ನವದೆಹಲಿ: ಯುದ್ಧ ಪೀಡಿತ ಪ್ರದೇಶ ದಕ್ಷಿಣ ಸುಡಾನ್ ನಲ್ಲಿ ಅಪಹಣರಕ್ಕೊಳಗಾಗಿದ್ದ ಇಬ್ಬರು ಭಾರತೀಯ ಇಂಜಿನಿಯರ್ ಗಳು ಭಾರತ ಸರ್ಕಾರ ಮಧ್ಯಸ್ಥಿಕೆಯೊಂದಿಗೆ ಶುಕ್ರವಾರ ಬಿಡುಗಡೆಗೊಂಡಿದ್ದಾರೆ.
ದಕ್ಷಿಣ ಸುಡಾನ್ ನಲ್ಲಿ ಬಂಡುಕೋರರು ಕಾರ್ಯನಿರತರಾಗಿದ್ದ ಇಬ್ಬರು ಭಾರತೀಯರನ್ನು ಅಪಹರಣ ಮಾಡಿದ್ದು, ಸುಷ್ಮಾ ಸ್ವರಾಜ್ ಅವರು ಕೂಡಲೇ ಸಹಾಯ ಮಾಡಬೇಕಿದೆ ಎಂದು ಈ ಹಿಂದೆ ದಾರ್ ಪೆಟ್ರೋಲಿಯಂ ಆಪರೇಟಿಂಗ್ ಕಂಪನಿಯ ಪ್ರೊಡಕ್ಷನ್ ಆಪರೇಟರ್ ಅಜಯ್ ರಾಜ ಎಂಬುವವರು ಟ್ವೀಟ್ ಮಾಡಿದ್ದರು.
ಇದಕ್ಕೆ ಕೂಡಲೇ ಸ್ಪಂದನೆ ನೀಡಿದ ಸುಷ್ಮಾ ಸ್ವರಾಜ್ ಅವರು ಮಧ್ಯಸ್ಥಿಕೆ ವಹಿಸಿ ಇಬ್ಬರು ಭಾರತೀಯರು ಬಿಡುಗಡೆಯಾಗುವಂತೆ ಮಾಡಿದ್ದಾರೆ.
ದಕ್ಷಿಣ ಸುಡಾನ್ ನಲ್ಲಿ ಅಪಹರಣಕ್ಕೀಡಾಗಿದ್ದ ಮಿಧುನ್ ಹಾಗೂ ಎಡ್ವರ್ಡ್ ಇಬ್ಬರು ಭಾರತೀಯರು ಬಿಡುಗಡೆಗೊಂಡಿದ್ದಾರೆಂಬುದನ್ನು ಹೇಳಲು ನನಗೆ ಸಂತಸವಾಗುತ್ತಿದೆ ಎಂದು ಸುಷ್ಮಾ ಸ್ವರಾಜ್ ಅವರು ಟ್ವೀಟ್ ಮಾಡಿದ್ದಾರೆ.
ಈ ಹಿನ್ನಲೆಯಲ್ಲಿ ಟ್ವಿಟರ್ ನಲ್ಲಿ ಪ್ರತಿಕ್ರಿಯೆ ನೀಡಿರುವ ಅಜಯ್ ರಾಜಾ ಅವರು, ಮಿಧುನ್ ಹಾಗೂ ಎಡ್ವರ್ಡ್ ಇಬ್ಬರೂ ನನ್ನ ಗೆಳೆಯರಾಗಿದ್ದರು. ಇಬ್ಬರೂ ಸುರಕ್ಷಿತರಾಗಿ ಹಿಂತಿರುಗಿ ಬಂದಿದ್ದಾರೆ. ನಿಮ್ಮ ಪರಿಶ್ರಮಕ್ಕೆ ಧನ್ಯವಾದಗಳು ಸುಷ್ಮಾ ಸ್ವರಾಜ್ ಮೇಡಂ ಎಂದು ಹೇಳಿದ್ದಾರೆ.