ನವದೆಹಲಿ: ಮಹತ್ವದ ಘಟನೆಯೊಂದರಲ್ಲಿ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಜೆಎಸ್ ಖೆಹರ್ ಅವರು ಮದ್ಯದ ದೊರೆ ಉದ್ಯಮಿ ವಿಜಯ್ ಮಲ್ಯಾ ವಿರುದ್ಧ ಛಾಟಿ ಬೀಸಿದ್ದು, ಕೇವಲ 5 ಸೇರಿ ಕದ್ದವನಿಗೆ 1 ವರ್ಷ ಜೈಲಾದರೆ, ಸಾವಿರಾರು ಕೋಟಿ ರು. ಸಾಲ ಮಾಡಿ ವಿದೇಶದಲ್ಲಿರುವವರ ಕಥೆ ಏನು? ಎಂದು ಹೇಳಿದ್ದಾರೆ.
ತೆಲಂಗಾಣ ಮೂಲದ ವ್ಯಕ್ತಿಯೋರ್ವ ಕೇವಲ 5 ಸೀರೆಗಳನ್ನು ಕದ್ದು ಜೈಲು ಪಾಲಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಜೆಎಸ್ ಖೆಹರ್ ಅವರು ಪರೋಕ್ಷವಾಗಿ ಉದ್ಯಮಿ ವಿಜಯ್ ಮಲ್ಯಾಗೆ ಎಚ್ಚರಿಕೆ ನೀಡಿದ್ದಾರೆ. ವಿಜಯ್ ಮಲ್ಯಾ ಹೆಸರನ್ನು ಬಳಸದೇ ಅವರ ವಿರುದ್ಧ ಕಿಡಿಕಾರಿದ ನ್ಯಾಯಮೂರ್ತಿಗಳು, ಕೇವಲ 5 ಸೇರಿ ಕದ್ದವನಿಗೆ 1 ವರ್ಷ ಜೈಲಾದರೆ, ಸಾವಿರಾರು ಕೋಟಿ ರು. ಸಾಲ ಮಾಡಿ ವಿದೇಶದಲ್ಲಿರುವವರ ಕಥೆ ಏನು? ಎಂದು ಹೇಳಿದ್ದಾರೆ. ಆ ಮೂಲಕ ವಿಜಯ್ ಮಲ್ಯಾ ಯಾವುದೇ ಕಾರಣದಿಂದಲೂ ಕಾನೂನಿನಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂಬ ಖಡಕ್ ಎಚ್ಚರಿಕೆಯನ್ನೂ ನ್ಯಾಯಮೂರ್ತಿಗಳು ನೀಡಿದ್ದಾರೆ.
ತೆಲಂಗಾಣದ ಹೈದರಾಬಾದ್ ಮೂಲದ ಈಳಯ್ಯ ಎಂಬ ವ್ಯಕ್ತಿಯನ್ನು ಐದು ಸೀರೆಗಳನ್ನು ಕದ್ದ ಆರೋಪದ ಮೇರೆಗೆ ವರ್ಷದ ಹಿಂದೆ ಬಂಧಿಸಲಾಗಿತ್ತು. ಯಾವುದೇ ರೀತಿಯ ವಿಚಾರಣೆ ಇಲ್ಲದೇ ಆತನನ್ನು ಜೈಲಿಗೆ ಅಟ್ಟಲಾಗಿತ್ತು. ಪೊಲೀಸರ ಕ್ರಮವನ್ನು ಪ್ರಶ್ನಿಸಿದ್ದ ಈಳಯ್ಯ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದ. ಈಳಯ್ಯನ ಪರ ವಕೀಲರು ಈತ ವ್ಯಕ್ತಿ ಸೀರೆಗಳನ್ನು ಕದ್ದಿದ್ದಾನೆ ಎಂಬುದಕ್ಕೆ ಯಾವುದೇ ಸಾಕ್ಷ್ಯಾಧಾರಗಳಿಲ್ಲ. ಹೀಗಿದ್ದೂ ವಿಚಾರಣೆ ನಡೆಸದೇ, ನ್ಯಾಯಾಲಯಕ್ಕೆ ಹಾಜರು ಪಡಿಸದೇ ಆತನ ವಿರುದ್ಧ ಅಮಾನವೀಯವಾಗಿ ನಡೆದುಕೊಳ್ಳಲಾಗಿದೆ ಎಂದು ವಾದಿಸಿದರು.
