ನವದೆಹಲಿ: ಹರ್ಯಾಣದ ಮಾನೇಸರ್ ನಲ್ಲಿ 5 ವರ್ಷಗಳ ಹಿಂದೆ ಮಾರುತಿ ಸುಜುಕಿ ಕಾರು ತಯಾರಿಕಾ ಘಟಕದಲ್ಲಿ ನಡೆದಿದ್ದ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾ ನ್ಯಾಯಾಲಯ ಶುಕ್ರವಾರ ತನ್ನ ಅಂತಿಮ ತೀರ್ಪು ಪ್ರಕಟಿಸಿದ್ದು, 31 ಜನರು ದೋಷಿಗಳು ಎಂದು ತೀರ್ಪು ನೀಡಿದೆ.
2012ರ ಜುಲೈ 18 ರಂದು ಸಂಭವಿಸಿದ ಘಟನೆಗೆ ಸಂಬಂಧಿಸಿದಂತೆ ಜಿಲ್ಲಾ ನ್ಯಾಯಾಲಯ ತನ್ನ ಅಂತಿಮ ತೀರ್ಪು ನೀಡಿದ್ದು, ಬಂಧಿತ 148 ಕಾರ್ಮಿಕರ ಪೈಕಿ 31 ಮಂದಿ ವಿರುದ್ಧ ಆರೋಪ ಸಾಭೀತಾದ ಹಿನ್ನಲೆಯಲ್ಲಿ ಅವರನ್ನು ಆರೋಪಿಗಳು ಎಂದು ಘೋಷಿಸಿ ಉಳಿದ 117 ಮಂದಿಯನ್ನು ಪ್ರಕರಣದಿಂದ ವಜಾಗೊಳಿಸಲಾಗಿದೆ. ಈ 31 ಮಂದಿಯ ಪೈಕಿ 13 ಮಂದಿ ವಿರುದ್ಧ ಐಪಿಸಿ ಸೆಕ್ಷನ್ 302ರ ಅಡಿಯ ಕೊಲೆ ಆರೋಪ ಸಾಭೀತಾಗಿದ್ದು, ಇತರೆ 18 ಮಂದಿ ವಿರುದ್ಧ ದೊಂಬಿ ಆರೋಪ ಸಾಬೀತಾಗಿದೆ.
2012ರಲ್ಲಿ ಸಂಸ್ಥೆ ಯಾವುದೇ ಮುನ್ಸೂಚನೆ ನೀಡದೇ ಏಕಾಏಕಿ 550 ಖಾಯಂ ಕಾರ್ಮಿಕರು ಮತ್ತು 1800 ಗುತ್ತಿಗೆ ಕಾರ್ಮಿಕರನ್ನು ತೆಗೆದು ಹಾಕಿದ್ದು, ಅಂದಿನ ಹಿಂಸಾಚಾರಕ್ಕೆ ಕಾರಣವಾಗಿತ್ತು. ಏಕಾಏಕಿ ಕಾರ್ಮಿಕರನ್ನು ವಜಾಗೊಳಿಸಿದ್ದನ್ನು ವಿರೋಧಿಸಿ ಮಾನೇಸರ್ ಘಟಕದಲ್ಲಿ 2012ರ ಜುಲೈ 18 ರಂದು ಪ್ರತಿಭಟನೆ ನಡೆಸಲಾಗುತ್ತಿತ್ತು. ಈ ವೇಳೆ ಕಾರ್ಮಿಕರು ಮತ್ತು ಆಡಳಿತ ಮಂಡಳಿಯ ಸದಸ್ಯರ ನಡುವೆ ಮಾತಿನ ಚಕಮಕಿ ನಡೆದು, ಏಕಾಏಕಿ ಹಿಂಸಾಚಾರ ಏರ್ಪಟ್ಟಿತ್ತು. ಉದ್ರಿಕ್ತ ಕಾರ್ಮಿಕರು ಮಾರಕಾಸ್ತ್ರಗಳಿಂದ ದಾಳಿ ಮಾಡಿ, ಕಂಪನಿಯ ಹಲವು ಭಾಗಗಳಿಗೆ ಬೆಂಕಿ ಹಚ್ಚಿದ್ದರು. ಅಂದಿನ ಗಲಭೆಯಲ್ಲಿ ಸಂಸ್ಥೆಯ ಮಾನವ ಸಂಪನ್ಮೂಲ ನಿರ್ವಹಣಾಧಿಕಾರಿ ಅವನೀಶ್ ಕುಮಾರ್ ದೇವ್ ಎಂಬುವವರು ಮೃತಪಟ್ಟಿದ್ದರು. ಅಲ್ಲದೆ 94 ಮಂದಿ ಮ್ಯಾನೇಜರ್ ಗಳು, ಸೂಪರ್ ವೈಸರ್ ಗಳು ಸೇರಿದಂತೆ ಹಲವು ಅಧಿಕಾರಿಗಳು ಗಾಯಗೊಂಡಿದ್ದರು. ಅಂತೆಯೇ 9 ಮಂದಿ ಪೊಲೀಸರು ಕೂಡ ಗಾಯಗೊಂಡಿದ್ದರು.
ಈ ಸಂಬಂಧ 148 ಕಾರ್ಮಿಕರ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು. ಅಂತೆಯೇ 139 ಜನರು ಜಾಮೀನು ಪಡೆದು ಹೊರ ಬಂದಿದ್ದರೆ, 9 ಕಾರ್ಮಿಕರು ಇನ್ನೂ ಜೈಲು ಶಿಕ್ಷೆ ಅನುಭವಿಸುತ್ತಿದ್ದಾರೆ.
Advertisement