ನವದೆಹಲಿ: ಸಂಭಾವ್ಯ ವಾಯುದಾಳಿಗಳಿಂದ ದೇಶದ ಪ್ರಮುಖ ಮೆಟ್ರೋ ನಗರಗಳನ್ನು ಸುರಕ್ಷಿತವಾಗಿಡಲು ಕ್ಷಿಪಣಿ ನಿರೋಧಕ ವ್ಯವಸ್ಥೆಯನ್ನು ನಿಯೋಜಿಸಲು ಡಿಆರ್ ಡಿಒ ನಿರ್ಧರಿಸಿದೆ.
ಸ್ವದೇಶಿ ನಿರ್ಮಿತ 2 ಕ್ಷಿಪಣಿ ನಿರೋಧಕ ವ್ಯವಸ್ಥೆಯ ಯಶಸ್ವೀ ಪ್ರಯೋಗದ ಬೆನ್ನಲ್ಲೇ ಭಾರತೀಯ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ ಡಿಆರ್ ಡಿಒ ದೇಶದ ಎಲ್ಲ ಮೆಟ್ರೋ ನಗರಗಳಲ್ಲೂ ಕ್ಷಿಪಣಿ ನಿರೋಧಕ ವ್ಯವಸ್ಥೆ ಕಣ್ಗಾವಲು ಹಾಕಲು ಮಹತ್ವದ ನಿರ್ಧಾರ ಕೈಗೊಂಡಿದೆ. ಗಡಿಯಲ್ಲಿನ ಆತಂಕದ ವಾತಾವರಣ ಹಾಗೂ ಭಯೋತ್ಪಾದನೆಯನ್ನು ಹತ್ತಿಕ್ಕುವ ನಿಟ್ಟಿನಲ್ಲಿ ಭಾರತ ಈ ಮಹತ್ವದ ನಿರ್ಧಾರ ಕೈಗೊಂಡಿದ್ದು, ಪ್ರಮುಖ ನಗರಗಳ ಮೇಲಿನ ಸಂಭಾವ್ಯ ವಾಯು ದಾಳಿಗಳನ್ನು ತಡೆಯಲು ಈ ಕ್ಷಿಪಣಿ ನಿರೋಧಕ ವ್ಯವಸ್ಥೆಯನ್ನು ನಿಯೋಜಿಸಲಾಗುತ್ತಿದೆ ಎಂದು ತಿಳಿದುಬಂದಿದೆ.
ಪ್ರಸ್ತುತ ಈ ವಿಚಾರದ ಬಗ್ಗೆ ಕೇಂದ್ರ ಸರ್ಕಾರ ಹಾಗೂ ಡಿಆರ್ ಡಿಒ ಅಧಿಕಾರಿಗಳು ನಿರಂತರ ಚರ್ಚೆಯಲ್ಲಿ ತೊಡಗಿದ್ದು, ಮುಂದಿನ ವರ್ಷದ ಹೊತ್ತಿಗೆ ದೇಶದ ಎಲ್ಲ ಮೆಟ್ರೋ ನಗರಗಳಲ್ಲೂ ಕ್ಷಿಪಣಿ ನಿರೋಧಕ ವ್ಯವಸ್ಥೆ ಕಾರ್ಯಾಚರಿಸುವ ಸಾಧ್ಯತೆ ಇದೆ. ಈ ವರ್ಷಾಂತ್ಯದ ಹೊತ್ತಿಗೆ ದೇಶದ ರಾಜಧಾನಿ ದೆಹಲಿಯಲ್ಲಿ ಮೊದಲು ಈ ವ್ಯವಸ್ಥೆಯನ್ನು ಅಳವಡಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಡಿಆರ್ ಡಿಒ ಈಗಾಗಲೇ 2 ಹಂತದ ಕ್ಷಿಪಣಿ ನಿರೋಧ ವ್ಯವಸ್ಥೆಯ ಪರೀಕ್ಷೆ ನಡೆಸಿದ್ದು, ಭೂ ವಾತವರಣದ ಒಳಗೆ ಮತ್ತು ಹೊರಗೆ ಈ ಕ್ಷಿಪಣಿ ನಿರೋಧಕ ವ್ಯವಸ್ಥೆ ಯಶಸ್ವಿಯಾಗಿ ಕಾರ್ಯಚರಣೆ ನಡೆಸಿತ್ತು. 2016ರಿಂದ ಈ ವರೆಗೂ ಇವುಗಳನ್ನು ಸುಮಾರು 13 ಬಾರಿ ಪರೀಕ್ಷೆಗೆ ಒಳಪಡಿಸಲಾಗಿದ್ದು, 13 ಬಾರಿಯೂ ಯಶಸ್ವಿಯಾಗಿದೆ ಎಂದು ಡಿಅರ್ ಡಿಒ ಅಧಿಕಾರಿಗಳು ತಿಳಿಸಿದ್ದಾರೆ.
ಕಳೆದ ಫೆಬ್ರವರಿ 11ರಂದು ಸ್ವದೇಶಿ ನಿರ್ಮಿತ ಪೃಥ್ವಿ ಕ್ಷಿಪಣಿ ವಾಹಕದ ಮೂಲಕ ಎದುರಾಳಿ ಕ್ಷಿಪಣಿಯನ್ನು ಧ್ವಂಸಗೊಳಿಸುವ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಲಾಗಿತ್ತು. ಇನ್ನು ಎಎಡಿ ಕ್ಷಿಪಣಿ ವ್ಯವಸ್ಥೆಯ ಮೂಲಕ ಕಡಿಮೆ ಎತ್ತರದಲ್ಲಿ ಎದುರಾಳಿ ಕ್ಷಿಪಣಿಯನ್ನು ಹೊಡೆದುರಳಿಸುವ ಪರೀಕ್ಷೆ ಕೂಡ ಯಶಸ್ವಿಯಾಗಿತ್ತು. ಕಳೆದ ಮಾರ್ಚ್ 1ರಂದು ಈ ಪರೀಕ್ಷೆ ನಡೆದಿದ್ದು, ಇದು ಕ್ಷಿಪಣಿ ನಿರೋಧಕ ವ್ಯವಸ್ಥೆಯ 9ನೇ ಪರೀಕ್ಷೆಯಾಗಿತ್ತು. ಹೀಗಾಗಿ ಈ ಕ್ಷಿಪಣಿ ವ್ಯವಸ್ಥೆಗಳನ್ನು ದೇಶದ ಎಲ್ಲ ಮೆಟ್ರೋ ನಗರಗಳಲ್ಲಿ ನಿಯೋಜಿಸಲು ಡಿಆರ್ ಡಿಒ ನಿರ್ಧರಿಸಿದೆ.
ಆರಂಭಿಕ ಹಂತವಾಗಿ ಮೊದಲು ರಾಜಧಾನಿ ದೆಹಲಿಯಲ್ಲಿ ನಿಯೋಜಿಸಲಾಗುತ್ತಿದ್ದು, ಬಳಿಕ ಮುಂಬೈ, ಚೆನ್ನೈ, ಕೋಲ್ಕತಾ, ಹೈದರಾಬಾದ್, ಬೆಂಗಳೂರು ಸೇರಿದಂತೆ ದೇಶ ವಿವಿದ ಮೆಟ್ರೋ ನಗರಗಳಲ್ಲಿ ನಿಯೋಜಿಸಲಾಗುತ್ತದೆ ಎಂದು ಡಿಆರ್ ಡಿಒ ಮೂಲಗಳು ತಿಳಿಸಿವೆ.
Advertisement