ಏರ್ ಇಂಡಿಯಾ ಸಿಬ್ಬಂದಿಗೆ ಹೊಡೆದಿದ್ದಾಗಿ ಒಪ್ಪಿಕೊಂಡ ಶಿವಸೇನಾ ಸಂಸದ ರವೀಂದ್ರ ಗಾಯಕ್ ವಾಡ್

ವಿಮಾನದಲ್ಲಿ ಸೀಟಿನ ವಿಷಯದಲ್ಲಿ ಚಪ್ಪಲಿಯಿಂದ ಏರ್ ಇಂಡಿಯಾ ಸಿಬ್ಬಂದಿಗೆ ಹೊಡೆದಿರುವುದಾಗಿ...
ಶಿವಸೇನಾ ಸಂಸದ ರವೀಂದ್ರ ಗಾಯಕ್ ವಾಡ್
ಶಿವಸೇನಾ ಸಂಸದ ರವೀಂದ್ರ ಗಾಯಕ್ ವಾಡ್
ನವದೆಹಲಿ: ವಿಮಾನದಲ್ಲಿ ಸೀಟಿನ ವಿಷಯದಲ್ಲಿ ಚಪ್ಪಲಿಯಿಂದ ಏರ್ ಇಂಡಿಯಾ ಸಿಬ್ಬಂದಿಗೆ ಹೊಡೆದಿರುವುದಾಗಿ ಶಿವಸೇನಾ ಸಂಸದ ರವೀಂದ್ರ ಗಾಯಕ್ ವಾಡ್ ಒಪ್ಪಿಕೊಂಡಿದ್ದಾರೆ.
'' ಹೌದು, ನಾನು ಸಿಬ್ಬಂದಿಗೆ ಹೊಡೆದಿದ್ದೇನೆ. ಅವರ ಬೈಗುಳ, ನಿಂದನೆಯನ್ನೆಲ್ಲಾ ಕೇಳಿಕೊಂಡು ನಾನು ಸುಮ್ಮನೆ ಕೂರಲೇ? ನಾನು ಮತ್ತಿನ್ನೇನು ಮಾಡಬೇಕಾಗಿತ್ತು? ಆತನೇ ನನ್ನಲ್ಲಿ ಮೊದಲು ಅಸಭ್ಯವಾಗಿ ವರ್ತಿಸತೊಡಗಿದ'' ಎಂದು ಗಾಯಕ್ ವಾಡ್ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.
ವಿಮಾನದಲ್ಲಿನ ಆಸನದ ವಿಚಾರಕ್ಕೆ ಸಂಬಂಧಪಟ್ಟಂತೆ ನಾನು ಮೊದಲು ದೂರು ನೀಡಿದೆ. ಆದರೆ ನನ್ನ ಸಮಸ್ಯೆಯನ್ನು ಯಾರೂ ಆಲಿಸಲಿಲ್ಲ. ಅದಕ್ಕಾಗಿ ನಾನು ಅಂತಹ ಗಂಭೀರ ಕ್ರಮ ತೆಗೆದುಕೊಳ್ಳಬೇಕಾಯಿತು ಎಂದು ಹೇಳಿದರು.
ನಾನು ಸಂಸತ್ತಿನಲ್ಲಿ ವಿಮಾನ ಸಿಬ್ಬಂದಿಯ ದುರ್ವರ್ತನೆ ಬಗ್ಗೆ ದೂರು ನೀಡುತ್ತೇನೆ. ಅವರು ಕೂಡ ಎಲ್ಲಿ ಬೇಕಾದರೂ ದೂರು ಸಲ್ಲಿಸಲಿ, ನಾನು ಉತ್ತರಿಸಲು ಸಿದ್ಧನಿದ್ದೇನೆ ಎಂದು ಹೇಳಿದರು.
ಈ ಮಧ್ಯೆ ಸಂಸದ ಗಾಯಕ್ ವಾಡ್ ಅವರಿಂದ ಏಟು ತಿಂದ ಏರ್ ಇಂಡಿಯಾ ಸಿಬ್ಬಂದಿ ಸುಕುಮಾರ್, ಸಂಸದರು ತಮ್ಮ ಕನ್ನಡಕವನ್ನು ಒಡೆದು ಹಾಕಿದ್ದಾರೆ. ಕೆಟ್ಟ ಶಬ್ದಗಳಿಂದ ಬೈದಿದ್ದು ಎಲ್ಲ ಸಿಬ್ಬಂದಿ ಮುಂದೆ ನನ್ನನ್ನು ಅವಮಾನಿಸಿದರು ಎಂದು ಹೇಳಿದ್ದಾರೆ.
ನೀವು ಕೇಳುವ ಸೀಟು ಸಿಗಲು ಸಾಧ್ಯವಿಲ್ಲ ಎಂದು ಗಾಯಕ್ ವಾಡ್ ಅವರಿಗೆ ಹೇಳಿದಾಗ ಕೆಟ್ಟ ಶಬ್ದಗಳಿಂದ ನನ್ನನ್ನು ನಿಂದಿಸಲು ಆರಂಭಿಸಿದರು. ಕೆಟ್ಟ ಶಬ್ದಗಳನ್ನು ಪ್ರಯೋಗಿಸಿದರು. ನಮ್ಮನ್ನಾಳುವ ಸಂಸದರು ಇಂಥ ಕೆಟ್ಟ ಸಂಸ್ಕೃತಿ ತೋರಿಸಿದರೆ ದೇವರೇ ನಮ್ಮ ದೇಶವನ್ನು ಕಾಪಾಡಬೇಕು ಎಂದು ಏರ್ ಇಂಡಿಯಾ ಸಿಬ್ಬಂದಿ ಪ್ರತಿಕ್ರಿಯಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com