ಗುರುಗಳ ಮಾರ್ಗದರ್ಶನದಲ್ಲಿ ಸನಾತನ ಧರ್ಮದ ಗ್ರಂಥಗಳನ್ನು ಅಧ್ಯಯನ, ಗೋವುಗಳ ರಕ್ಷಣೆ ಮಾಡುವುದು ಸೇರಿದಂತೆ ತಮ್ಮ ಆಕರ್ಷಕ ವ್ಯಕ್ತಿತ್ವದಿಂದ ಕೆಲವೇ ವರ್ಷಗಳಲ್ಲಿ ಮಹಾಂತ್ ಅವೈದ್ಯನಾಥ್ ಅವರ ನೆಚ್ಚಿನ ಶಿಷ್ಯರಾದ ಅಜಯ್ ಸಿಂಗ್, ಯೋಗಿ ಆದಿತ್ಯನಾಥ್ ಎಂಬ ಹೆಸರಿನ ಮೂಲಕ ಗೋರಖ್ ಪುರದ ಗೋರಖ್ ನಾಥ್ ಮಠದ ಉತ್ತರಾಧಿಕಾರಿಯಾಗಿಯೂ ನೇಮಕಗೊಂಡರು. ತಮ್ಮ ಅವಧಿಯಲ್ಲಿ ಗೋರಖ್ ನಾಥ್ ಮಠದ ಮೂಲಕ ಅನೇಕ ಶಾಲಾ ಕಾಲೇಜುಗಳನ್ನು, ಆಸ್ಪತ್ರೆಗಳನ್ನು ಪ್ರಾರಂಭಿಸಿ ನಿರ್ವಹಿಸುವ ಮೂಲಕ ಅನೇಕ ಜನಪರ ಕೆಲಸಗಳನ್ನು ಮಾಡಲು ಪ್ರಾರಂಭಿಸಿದ ಯೋಗಿ ಆದಿತ್ಯನಾಥ್ ಅವರಿಗೆ ರಾಜಕೀಯದ ಗೀಳು ಹತ್ತಿದ್ದು 1996 ರಲ್ಲಿ. ಯೋಗಿ ಆದಿತ್ಯನಾಥ್ ಅವರ ಗುರುಗಳಾಗಿದ್ದ ಮಹಾಂತ್ ಅವೈದ್ಯನಾಥ್ ಸಹ ರಾಜಕೀಯದಲ್ಲಿಯೇ ಇದ್ದವರಾದ್ದರಿಂದ ಉತ್ತರಾಧಿಕಾರಿಯಾದ ಯೋಗಿ ಆದಿತ್ಯನಾಥ್ ಅವರಿಗೆ ಗುರುಗಳ ಚುನಾವಣಾ ಪ್ರಚಾರದ ಉಸ್ತುವಾರಿಯನ್ನು ನೋಡಿಕೊಳ್ಳುವ ಜವಾಬ್ದಾರಿಯೂ ಸಹಜವಾಗಿಯೇ ಹೆಗಲೇರಿತ್ತು.