ್ಷಣ ನೆನಪಿಗೆ ಬರುತ್ತಿಲ್ಲ ಎಂದಿದ್ದಾರೆ. ಜಿಎಸ್ ಟಿ ಬಗ್ಗೆ ಸಂಪೂರ್ಣ ಮಾಹಿತಿ ಪಡೆಯಲು ಎಲ್ಲಾ ದಾಖಲೆಗಳನ್ನೂ ಓದುತ್ತಿರುವುದಾಗಿ ಹೇಳಿ ಪೇಚಿಗೆ ಸಿಲುಕಿದ್ದಾರೆ.