ನವದೆಹಲಿ: ದೆಹಲಿಯ ಸ್ಥಳೀಯ ಸಂಸ್ಥೆ ಚುನಾವಣೆಗೆ ಆಡಳಿತಾರೂಢ ಆಮ್ ಆದ್ಮಿ ಪಕ್ಷ ಸಿದ್ಧತೆ ನಡೆಸಿದ್ದು, ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಅಧಿಕಾರಕ್ಕೆ ಬಂದರೆ ಮನೆ ತೆರಿಗೆ ರದ್ದುಗೊಳಿಸುವುದಾಗಿ ಸಿಎಂ ಅರವಿಂದ್ ಕೇಜ್ರಿವಾಲ್ ಭರವಸೆ ನೀಡಿದ್ದಾರೆ.
ಅಧಿಕಾರಕ್ಕೆ ಬಂದರೆ ಎಲ್ಲಾ ಏರಿಯಾಗಳ ಮನೆ ತೆರಿಗೆಗಳನ್ನು ಸಂಪೂರ್ಣವಾಗಿ ರದ್ದುಗೊಳಿಸುವುದಾಗಿ ಕೇಜ್ರಿವಾಲ್ ಹೇಳಿದ್ದಾರೆ. ಎಲ್ಲಾ ರೀತಿಯ ಯೋಚನೆ ಮಾಡಿಯೇ ಈ ಭರವಸೆ ನೀಡುತ್ತಿರುವುದಾಗಿ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ. ವಿದ್ಯುತ್ ದರ ಇಳಿಕೆ ಮಾಡುವುದು ಸೇರಿದಂತೆ ಈ ಹಿಂದೆ ನೀಡಿದ್ದ ಬಹುತೇಕ ಭರವಸೆಗಳನ್ನು ಆಮ್ ಆದ್ಮಿ ಸರ್ಕಾರ ಈಡೇರಿಸಿದೆ. ಹಾಗೆಯೇ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಆಪ್ ಗೆದ್ದರೆ ಮನೆ ತೆರಿಗೆ ರದ್ದುಗೊಳಿಸುವ ಭರವಸೆಯನ್ನೂ ಈಡೇರಿಸಲಾಗುವುದು ಎಂದು ಕೇಜ್ರಿವಾಲ್ ಹೇಳಿದ್ದಾರೆ.
ದೆಹಲಿಯ 272 ವಾರ್ಡ್ ಗಳಿಗೆ ಏ.23 ರಂದು ಚುನಾವಣೆ ನಡೆಯಲಿದ್ದು ಏ.26 ರಂದು ಫಲಿತಾಂಶ ಪ್ರಕಟವಾಗಲಿದೆ.