ದೇಶ
ಯೋಗಿ ಸರ್ಕಾರದಿಂದ 'ಅನ್ನಪೂರ್ಣ' ಆರಂಭ, 5 ರು. ಗೆ ಹೊಟ್ಟೆ ತುಂಬಾ ಊಟ
ತಮಿಳುನಾಡು ಮಾಜಿ ಮುಖ್ಯಮಂತ್ರಿ ದಿ.ಜಯಲಲಿತಾ ಅವರ ಅಮ್ಮ ಕ್ಯಾಂಟೀನ್ ಹಾಗೂ ಬೆಂಗಳೂರಿನಲ್ಲಿ ಆಗಸ್ಟ್ 15ರಿಂದ ಆರಂಭವಾಗುತ್ತಿರುವ....
ಲಖನೌ: ತಮಿಳುನಾಡು ಮಾಜಿ ಮುಖ್ಯಮಂತ್ರಿ ದಿ.ಜಯಲಲಿತಾ ಅವರ ಅಮ್ಮ ಕ್ಯಾಂಟೀನ್ ಹಾಗೂ ಬೆಂಗಳೂರಿನಲ್ಲಿ ಆಗಸ್ಟ್ 15ರಿಂದ ಆರಂಭವಾಗುತ್ತಿರುವ ಇಂದಿರಾ ಕ್ಯಾಂಟೀನ್ ಮಾದರಿಯಲ್ಲೇ ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ನೇತೃತ್ವದ ಬಿಜೆಪಿ ಸರ್ಕಾರ ಬಡವರಿಗೆ ಅತಿ ಕಡಿಮೆ ಬೆಲೆಯಲ್ಲಿ ಊಟ ಹಾಗೂ ತಿಂಡಿ ನೀಡಲು ಯೋಜನೆ ಸಿದ್ಧಪಡಿಸಿದೆ.
ಉತ್ತರ ಪ್ರದೇಶದಲ್ಲಿ ಯಾವ ಬಡವರೂ ಹಸಿವಿನಿಂದ ಬಳಲಬಾರದು ಎಂಬ ಉದ್ದೇಶದಿಂದ ಯೋಗಿ ಸರ್ಕಾರ ರಾಜ್ಯಾದ್ಯಂತ ಒಟ್ಟು 200 ಅನ್ನಪೂರ್ಣ ಕ್ಯಾಂಟೀನ್ ಗಳನ್ನು ಆರಂಭಿಸಲು ಯೋಜನೆ ಸಿದ್ಧಪಡಿಸಿದ್ದು, ಈ ಕ್ಯಾಂಟೀನ್ ನಲ್ಲಿ 5 ರುಪಾಯಿಗೆ ಹೊಟ್ಟೆ ತುಂಬಾ ಊಟ ಹಾಗೂ ಮೂರು ರುಪಾಯಿಗೆ ತಿಂಡಿ ನೀಡಲು ನಿರ್ಧರಿಸಲಾಗಿದೆ.
ಈ ಯೋಜನೆಯನ್ನು ಮುಖ್ಯಮಂತ್ರಿಗಳ ಕಚೇರಿ ಟ್ವೀಟರ್ ನಲ್ಲಿ ಪ್ರಕಟಿಸಿದ್ದು, ಅನ್ನಪೂರ್ಣ ಕ್ಯಾಂಟೀನ್ ನಲ್ಲಿ ಆಹಾರವನ್ನು ಯಾವುದೇ ಮಿತಿ ಇಲ್ಲದೆ ನೀಡುವುದಾಗಿ ತಿಳಿಸಿದೆ.
ಉಪಹಾರಕ್ಕೆ ಇಂಡ್ಲಿ, ಸಾಂಬಾರ್, ದಾಲಿಯಾ, ಅಂಬಲಿ, ಟೀ, ಪಕೋಡ ಇತರೆ ಸ್ನಾಕ್ಸ್ ಗಳನ್ನು ಮೂರು ರುಪಾಯಿಗೆ ನೀಡಲು ಹಾಗೂ ಊಟಕ್ಕೆ ಅನ್ನ, ಸಾರು, ರೋಟಿ ಮತ್ತು ತರಕಾರಿಯನ್ನು 5 ರುಪಾಯಿಗೆ ನೀಡಲು ಕರಡು ಯೋಜನೆ ಸಿದ್ಧವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಯೋಗಿ ಅಧಿತ್ಯನಾಥ್ ಅವರು ಅಧಿಕಾರಕ್ಕೆ ಬಂದ ಕೆಲವೇ ದಿನಗಳಲ್ಲಿ ಈ ಯೋಜನೆ ರೂಪುಗೊಂಡಿದ್ದು, ಇನ್ನು ಕೆಲವೇ ವಾರಗಳಲ್ಲಿ ಅನ್ನಪೂರ್ಣ ಕ್ಯಾಂಟೀನ್ ಆರಂಭವಾಗಲಿದೆ ಎನ್ನಲಾಗಿದೆ.