ಪಾಟ್ನಾ: ಬಿಜೆಪಿ ಹಾಗೂ ಆರ್ಎಸ್ಎಸ್ ನಾಯಕರ ಮನೆ ಮುಂದೆ ಹಸುಗಳನ್ನು ಕಟ್ಟಿ ಎಂದು ಹೇಳಿಕೆ ನೀಡಿದ್ದ ಬಿಹಾರ ಮಾಜಿ ಮುಖ್ಯಮಂತ್ರಿ ಹಾಗೂ ಆರ್ ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅವರ ವಿರುದ್ಧ ಶನಿವಾರ ಕೇಸ್ ದಾಖಲಿಸಲಾಗಿದೆ.
ವೈಶಾಲಿ ಜಿಲ್ಲೆಯ ಹಜಿಪುರ ನಿವಾಸಿ, ಬಿಜೆಪಿ ನಾಯಕ ಚಂದೇಶ್ವರ್ ಭಾರ್ತಿ ಅವರು ಲಾಲು ಪ್ರಸಾದ್ ವಿರುದ್ಧ ಕೇಸ್ ದಾಖಲಿಸಿದ್ದಾರೆ.
ಲಾಲು ಪ್ರಸಾದ್ ಯಾದವ್ ಅವರ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಿದ ಕೆಲವು ಆರ್ ಜೆಡಿ ಕಾರ್ಯಕರ್ತರು ಭಾರ್ತಿ ಅವರ ಮನೆ ಮುಂದೆ ಕಲವು ಹಸುಗಳನ್ನು ಕಟ್ಟಿದ್ದರು. ಇದಕ್ಕೆ ಲಾಲು ಪ್ರಸಾದ್ ಯಾದವ್ ಅವರೇ ಕಾರಣ. ಅವರು ಕಾರ್ಯಕರ್ತರಿಗೆ ಸೂಚಿಸಿದ ಹಿನ್ನೆಲೆಯಲ್ಲಿ ನಮ್ಮ ಮನೆ ಮುಂದೆ ಹಸು ಕಟ್ಟಲಾಗಿದೆ ಎಂದು ಆರೋಪಿಸಿ ಬಿಜೆಪಿ ನಾಯಕ ದೂರು ನೀಡಿದ್ದಾರೆ.
ನಲಂದಾದ ರಾಜಗಿರ್ ನಲ್ಲಿ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ್ದ ಲಾಲು, ಬಿಜೆಪಿಯ ನಕಲಿ ಗೋವು ಪ್ರೀತಿಯನ್ನು ಬಹಿರಂಗಪಡಿಸಲು ಆರ್ ಎಸ್ಎಸ್ ಹಾಗೂ ಬಿಜೆಪಿ ನಾಯಕರ ಮನೆ ಮುಂದೆ ಹಸುಗಳನ್ನು ಕಟ್ಟಿ ಎಂದು ಕರೆ ನೀಡಿದ್ದರು.