ಇನ್ನು ಪ್ರಕರಣ ಸಂಬಂಧ ವಾದಿಸಿದ ತೆಲಂಗಾಣ ಸರ್ಕಾರದ ಪರ ವಕೀಲರು ಬಂಧನವನ್ನು ಸಮರ್ಥಿಸಿಕೊಳ್ಳುತ್ತಾ, ಈಳಯ್ಯನಂತೆಯೇ ಹಲವು ಸೀರೆ ಕಳ್ಳರ ಗ್ಯಾಂಗ್ ನಗರದಲ್ಲಿ ಕಾರ್ಯಪ್ರವೃತವಾಗಿದೆ. ಈ ಬಗ್ಗೆ ಹಲವು ಸೀರೆ ಅಂಗಡಿಗಳ ವ್ಯಾಪಾರಸ್ಥರು ದೂರು ನೀಡಿದ್ದರು. ಹೀಗಾಗಿ ಈಳಯ್ಯನನ್ನು ಬಂಧಿಸಲಾಗಿತ್ತು ಎಂದು ವಾದ ಮಂಡಿಸಿದರು.
ಉಭಯ ವಕೀಲರ ವಾದ ಆಲಿಸಿದ ನ್ಯಾಯಮೂರ್ತಿ ಜೆಎಸ್ ಖೆಹರ್ ಅವರು, ವಿಚಾರಣೆಯನ್ನು ಬುಧವಾರಕ್ಕೆ ಮುಂದೂಡಿದರು.
ಕಿಂಗ್ ಫಿಶರ್ ವಿಮಾನ ಸಂಸ್ಥೆಗಾಗಿ ವಿವಿಧ ಬ್ಯಾಂಕುಗಳಿಂದ ಸಾಲ ಪಡೆದು ಅದನ್ನು ಮರುಪಾವತಿ ಮಾಡಲಾಗದೇ ಉದ್ಯಮಿ ವಿಜಯ್ ಮಲ್ಯ ಲಂಡನ್ ನಲ್ಲಿ ಆಶ್ರಯ ಪಡೆದಿದ್ದು, ಬಂಧನ ಭೀತಿಯಿಂದ ಭಾರತಕ್ಕೆ ವಾಪಸ್ ಬರಲು ಹಿಂಜರಿಯುತ್ತಿದ್ದಾರೆ. ಮಲ್ಯಾ ವಿರುದ್ಧ ಸುಪ್ರೀಂ ಕೋರ್ಟ್ ಸಾಕಷ್ಟು ಕ್ರಮಗಳನ್ನು ಕೈಗೊಂಡಿದ್ದರೂ, ಮಲ್ಯಾ ಮಾತ್ರ ಭಾರತಕ್ಕೆ ವಾಪಸ್ ಬಂದು ವಿಚಾರಣೆ ಎದುರಿಸಲು ಹಿಂದೇಟು ಹಾಕುತ್ತಿದ್ದಾರೆ. ಇತ್ತೀಚೆಗಷ್ಟೇ ಈ ಬಗ್ಗೆ ಹೇಳಿಕೆ ನೀಡಿದ್ದ ಮಲ್ಯಾ ನನ್ನನ್ನು ಯುಕೆಯಿಂದ ಗಡಿಪಾರು ಮಾಡಿಸುವ ಅಥವಾ ಭಾರತಕ್ಕೆ ಬಲವಂತವಾಗಿ ಕರೆಸಿಕೊಳ್ಳುವ ಹಕ್ಕು ಭಾರತ ಸರ್ಕಾರಕ್ಕಿಲ್ಲ ಎಂದು ಹೇಳಿದ್ದರು.
Advertisement