ಬುಲಂದಶಹಾರ್(ಉತ್ತರಪ್ರದೇಶ): ಮುಸ್ಲಿಂ ಯುವಕನೊಂದಿಗೆ ಹಿಂದು ಯುವತಿ ಓಡಿಹೋಗಲು ಸಹಾಯ ಮಾಡಿದ್ದ ಮುಸ್ಲಿಂ ವ್ಯಕ್ತಿಯನ್ನು ಹತ್ಯೆ ಮಾಡಿದ ಆರೋಪದ ಮೇಲೆ ಆರು ಹಿಂದು ಯುವ ವಾಹಿನಿ ಸದಸ್ಯರ ವಿರುದ್ಧ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.
ಕಳೆದ ವಾರ 22 ವರ್ಷದ ಯೂಸಫ್ ಎಂಬಾತ ಹಿಂದು ಯುವತಿಯೊಂದಿಗೆ ಪರಾರಿಯಾಗಿದ್ದು ಇದಕ್ಕೆ ನೆರವು ನೀಡಿದ್ದಾರೆ ಎಂದು ಭಾವಿಸಿ 59 ವರ್ಷದ ಗುಲಾಂ ಮೊಹಮ್ಮದ್ ಎಂಬುವರನ್ನು ಹತ್ಯೆ ಮಾಡಲಾಗಿತ್ತು. ಈ ಸಂಬಂಧ ಗುಲಾಂ ಪುತ್ರ ತಮ್ಮ ತಂದೆಯ ಹತ್ಯೆ ಹಿಂದೆ ಹಿಂದು ಯುವ ವಾಹಿನಿ ಸದಸ್ಯರ ಕೈವಾಡವಿದೆ ಎಂದು ಆರೋಪಿಸಿ ದೂರು ನೀಡಿದ್ದ.
ಗುಲಾಂ ಮೊಹಮ್ಮದ್ ಕೊಲೆ ಪ್ರಕರಣ ಸಂಬಂಧ ಸದ್ಯ ಆರು ಸದಸ್ಯರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದ್ದು, ತನಿಖೆ ಪ್ರಗತಿಯಲ್ಲಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಮನ್ ಸಿಂಗ್ ಚೌಹಾಣ್ ತಿಳಿಸಿದ್ದಾರೆ.
ವರದಿ ಪ್ರಕಾರ ಮುಸ್ಲಿಂ ಯುವಕನ ಜತೆ ಓಡಿಹೋಗಿರುವ ಯುವತಿ ಭಾರತೀಯ ಜನತಾ ಪಾರ್ಟಿ (ಬಿಜೆಪಿ) ಕಾರ್ಯಕರ್ತನ ಪುತ್ರಿ ಎಂದು ಹೇಳಲಾಗುತ್ತಿದೆ.