ನವದೆಹಲಿ: ದೆಹಲಿ ಮುಖ್ಯಮಂತ್ರಿ ಹಾಗೂ ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರ ವಿರುದ್ಧ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ದೆಹಲಿ ಜಲ ಸಚಿವ ಸ್ಥಾನದಿಂದ ವಜಾಗೊಂಡ ಆಪ್ ಶಾಸಕ ಕಪಿಲ್ ಮಿಶ್ರಾ ಮೇಲೆ ಬುಧವಾರ ದುಷ್ಕರ್ಮಿಯೊಬ್ಬ ಹಲ್ಲೆ ನಡೆಸಿದ್ದಾನೆ.
ಕಪಿಲ್ ಮಿಶ್ರಾ ಮೇಲೆ ಹಲ್ಲೆ ನಡೆಸಿದ ವ್ಯಕ್ತಿಯನ್ನು ಅಂಕಿತ್ ಭಾರದ್ವಜ್ ಎಂದು ಗುರುತಿಸಲಾಗಿದ್ದು, ದೆಹಲಿ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಕಪಿಲ್ ಮಿಶ್ರಾ ಅವರು ಇಂದು ದೆಹಲಿಯ ಸಿವಿಲ್ ಲೈನ್ಸ್ ನಲ್ಲಿರುವ ತಮ್ಮ ನಿವಾಸದಲ್ಲಿ ನಿರಶನ ನಡೆಸುತ್ತಿದ್ದ ವೇಳೆ ಅವರ ಬಳಿಗೆ ತೆರಳಿದ ಅಂಕಿತ್ ಭಾರದ್ವಜ್ ಇದ್ದಕ್ಕಿದ್ದಂತೆ ಹಲವು ಬಾರಿ ಮಾಜಿ ಸಚಿವನ ಮೇಲೆ ಹಲ್ಲೆ ನಡೆಸಿದ್ದಾರೆ.
ಅಂಕಿತ್ ಭಾರದ್ವಜ್ ತಾನು ಅರವಿಂದ್ ಕೇಜ್ರಿವಾಲ್ ಅವರ ಬೆಂಬಲಿಗ ಎಂದು ಹೇಳಿಕೊಂಡಿದ್ದಾನೆ. ಆದರೆ ಆಮ್ ಆದ್ಮಿ ಪಕ್ಷ ಭಾರದ್ವಜ್ ಬಿಜೆಪಿ ಯುವ ಘಟಕದ ಸದಸ್ಯ ಎಂಬುದು ಆತನ ಫೇಸ್ ಬುಕ್ ಪೇಜ್ ನಿಂದ ಸ್ಪಷ್ಟವಾಗಿದೆ ಎಂದಿದೆ.
ಕೇಜ್ರಿವಾಲ್ ಅವರ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡಿದ್ದ ಕಪಿಲ್ ಮಿಶ್ರಾ ಅವರು ಇಂದಿನಿಂದ ಆಮ್ ಆದ್ಮಿ ಪಕ್ಷದ ನಾಯಕರು ಈ ವರೆಗೂ ನಡೆಸಿದ್ದ ಅಂತರಾಷ್ಟ್ರೀಯ ಪ್ರವಾಸದ ಖರ್ಚು ವೆಚ್ಚಗಳ ಕುರಿತ ಮಾಹಿತಿಯನ್ನು ಬಹಿರಂಗಪಡಿಸುವಂತೆ ಆಗ್ರಹಿಸಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ.